ಶಿಕಾರಿಪುರ : ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ವೀರಶೈವ ಧರ್ಮ ಸಾಹಿತ್ಯಕ್ಕೆ ೨೮ ಶಿವಾಗಮಗಳೇ ಮೂಲ ಬೇರುಗಳೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಕಡೆನಂದಿಹಳ್ಳಿ ಕ್ಷೇತ್ರದಲ್ಲಿ ಜರಗುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮಾರಂಭದ ೫ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಧರ್ಮ ಅನ್ನುವುದು ಹಸಿದವನಿಗೆ ಅನ್ನ ಬಾಯಾರಿದವನಿಗೆ ನೀರು, ಕುರುಡನಿಗೆ ಕಣ್ಣು ಹಕ್ಕಿಗೆ ರೆಕ್ಕೆ ಇದ್ದ ಹಾಗೆ. ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ನಡೆಯುವುದೇ ನಿಜವಾದ ಧರ್ಮ. ಪರಿಶುದ್ಧವಾದ ಮತ್ತು ಪವಿತ್ರವಾದ ಜೀವನ ರೂಪಿತಗೊಳ್ಳಲು ಧರ್ಮ ಪ್ರಜ್ಞೆ ಅವಶ್ಯಕವಾಗಿದೆ. ವೀರಶೈವ ಧರ್ಮ ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಪ್ರಾಧಾನ್ಯತೆ ಕೊಟ್ಟಿದೆ. ಉಚ್ಛ ನೀಚ, ಬಡವ ಬಲ್ಲಿದ ಮತ್ತು ಗಂಡು ಹೆಣ್ಣು ಅನ್ನುವ ತಾರತಮ್ಯವಿಲ್ಲದೇ ಸರ್ವರ ಶ್ರೇಯೋಭಿವೃದ್ಧಿಗೆ ಮಾರ್ಗದರ್ಶನ ನೀಡಿದೆ. ಮನುಷ್ಯ ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮುಖ್ಯ. ಹೂದೋಟದೊಳಗೆ ಯಾರೇ ಹೋಗಲಿ ಹೂಗಳು ಸುಗಂಧವನ್ನೇ ಬೀರುತ್ತವೆ. ಹೂದೋಟದೊಳಗೆ ಹೋಗಿ ಬಂದ ನಂತರ ಮನುಷ್ಯ ಜೀವನ ಪರಿವರ್ತನೆಯಾಗಬೇಕು. ಮನೆಯ ಅಂಗಳದ ಕಸಗುಡಿಸಿ ಯಾರಾದರೂ ಹಸನಗೊಳಿಸಬಹುದು. ಆದರೆ ಮನದ ಅಂಗಳವನ್ನು ಶುಚಿಗೊಳಿಸುವುದು ಗುರುವಿನ ಆದ್ಯ ಕರ್ತವ್ಯವಾಗಿದೆ ಎಂದರು.
ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಮೇಘರಾಜ ಮಾತನಾಡಿ ವೀರಶೈವ ಧರ್ಮಕ್ಕೊಂದು ಇತಿಹಾಸವಿದೆ. ಸೈದ್ಧಾಂತಿಕ ತತ್ವತ್ರಯಗಳಿವೆ. ಸುಖ ಶಾಂತಿ ಮತ್ತು ಸಮೃದ್ಧ ಬದುಕಿಗೆ ಧರ್ಮಾಚಾರ್ಯರ ಕೊಡುಗೆ ಅಪಾರವಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮಾರಂಭ ಜನಮನದ ಮೇಲೆ ಅರಿವು ನೀಡಿ ಆದರ್ಶ ವ್ಯಕ್ತಿತ್ವ ರೂಪಿಸುತ್ತದೆ ಎಂದರು.
ಲಕ್ಷ್ಮೇಶ್ವರ ಕ.ಸಾ.ಪ. ತಾಲೂಕ ಘಟಕದ ಅಧ್ಯಕ್ಷೆ ಡಾ|| ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ ಇವರಿಗೆ ’ಸಾಹಿತ್ಯ ಸಿರಿ’ ಪ್ರಶಸ್ತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಪ್ರದಾನ ಮಾಡಿ ಶುಭ ಹಾರೈಸಿದರು. ಪ್ರಶಸ್ತಿ ಸ್ವೀಕರಿಸಿದ ಡಾ.ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ ಮಾತನಾಡಿ ಗುರು ಕಾರುಣ್ಯದ ಕೃಪಾ ಛತ್ರದಲ್ಲಿ ನಾನು ಮಾಡಿದ ಅಲ್ಪ ಸಾಹಿತ್ಯ ಸೇವೆಯನ್ನು ಗುರುತಿಸಿ ಪ್ರಶಸ್ತಿ ಅನುಗ್ರಹಿಸುತ್ತಿರುವುದು ನನ್ನ ಜೀವನದ ಸೌಭಾಗ್ಯವೆಂದು ಭಾವಿಸುವೆ. ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ ಎಂದರು.
ಕವಲೇದುರ್ಗ ಭುವನಗಿರಿಮಠದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮ ಸಾಹಿತ್ಯದ ಅರಿವು ತಿಳಿಯಲು ಎಲ್ಲರೂ ಮುಂದಾಗಬೇಕಾಗಿದೆ ಎಂದರು. ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು ಮತ್ತು ಚನ್ನಗಿರಿಯ ಕೇದಾರ ಶಿವಶಾಂತವೀರ ಶಿವಾಚಾರ್ಯರು, ನಿಡಗುಂದಿ ರುದ್ರಮುನಿ ಶಿವಾಚಾರ್ಯರು, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು, ಕೆ.ಎಸ್.ವೀರಪ್ಪದೇವರು ಮೊದಲ್ಗೊಂಡು ಹಲವಾರು ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಉಪದೇಶಾಮೃತ ನೀಡಿದರು. ಕಡೇನಂದಿಹಳ್ಳಿ ಪುಣ್ಯಾಶ್ರಮದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ ಈ ಅದ್ಭುತ ದಸರಾ ಧರ್ಮ ಸಮಾರಂಭದ ಯಶಸ್ಸಿಗೆ ಸಕಲ ಸದ್ಭಕ್ತರ ಸಹಕಾರ-ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಕಾರಣವೆಂದರು. ಗಂಜೀಗಟ್ಟಿ ಕೃಷ್ಣಮೂರ್ತಿ ತಮ್ಮ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.
ಹೊಸಳ್ಳಿಯ ಭರತ್ ಗು.ಚೀಲೂರು ಇವರು ಭರತ ನಾಟ್ಯ ಪ್ರದರ್ಶನ ನೀಡಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ನಡೆಯಿತು. ಕಡೇನಂದಿಹಳ್ಳಿಯ ಶಿಕ್ಷಕಿ ಕರಿಬಸಮ್ಮ ಸ್ವಾಗತಿಸಿದರು. ಗಾನಭೂಷಣ ವೀರೇಶ ಕಿತ್ತೂರ ಇವರಿಂದ ಸಂಗೀತ ಸೌರಭ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಸಮಾರಂಭದ ಕೊನೆಗೆ ಆಕರ್ಷಕ ನಜರ್(ಗೌರವ) ಸಮರ್ಪಣೆ ಜರುಗಿತು.
ಬೆಳಿಗ್ಗೆ ಲೋಕ ಕಲ್ಯಾಣಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಪೂಜಾ ನೆರವೇರಿಸಿ ಭಕ್ತ ಸಂಕುಲಕ್ಕೆ ಶುಭ ಹಾರೈಸಿದರು.

























Discussion about this post