ನವದೆಹಲಿ: ಭಾರತ ಹಾಗೂ ಚೀನಾ ನಡುವಿನ ಗಡಿ ಒಪ್ಪಂದ ಪೂರ್ಣಗೊಳ್ಳುವವರೆಗೆ ಎಲ್ ಎಸಿ ಗಡಿ ಸಮಸ್ಯೆ ಮುಂದುವರೆಯಲಿದೆ ಎಂದು ಭೂಸೇನೆ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಹೇಳಿದ್ದಾರೆ.
ಗಡಿಯಲ್ಲಿ ಚೀನಾ ಎಸಗುವ ಎಲ್ಲಾ ಸವಾಲುಗಳನ್ನು ಭಾರತೀಯ ಸೇನೆ ದಿಟ್ಟವಾಗಿ ಎದುರಿಸಲಿದ್ದು, ಚೀನಾದ ಯಾವುದೇ ಕಾರ್ಯತಂತ್ರಗಳಿಗೂ ಪ್ರತ್ಯುತ್ತರ ನೀಡಲು ಸೇನೆ ಸಿದ್ಧವಾಗಿದೆ. ಭಾರತ-ಚೀನಾ ಗಡಿ ಒಪ್ಪಂದದ ಬಗ್ಗೆ ಸಂಪೂರ್ಣ ಒಪ್ಪಂದವಾಗಬೇಕು. ಅಲ್ಲಿಯವರೆಗೆ ಸಣ್ಣಪುಟ್ಟ ಘರ್ಷಣೆಗಳು ನಡೆಯುತ್ತಲೇ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳು ದೇಶಕ್ಕೆ ನಿಜವಾದ ಸವಾಲಾಗಿದ್ದು, ಆಗಾಗ ಪರಿಶೀಲನೆ, ಸಿದ್ಧತೆ ನಡೆಸಬೇಕಾಗಲಿದ್ದು, ಎಲ್ಲಾ ಸಂದರ್ಭದಲ್ಲೂ ಹೋರಾಡಲೂ ತಯಾರಾಗಿರುವುದು ಸೇನೆಯ ಕರ್ತವ್ಯ ಎಂದು ನರವಣೆ ಪುನರುಚ್ಛರಿಸಿದ್ದಾರೆ.
ಚೀನಾವು ಗಡಿ ಪ್ರದೇಶಗಳಲ್ಲಿ ನಿರಂತರವಾಗಿ ಯೋಧರ ನಿಯೋಜನೆ, ಶಸ್ತ್ರಾಸ್ತ್ರಗಳ ಜಮಾವಣೆ ಹೆಚ್ಚಿಸುತ್ತಿರುವ ನಡುವೆ ಸೂಕ್ತ ಕ್ರಮ ಕೈಗೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮುಂದಾಗಿದೆ ಎನ್ನಲಾಗಿದೆ.
ಇದೆಲ್ಲದರ ನಡುವೆ ಚೀನಾ ತನ್ನ ಬಲಾಬಲ ಪ್ರದರ್ಶನಕ್ಕೆ ಆಗಾಗ ಗಡಿಯಲ್ಲೇ ಶಸ್ತ್ರಾಸ್ತ್ರ ತಾಲೀಮು ನಡೆಸುತ್ತಲೇ ಇದೆ. ಚೀನಾಗೆ ಹೋಲಿಸಿದರೆ ಭಾರತದ ಸಾಮರ್ಥ್ಯ ಏನೆಂಬುದರ ಅರಿವು ಸಹ ಚೀನಾಗೆ ಇದೆ, ಆದರೂ ಸಹ ಗಡಿಯ ಸಮೀಪ ಭಾರಿ ಶಸ್ತ್ರಾಸ್ತ್ರ ತಾಲೀಮು ನಡೆಸುತ್ತಲೇ ಇರುತ್ತದೆ.
Discussion about this post