ಬೆಳಗಾವಿ: ಪತಿರಾಯ ತನ್ನ ಪತ್ನಿಯ ಮೇಲಿನ ಕೋಪದಿಂದಾಗಿ ಕೋರ್ಟ್ ಆವರಣದಲ್ಲಿ ಮಚ್ಚಿನಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ಆಕೆ ಕಾಲನ್ನು ಕತ್ತರಿಸಿದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಸದರಿ ಹಲ್ಲೆ ಮಾಡಿರುವ ಆರೋಪಿಯನ್ನು ನನಗುಂಡಿಕೊಪ್ಪದ ನಿವಾಸಿ ನಿವೃತ್ತ ಸೈನಿಕ ಶಿವಪ್ಪ ಅಡಕಿ ಎಂದು ಗುರುತ್ತಿಸಲಾಗಿದೆ. 11 ವರ್ಷಗಳ ಹಿಂದೆ ಜಯಮಾಲಾ ಎಂಬವರನ್ನು ಮದುವೆಯಾಗಿದ್ದ ಶಿವಪ್ಪ ದಂಪತಿ ನಡುವೆ ಹಣಕಾಸಿನ ವಿಚಾರವಾಗಿ ಕಲಹ ಏರ್ಪಟ್ಟಿತ್ತು.
ಈ ಕಲಹ ನ್ಯಾಯಾಲಯದ ಮೆಟ್ಟಿಲೇರಿತ್ತು. ಇಂದು ವಿಚಾರಣೆ ಹಿನ್ನೆಲೆ ಪತ್ನಿ ಜಯಮಾಲಾ ಹಾಗೂ ಪತಿ ಶಿವಪ್ಪ ಕೋರ್ಟ್ಗೆ ಹಾಜರಾಗಿದ್ದರು. ಈ ವೇಳೆಯಲ್ಲಿ ಕೋರ್ಟ್ ಆವರಣದಲ್ಲಿ ನಿಂತಿದ್ದ ಪತ್ನಿಯ ಕಾಲನ್ನು ಶಿವಪ್ಪ ಮಚ್ಚಿನಿಂದ ಕತ್ತರಿಸಿದ್ದಾರೆ.
ಹಲ್ಲೆಯ ಬಳಿಕ ಜಯಮಾಲಾ ಸ್ಥಿತಿ ಗಂಭೀರವಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಯಮಾಲಾರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಶಿವಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

























Discussion about this post