ಚಿಕ್ಕಮಗಳೂರು : ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಗಾಯತ್ರಿ ಶಾಂತೇಗೌಡ ಅವರು ಬಿ.ಫಾರ್ಮ್ ನೊಂದಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು ಪಕ್ಷದ ನಾಯಕರು ಹಾಗೂ ಜಿಲ್ಲೆಯ ಮುಖಂಡರು ಒಮ್ಮತದ ತೀರ್ಮಾನದೊಂದಿಗೆ ಪರಿಷತ್ ಚುನಾವಣೆಗೆ ಆಯ್ಕೆ ಮಾಡಿದ್ದು ಎಲ್ಲಾ ಗ್ರಾಮ ಪಂಚಾಯಿತಿ, ಪಟ್ಟಣ ಹಾಗೂ ಪುರಸಭೆ ಸದಸ್ಯರ ಸಹಕಾರ, ಬೆಂಬಲದೊಂದಿಗೆ ಗೆಲುವು ಸಾಧಿಸುವುದಾಗಿ ತಿಳಿಸಿದರು.
ಬಿಜೆಪಿಯ ಪ್ರಾಣೇಶ್ ಅವರು ಗ್ರಾಮಪಂಚಾಯಿತಿಗಳಿಗೆ ಈ ಹಿಂದಿನ ಪರಿಷತ್ ಸದಸ್ಯರ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ಅವರ ೬ ವರ್ಷದ ಅಭಿವೃದ್ಧಿ ಕಾರ್ಯಕ್ಕೂ ನನ್ನ ಚುನಾಯಿತ ಅವಧಿಯ ಕಾಲದ ಅಭಿವೃದ್ಧಿಗೂ ಹೋಲಿಕೆ ಮಾಡಿ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ ಪಕ್ಷದ ಅಭ್ಯರ್ಥಿಯಾಗಿ ಗಾಯತ್ರಿ ಶಾಂತೇಗೌಡ ಅವರು ಬಿ.ಫಾರ್ಮ್ ನೊಂದಿಗೆ ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದು ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಸಂಕಲ್ಪ ಮಾಡಬೇಕು, ಇದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಕರೆ ನೀಡಿದರು.
ಮಾಜಿ ಶಾಸಕ ಕೆ.ಬಿ ಮಲ್ಲಿಕಾರ್ಜುನ್ ಮಾತನಾಡಿ ರಾಜ್ಯದಲ್ಲಿ ಪರಿಷತ್ ಚುನಾವಣೆ ಸೈದ್ದಾಂತಿಕ ಸಂಘರ್ಷದಂತೆ. ೭ ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ, ಜನರ, ರೈತರ, ಕಾರ್ಮಿಕರ ವಿರೋಧಿಯಾಗಿ ಕಾಯ್ದೆಗಳನ್ನು ಜಾರಿಗೊಳಿಸಿದೆ, ಇದೀಗ ರೈತರ ಒತ್ತಡಕ್ಕೆ ಮಣಿದು ಚುನಾವಣೆ ನಿಟ್ಟಿನಲ್ಲಿ ಕಾಯ್ದೆಗಳನ್ನು ವಾಪಸ್ ಪಡೆಯಲು ನಿರ್ಧರಿಸಿದೆ, ಈ ಚುನಾವಣೆ ಮುಂದಿನ ಭಾರತ ಭವಿಷ್ಯದ ದಿಕ್ಸೂಚಿಯಾಗಲಿದೆ ಎಂದರು. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಅತಿವೃಷ್ಟಿ, ಬೆಳೆಹಾನಿ ಸಂಭವಿಸಿದ್ದು ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡದೇ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವೆ ಮೋಟಮ್ಮ, ಮಾಜಿ ಶಾಸಕ ಎಸ್.ಎಂ.ನಾಗರಾಜ್ ಇದ್ದರು.
ಇದನ್ನೂ ಓದಿ:
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ನಿಂದ ಗಾಯತ್ರಿ ಶಾಂತೇಗೌಡ ಕಣಕ್ಕೆ
Discussion about this post