ಬೆಂಗಳೂರು: ಸದನದಲ್ಲಿ ಮಹಿಳಾಪರ ಧ್ವನಿ ಎತಿದ ಸಿದ್ದರಾಮಯ್ಯ ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪೊಲೀಸರ ನಿರ್ಲಕ್ಷ ಧೋರಣೆ ಮತ್ತು ಗೃಹಸಚಿವರ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ತನಿಖೆ ಸಂಪೂರ್ಣವಾಗಿ ಹಾದಿ ತಪ್ಪಿದೆ. ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸದರಿ ಪ್ರಕರಣದ ಬಗ್ಗೆ ಪೊಲೀಸರು 60 ದಿನಗಳೊಳಗೆ ಆರೋಪ ಪಟ್ಟಿ ಸಲ್ಲಿಸಬೇಕು, ಐದು ತಿಂಗಳೊಳಗೆ ವಿಚಾರಣೆ ನಡೆದು ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ. ಇಂತಹಾ ಪ್ರಕರಣಗಳು ಮುಂದೆ ರಾಜ್ಯದಲ್ಲಿ ನಡೆಯದಂತೆ ಸಂಪೂರ್ಣ ಹೊಣೆಯನ್ನು ಗೃಹ ಸಚಿವರು ಹೊರಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಮೈಸೂರಿನಲ್ಲಿ ನಡೆದಿದ್ದ ಅತ್ಯಾಚಾರವನ್ನು ವೈದ್ಯೆ ದೃಢಪಡಿಸಿಕೊಂಡು, ಅದನ್ನು ಮೆಡಿಕಲಿ ಲೀಗಲ್ ಕೇಸ್ ಎಂದು ಪರಿಗಣಿಸಿ ರಾತ್ರಿ 10 ಗಂಟೆಗೆ ಪೊಲೀಸರಿಗೆ ವರದಿ ಕಳುಹಿಸಿದ್ದಾರೆ. ಮರುದಿನ ಮಧ್ಯಾಹ್ನ 12 ಗಂಟೆಗೆ ಅಂದರೆ 14 ಗಂಟೆಗಳ ನಂತರ ಎಫ್.ಐ.ಆರ್ ದಾಖಲಾಗಿದೆ. ಆದರೂ ಸಹ ಏಕೆ ಈ ವಿಳಂಬ? ಎಂದು ಸರ್ಕಾರದ ಕಿವಿಹಿಂಡಿದ್ದಾರೆ.
ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ಜೆ.ಎಸ್ ವರ್ಮ ಅವರ ನೇತೃತ್ವದ ಸಮಿತಿ ನೀಡಿದ್ದ ವರದಿಯ ಯಾವ ಅಂಶಗಳನ್ನು ಮೈಸೂರು ಪೊಲೀಸರು ಪಾಲಿಸಿಲ್ಲ. ನಿರ್ಭಯಾ ಪ್ರಕರಣದಷ್ಟೇ ಗಂಭೀರವಾದ ಘಟನೆಯನ್ನು ಪೊಲೀಸರು ಅತ್ಯಂತ ಲಘುವಾಗಿ ಪರಿಗಣಿಸಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ ಎಂದು ಪೊಲೀಸರ ಕ್ರಮವನ್ನು ಟೀಕಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಯುವತಿ ಮತ್ತು ಹಲ್ಲೆಗೊಳಗಾದ ಯುವಕನನ್ನು ಪೊಲೀಸರು ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ಬದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಯಾಕೆ? ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಕಾನೂನು ಸಲಹೆ ಹಾಗೂ ಆತ್ಮಸ್ಥೈರ್ಯ ನೀಡಲು ಸಾಂತ್ವನ ಕೇಂದ್ರಗಳಿರುವುದು ಗೊತ್ತಿದ್ದರೂ ಪೊಲೀಸರು ನಿರ್ಲಕ್ಷಿಸಿದ್ದು ಯಾಕೆ? ಎಂದು ಘಟನೆಯ ಸಂಬಂಧ ನಡೆದಿರುವ ಕ್ರಮಗಳನ್ನು ಪ್ರಶ್ನಿಸಿದರು.
ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ 27 ನೇ ತಾರೀಖು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದಾಳೆ. ಪೊಲೀಸರು ಘಟನೆಯ ಬಗ್ಗೆ ಯುವತಿಯ ಹೇಳಿಕೆಯನ್ನೇ ದಾಖಲಿಸಿಲ್ಲ. ಹೀಗಿರುವಾಗ ಪ್ರಕರಣ ನ್ಯಾಯಾಲಯದಲ್ಲಿ ಗಟ್ಟಿಯಾಗಿ ನಿಲ್ಲುವುದು ಹೇಗೆ? ಇದರ ಜೊತೆಗೆ ಅತ್ಯಾಚಾರಕ್ಕೆ ಸಂಬಂಧಿಸಿದಂತೆ FIR ದಾಖಲಾಗಿದೆ, ಆದರೆ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಪ್ರಕರಣದಲ್ಲಿ FIR ದಾಖಲಿಸಿಲ್ಲ. ಹಲ್ಲೆ ಕೂಡ ಕ್ರಿಮಿನಲ್ ಪ್ರಕರಣ, ಆತನಿಗೂ ನ್ಯಾಯ ಕೊಡಿಸಬೇಕಾದುದ್ದು ಪೊಲೀಸರ ಕರ್ತವ್ಯ ಅಲ್ಲವೇ? ಎಂದು ಕಿಡಿಕಾರಿದರು.
ಅತ್ಯಾಚಾರ ನಡೆದ ನಂತರ ಆಗಸ್ಟ್ 26 ರ ರಾತ್ರಿ ಮೈಸೂರಿಗೆ ಹೋಗಿದ್ದ ಗೃಹ ಸಚಿವರು ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿಲ್ಲ. ಮರುದಿನ ಬೆಳಿಗ್ಗೆ ಪೊಲೀಸ್ ಅಕಾಡೆಮಿಗೆ ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಸಂಜೆ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು. ಇದು ಗೃಹ ಸಚಿವರು ಈ ಪ್ರಕರಣಕ್ಕೆ ಕೊಟ್ಟ ಮಹತ್ವ ಎಂದು ಗೃಹಸಚಿವರ ನಡೆಯನ್ನು ಪ್ರಶ್ನಿಸಿದರು.
ಹಲ್ಲೆ ಮಾಡಿದವರ ಬಗ್ಗೆ ಯುವಕ ಪೊಲೀಸರಿಗೆ ಸಾಕಷ್ಟು ಮಾಹಿತಿ ನೀಡಿದ್ದ, ಕೃತ್ಯ ಎಸಗಿದವರನ್ನು ಪೊಲೀಸರು ಬಂಧಿಸಿದ ನಂತರ ಅವರನ್ನು ಗುರುತಿಸಲಿಕ್ಕಾಗಿ ಯುವಕ ಮತ್ತು ಯುವತಿಯ ಎದುರಿಗೆ ಆರೋಪಿಗಳ ಪೆರೇಡ್ ನಡೆಸಲಾಗಿದೆಯೇ? ಈ ಬಗ್ಗೆ ಸರ್ಕಾರ ಉತ್ತರಿಸಬೇಕೆಂದು ಆಗ್ರಹಿಸಿದರು.
ಈ ಅತ್ಯಾಚಾರ ಪ್ರಕರಣದ ಬಗ್ಗೆ ವರದಿ ನೀಡುವಂತೆ KPCC ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಮಾಜಿ ಸಂಸದರಾದ ಉಗ್ರಪ್ಪನವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯನ್ನು ರಚನೆ ಮಾಡಿದ್ದರು. ಈ ಸಮಿತಿ ಪಕ್ಷಕ್ಕೆ ವರದಿಯನ್ನು ನೀಡಿದೆ. ವರದಿಯಲ್ಲಿ ಪೊಲೀಸ್ ಇಲಾಖೆಯ ಕರ್ತವ್ಯ ಲೋಪದ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಸಹ ತಿಳಿಸಿದರು.
ನಾನು ಕೂಡ ಅತ್ಯಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದೆ. ಆ ಸ್ಥಳವೇನು ಅತ್ಯಂತ ನಿರ್ಜನ ಪ್ರದೇಶವೂ ಅಲ್ಲ ಮತ್ತು ದಟ್ಟವಾದ ಅರಣ್ಯವೂ ಅಲ್ಲ. ವರ್ತುಲ ರಸ್ತೆಗೆ ಕೂಗಳತೆ ದೂರದಲ್ಲಿರುವ ಸ್ಥಳ. ಇಂತಹಾ ಜನಸಂಚಾರದ ಸ್ಥಳದಲ್ಲಿ ಪೊಲೀಸ್ ಗಸ್ತು ಹಾಕದೆ ಇರುವುದು ಘಟನೆಗೆ ನೇರ ಕಾರಣ.ಅಲ್ಲದೆ, ಇದೇ ಪ್ರದೇಶದಲ್ಲಿ ಹಿಂದೆಯೂ ಇಂತಹಾ ಸಾಕಷ್ಟು ಘಟನೆಗಳು ಇಲ್ಲಿ ನಡೆದಿವೆ ಎಂದು ಪೊಲೀಸ್ ಕಮಿಷನರ್ ನನಗೆ ತಿಳಿಸಿದ್ದರು. ಕಾನೂನು ಬಾಹಿರ ಕೃತ್ಯಗಳು ಆ ಜಾಗದಲ್ಲಿ ಬಹಳ ಹಿಂದಿನಿಂದಲೂ ನಡೆಯುತ್ತಿರುವ ಮಾಹಿತಿ ಇದ್ದು, ಅದನ್ನು ನಿಲ್ಲಿಸಲು ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಂಡಿದೆ? ಎಂಬುದನ್ನು ಬಹಿರಂಗಪಡಿಸಲು ಕೇಳಿದರು.
ಅತ್ಯಾಚಾರ ನಡೆದ ಸ್ಥಳ ಆಲವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ. ಆಲವಳ್ಳಿ ಪೊಲೀಸ್ ಠಾಣೆಯಲ್ಲಿ 60 ಮಂದಿ ಸಿಬ್ಬಂದಿಗಳು, ಒಂದು ಗಸ್ತು ವಾಹನ ಇದ್ದ ಹೊರತಾಗಿಯೂ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗದೆ ಇರುವುದು ಅವರ ಕರ್ತವ್ಯಲೋಪವಲ್ಲದೆ ಇನ್ನೇನು ಇಲ್ಲಿ ಕೃತ್ಯ ನಡೆದ ಜಾಗದ ಸುತ್ತಮುತ್ತ ಒಟ್ಟು 545 ಎಕರೆ ಖಾಲಿ ಪ್ರದೇಶವಿದೆ. ಈ ಪ್ರದೇಶ ಯಾರಿಗೆ ಸೇರಿದ್ದು ಎಂಬುದು ಅಧಿಕಾರಿಗಳಿಗೆ ಗೊತ್ತಿಲ್ಲ. ಕಮಿಷನರ್ ಅವರನ್ನು ಕೇಳಿದರೆ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದೇವೆ, ಇನ್ನೂ ಉತ್ತರ ಬಂದಿಲ್ಲ ಎನ್ನುತ್ತಾರೆ. ಹೀಗಾದರೆ ಸಂತ್ರಸ್ತರಿಗೆ ನ್ಯಾಯ ಸಿಗೋದಾದರೂ ಹೇಗೆ? ಎಂದು ಸಂತ್ರಸ್ತರ ಪರ ವಾದ ಮಾಡಿದರು ಸಿದ್ದರಾಮಯ್ಯ.
ಕಳೆದ 30 ದಿನಗಳಲ್ಲಿ ಮೈಸೂರಿನಲ್ಲಿ 16 ಸುಲಿಗೆಗಳು, ಹತ್ತಾರು ಕೊಲೆಗಳು ನಡೆದಿದೆ, 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ, ಬ್ಯಾಂಕ್ ವೊಂದರ ದರೋಡೆ ಆಗಿದೆ, ಶೂಟೌಟ್ ನಡೆದು ಒಬ್ಬ ಸಾವಿಗೀಡಾಗಿದ್ದಾನೆ. ಇಷ್ಟೆಲ್ಲಾ ಅಪರಾಧಗಳು ನಡೆದರೂ ಪೊಲೀಸ್ ಇಲಾಖೆ ಇನ್ನೂ ಎಚ್ಚರಗೊಂಡಿಲ್ಲ. ಮೈಸೂರಿನಲ್ಲಿ ಆಗಸ್ಟ್ 24 ರಂದು ಎಂ.ಬಿ.ಎ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಐತಿಹಾಸಿಕ ಹಿನ್ನೆಲೆಯಿರುವ ಸಾಂಸ್ಕೃತಿಕ ನಗರದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದಿಂದ ವಿದ್ಯಾರ್ಥಿಗಳ ಭದ್ರತೆ, ಪೋಷಕರ ಆತಂಕ ಮತ್ತು ಪ್ರವಾಸೋದ್ಯಮದ ಮೇಲೆ ಬೀರುವ ಪರಿಣಾಮದ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕು ಎಂದು ಸಹ ವಿವರಣೆ ನೀಡಿದರು.
ಗೃಹ ಸಚಿವರು ಮಾಧ್ಯಮಗಳೆದುರು ಸಂತ್ರಸ್ತ ಯುವತಿ ಸಂಜೆ ಆ ಜಾಗಕ್ಕೆ ಹೋಗಿದ್ದೇ ತಪ್ಪು ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದರು. ಯಾಕೆ ಹುಡುಗಿಯರು ಸಂಜೆಯಾದ ಮೇಲೆ ಮನೆಯಿಂದ ಹೊರ ಬರಬಾರದಾ? ಗೃಹ ಸಚಿವರ ಈ ಹೇಳಿಕೆ ಪ್ರಕರಣದಲ್ಲಿ ತಪ್ಪು ಸಂತ್ರಸ್ತೆಯದು ಎಂದು ಹೇಳಿದ ಹಾಗೆ ಅಲ್ಲವಾ? ಹೊಣೆ ಉಳ್ಳ ಗೃಹಸಚಿವರು, ಅದನ್ನು ಮರೆತು ಅತ್ಯಾಚಾರಕ್ಕೊಳಗಾದ ಯುವತಿಯನ್ನೇ ದೂಷಿಸುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತೀರ್ಥಹಳ್ಳಿಯಲ್ಲಿ ನಂದಿತಾ ಎಂಬ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬ ದೂರು ದಾಖಲಾಗಿತ್ತು. ಈಗಿನ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಬೀದಿಗಿಳಿದು ಪ್ರತಿಭಟನೆ ಮಾಡಿ, ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿ ಜನರನ್ನು ಪ್ರಚೋದಿಸಿದ್ದರು ಎಂಬುದನ್ನು ನೆನಪಿಗೆ ತಂದುಕೊಂಡರು.
ನಂದಿತಾ ಪ್ರಕರಣದ ತನಿಖೆಯನ್ನು ನಾನು ಸಿ.ಐ.ಡಿ ಗೆ ವಹಿಸಿದೆ. ಸಿಐಡಿ ತನಿಖಾ ವರದಿಯಲ್ಲಿ ಹುಡುಗಿಯ ಮೇಲೆ ಅತ್ಯಾಚಾರ ಇಲ್ಲವೇ ಕೊಲೆ ಯತ್ನ ನಡೆದಿಲ್ಲ ಎಂದಿತ್ತು. ಹಾಗಾದರೆ ಸುಳ್ಳು ಆರೋಪ, ಪ್ರಚೋದನೆ ಮೂಲಕ ಹಲವು ದಿನಗಳ ಕಾಲ ರಾಜ್ಯದಲ್ಲಿ ಅಶಾಂತಿ ಉಂಟುಮಾಡಿದ್ದಕ್ಕೆ ಯಾರನ್ನು ಹೊಣೆಮಾಡಬೇಕು? ಈಗಿನ ಗೃಹ ಮಂತ್ರಿಗಳನ್ನೋ? ಎಂದು ಪ್ರಶ್ನಿಸಿದರು.
ಮೈಸೂರಿನಲ್ಲಿ ಎಂ.ಬಿ.ಎ ವಿದ್ಯಾರ್ಥಿನಿಯ ಅತ್ಯಾಚಾರ ನಡೆದ ದಿನವೇ ತುಮಕೂರು , ಯಾದಗಿರಿಯಲ್ಲಿ ಅತ್ಯಾಚಾರ ನಡೆಯಿತು. ಒಂದು ವಾರದೊಳಗೆ ಅಲ್ಲೇ ಪಕ್ಕದ ನಾಯ್ಡು ನಗರದಲ್ಲಿ ಇನ್ನೊಬ್ಬಳು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಯತ್ನ ನಡೆಯಿತು. ಮಹಿಳೆಯರ ಮೇಲಿನ ಇಂತಹಾ ಅತ್ಯಾಚಾರ, ದೌರ್ಜನ್ಯಗಳು ನಿಲ್ಲಬೇಕು ಎಂದು ಸದನದಲ್ಲಿ ಮಹಿಳಾಪರ ಧ್ವನಿ ಎತ್ತಿ ಗಂಟೆಗಳ ಕಾಲ ಪರಾಮರ್ಶೆ ನಡೆಸಿ ಸದಸ್ಯರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.
Discussion about this post