ಬೆಂಗಳೂರು: ರಾಜ್ಯ ಸರ್ಕಾರವು ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರಗಳ ಪುನರ್ ವಿಂಗಡನೆಗೆ ಪ್ರತ್ಯೇಕ ಆಯೋಗ ರಚಿಸಲು ಯೋಚಿಸುವುದು ಚುನಾವಣಾ ಆಯೋಗದ ಅಧಿಕಾರ ಕಸಿಯುವ ಹುನ್ನಾರ ಎಂದು ಸದನದಲ್ಲಿ ಸಿದ್ದರಾಮಯ್ಯ ಗುಡುಗಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣಾ ಆಯೋಗಕ್ಕೆ ಈಗಾಗಲೇ ಹಲವರು ಪ್ರಶ್ನಿಸಿದ ಹಿನ್ನೇಲೆ, ತೀರ್ಪು ನೀಡುವ ಮುನ್ನವೇ ಈ ರೀತಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ತರಾತುರಿಯಲ್ಲಿ ಅನುಮೋದನೆ ಪಡೆಯಲು ವಿರೋಧ ಪಕ್ಷಗಳ ಮೇಲೆ ಒತ್ತಡೆ ಹೇರುವಿಕೆ ಸರಿಯಲ್ಲ ಎಂದು ಕಿಡಿ ಕಾರಿದರು.
ಚುನಾವಣೆ ಸಮೀಪಿಸುವ ಸಂದರ್ಭದಲ್ಲಿ, ಅದನ್ನು ಮುಂದೂಡುವ ದುರುದ್ದೇಶದಿಂದ ಇಂಥಹ ತಿದ್ದುಪಡಿ ತರಲಾಗುತ್ತಿದೆ ಎಂದು ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
೧೯೯೪ರಲ್ಲಿ ಜನತಾ ದಳದ ಸರ್ಕಾರ ಸಚಿವ ಸಂಪುಟ ಉಪಸಮಿತಿ ರಚನೆ ಮಾಡಿತ್ತು, ಆಗ ಎಂ.ಪಿ. ಪ್ರಕಾಶ್ ಆ ಸಂಪುಟ ಉಪಸಮಿತಿಯ ಅಧ್ಯಕ್ಷರಾಗಿಯೂ, ನಾನು ಸಮಿತಿಯ ಸದಸ್ಯರಲ್ಲೊಬ್ಬನಾಗಿದ್ದೆ. ನಾಣಯ್ಯ, ಬೈರೇಗೌಡ, ಸಿಂಧ್ಯಾ ಮೊದಲಾದವರು ಸಹ ಸದಸ್ಯರಾಗಿದ್ದರು. ಮಹಿಳೆಯರಿಗೆ ೩೩%, ಹಿಂದುಳಿದ ಜಾತಿಯವರಿಗೆ ೨೬.೪%, ಹಿಂದುಳಿದ ಜಾತಿ ಸೇರಿದವರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ೬.೬% ಮೀಸಲಾತಿ ನೀಡಬೇಕು ಎಂದು ಸಮಿತಿ ವರದಿ ಆಧರಿಸಿ ಪಂಚಾಯತ್ ರಾಜ್ ಚುನಾವಣೆಯಲ್ಲಿ ಮೀಸಲಾತಿ ಜಾರಿಯಾಯಿತು ಎಂದು ಸಿದ್ದರಾಮಯ್ಯನವರು ಪೂರ್ವಾಪರ ವಿವರಿಸಿದರು.
ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೂ ಪರಿಶಿಷ್ಟ ಜಾತಿ, ಪರಿಶಿಷ್ಟವರ್ಗ, ಹಿಂದುಳಿದ ವರ್ಗ ಹಾಗೂ ಮಹಿಳಾ ಮೀಸಲಾತಿ ನೀಡಬೇಕೆಂದು ಸಮಿತಿಯು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಪ್ರಕಾರ, ಸರ್ಕಾರ ಹುದ್ದೆಗಳಿಗೂ ಮೀಸಲಾತಿ ಸೌಲಭ್ಯ ನೀಡಿತು, ಅದಕ್ಕೆ ಮೊದಲು ಹುದ್ದೆಗಳಿಗೆ ಮೀಸಲಾತಿ ಇರಲಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಸಮ್ವಿಧಾನಕ್ಕೆ ೭೩, ೭೪ನೇ ತಿದ್ದುಪಡೆಯನ್ನು ತಂದು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಲಾಯ್ತು. ಆದ್ರೆ ಇದೇ ಮೀಸಲಾತಿಯನ್ನು ಬಿಜೆಪಿಯ ರಾಜ್ಯಸಭಾ ಸದಸ್ಯ ರಾಮಾ ಜೊಯ್ಸ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು, ಅವರೇ ಖುದ್ದು ವಾದ ಮಂಡಿಸಿದ್ದರೂ ಸಹ ನ್ಯಾಯಾಲಯ ಅದನ್ನು ತಿರಸ್ಕರಿಸಿ, ಮೀಸಲಾತಿ ಸೌಲಭ್ಯವನ್ನು ಎತ್ತಿಹಿಡಿದಿತ್ತು ಎಂದು ಅವರು ಐತಿಹಾಸಿಕ ಗೆಲುವನ್ನು ಕುರಿತು ವಿವರವಾಗಿ ಹೇಳಿದರು.
ನಂತರ ಕಾಂಗ್ರೆಸ್ ಪಕ್ಷ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ೫೦% ಮೀಸಲಾತಿ ನೀಡಬೇಕೆಂದು ಉದ್ದೇಶಿಸಿ ಸಂವಿಧಾನ ತಿದ್ದುಪಡಿ ಮಾಡಿ, ಕಾನೂನು ಜಾರಿಗೆ ತಂದಿದೆ, ಇದರಿಂದಾಗಿ ಮಹಿಳೆಯರಿಗೆ ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ೫೦% ಮೀಸಲಾತಿ ದೊರೆತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿ ಪಕ್ಷ ಮೊದಲಿನಿಂದಲೂ ಮೀಸಲಾತಿ ವಿರೋಧಿಯಾಗಿತ್ತು, ಈಗಲೂ ಸಹ ಮೀಸಲಾತಿ ವಿರೋಧಿಯಾಗೇ ಇದೆ. ಮೀಸಲಾತಿ ದುರ್ಬಳಕೆಗೆ ಹುನ್ನಾರ ಮಾಡಿದೆ, ಇದು ಸಂವಿದಾನದ ಮೇಲಿನ ದಾಳಿ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಈ ಕರಾಳ ಶಾಸನವನ್ನು ನಾನು ವಿರೋಧಿಸುತ್ತೇನೆ ಎಂದು ಘಂಟಾಘೋಷವಾಗಿ ಸಿದ್ದರಾಮಯ್ಯ ಬಹಿರಂಗಪಡಿಸಿದರು.
ಬಿಜೆಪಿ ಸರ್ಕಾರ ಕಾನೂನು ಜಾರಿ ನಿರ್ಧಾರದಿಮ್ದ ಹಿಂದೆ ಸರಿಯಬೇಕೆಂದು ಸಿದ್ದರಾಮಯ್ಯ ಸದನದಲ್ಲಿ ಆಗ್ರಹಿಸಿದರು.

























Discussion about this post