ಬೆಂಗಳೂರು: ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 13 ವರ್ಷದ ಹಿಂದೆ ಪಾಕಿಸ್ತಾನದ ಮೂಲದ ಲಷ್ಕರ್-ಎ-ತೊಯ್ಬಾದ (ಎಲ್ಇಟಿ) 10 ಉಗ್ರರು ನಡೆಸಿದ ದಾಳಿ ವೇಳೆ ಕೆಚ್ಚೆದೆಯ ಹೋರಾಟ ತೋರಿ ಹುತಾತ್ಮರಾದ ಎನ್ಎಸ್ಜಿ ಕಮಾಂಡೊದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರನ್ನು ಬೆಂಗಳೂರಿನಲ್ಲಿ ಮತ್ತು ಕರ್ನಾಟಕದಲ್ಲಿ ಇಂದು ಸ್ಮರಿಸಲಾಗುತ್ತಿದೆ.
ಯಲಹಂಕದ ನ್ಯೂ ಟೌನ್ನಲ್ಲಿ ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡಲಾಗಿದ್ದು, ಅಲ್ಲಿ ಅವರ ಭಾವಚಿತ್ರವಿಟ್ಟು ನಮನ ಸಲ್ಲಿಸಲಾಗಿದೆ. ಕನ್ನಮಂಗಲ ಸೇನಾ ಶಿಬಿರದಲ್ಲಿ ಸಂದೀಪ್ ಪುತ್ಥಳಿಯನ್ನು ಅನಾವರಣ ನ.28ರಂದು ಮಾಡಲಾಗುತ್ತಿದೆ. ಇದಲ್ಲದೆ ಆಟೋ ನಿಲ್ದಾಣಗಳು, ವೃತ್ತಗಳು, ಬಸ್ ತಂಗುದಾಣದಲ್ಲಿ ರಾಷ್ಟ್ರೀಯ ಹೀರೋ ಸ್ಮರಣೆ ನಡೆಯುತ್ತಿದೆ. ಫ್ಲೆಕ್ಸ್, ಪೋಸ್ಟರ್, ಬ್ಯಾನರ್ಗಳನ್ನು ಹಾಕಿ ಜನರು ಸಂದೀಪ್ಗೆ ಗೌರವ ಸಲ್ಲಿಸುತ್ತಿದ್ದಾರೆ.
‘ಸೇನೆ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಎದುರು ನೋಡುತ್ತಿದ್ದೇನೆ. ಅವನ ಕಂಚಿನ ಪುತ್ಥಳಿ ಸುಂದರವಾಗಿದ್ದು, ಭಾನುವಾರ ನಡೆಯುವ ಅನಾವರಣ ಸಮಾರಂಭದಲ್ಲಿ ಯೋಧರು, ಅಧಿಕಾರಿಗಳು ಇದರಲ್ಲಿ ಭಾಗಿಯಾಲಿದ್ದಾರೆ’ ಎಂದು ಸಂದೀಪ್ ಅವರ ತಂದೆ ಇಸ್ರೊ ನಿವೃತ್ತ ಅಧಿಕಾರಿ ಕೆ.ಉನ್ನಿಕೃಷ್ಣನ್ ಹೇಳಿದ್ದಾರೆ.
‘ ಮನೆಯ ಎರಡನೇ ಮಹಡಿಯಲ್ಲಿ ಸಣ್ಣ ಮ್ಯೂಸಿಯಂ ನಿರ್ಮಿಸಲಾಗಿದ್ದು, ಅಲ್ಲಿ ಅವನ ಸಮವಸ್ತ್ರ, ಅವನಿಗೆ ಸಂಬಂಧಿಸಿದ ಪರಿಕರಗಳನ್ನು ಇರಿಸಲಾಗಿದೆ. ಆದರೆ, ತಾತ್ಕಾಲಿಕವಾಗಿ ಜನರ ಪ್ರವೇಶವನ್ನು ನಿರ್ಬಂಧಿಸಿರುವೆ. ಇಲ್ಲಿಗೆ ಬರುವವರು ಫೋಟೋ ತೆಗೆಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ಇಂಥದ್ದು ನನಗೆ ಇಷ್ಟವಾಗುವುದಿಲ್ಲ ಎಂದು ಕೆ.ಉನ್ನಿಕೃಷ್ಣನ್ ತಿಳಿಸಿದ್ದಾರೆ.
‘ಅವನಿಗೆ ಕ್ರಿಕೆಟ್ ಅಚ್ಚುಮೆಚ್ಚು, ತೆಂಡೂಲ್ಕರ್ ಎಂದರೆ ಇಷ್ಟ. ಭಾರತ ಪಂದ್ಯ ಸೋತಾಗ ಬೇಸರ ಮಾಡಿಕೊಳ್ಳುತ್ತಿದ್ದ. ಸಮಾಧಾನ ಮಾಡುತ್ತಿದ್ದೆ. ಅದೇ ರೀತಿ ಇಸ್ರೋ ಮಿಷನ್ ವಿಫಲವಾದಾಗ ಅವನು ನನಗೆ ಸಮಾಧಾನ ಮಾಡುತ್ತಿದ್ದ. ಕಷ್ಟದಲ್ಲಿರುವವರಿಗೆ ನೆರವು ನೀಡುವುದು ಅವನ ಇನ್ನೊಂದು ಗುಣ. ನಮ್ಮ ಬದುಕಿಗೆ ಸಾಕಾಗುವಷ್ಟು ಸಂಪಾದನೆ ಇತ್ತು. ಹೀಗಾಗಿ ಅವನು ತನ್ನ ಸಂಬಳದ ಬಹುಪಾಲನ್ನು ದಾನ-ದತ್ತಿಗೆ ನೀಡುತ್ತಿದ್ದ’ ಎಂದು ಅವರು ಮಗನ ನೆನಪುಗಳನ್ನು ಸ್ಮರಿಸಿದ್ದಾರೆ.
2008ರ ನವೆಂಬರ್ 26ರಂದು ಮುಂಬೈಗೆ ಸಮುದ್ರ ಮಾರ್ಗದಲ್ಲಿ ನುಗ್ಗಿದ ಎಲ್ಇಟಿ ಉಗ್ರರು ತಾಜ್ ಹೋಟೆಲ್ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದರು. ಇದನ್ನು ಹಿಮ್ಮೆಟ್ಟಿಸಲು ರಾಷ್ಟ್ರೀಯ ಭದ್ರತಾ ದಳ (ಎನ್ಎಸ್ಜಿ) ಕಾಯರ್ಯಾರಚಣೆಗೆ ಇಳಿಯಿತು. ಈ ತಂಡದಲ್ಲಿದ್ದ 31 ವರ್ಷದ ಸಂದೀಪ್ ಉನ್ನಿಕೃಷ್ಣನ್ ಉಗ್ರರನ್ನು ಗುಂಡೇಟಿಗೆ ಸಾವನ್ನಪ್ಪಿದರು. ದೇಶಪ್ರೇಮದ ಪ್ರತೀಕವಾದ ಅವರು ಯುವ ಸಮುದಾಯಕ್ಕೆ ಸ್ಫೂರ್ತಿಯ ಸಂಕೇತವಾಗಿದ್ದಾರೆ. 2009ರ ಜನವರಿ 26ರಂದು ಸಂದೀಪ್ಗೆ ಮರಣೋತ್ತರವಾಗಿ ಅಶೋಕ ಚಕ್ರ ನೀಡ ಗೌರವಿಸಲಾಯಿತು. ಇದನ್ನು ಅವರ ತಂದೆ ಸ್ವೀಕರಿಸಿದರು.
Major Sandeep Unnikrishnan Remembered
ಇದನ್ನು ಓದಿ: ಏರ್ ಲಿಫ್ಟ್ ನಿಂದ ಭಾರತೀಯರ ಸುಖಾಗಮನ:ಭಾರತೀಯ ವಾಯುಸೇನೆ ಶ್ಲಾಘನೆ
ಇದನ್ನೂ ಓದಿ: ನೇತಾಜಿ ಸುಭಾಷ್ ಚಂದ್ರ ಬೋಸ್: ಮರೆಯಬಾರದ ಮಹಾನ್ ತೇಜಸ್ಸು!!!
Discussion about this post