ಚಿಕ್ಕಮಗಳೂರು: ಸಮಾಜದಲ್ಲಿ ಹೆಚ್ಐವಿ ಸೋಂಕು ಪೀಡಿತರನ್ನು ಕೀಳರಿಮೆಯಿಂದ ಕಾಣದೆ ಸಮಾನತೆಯಿಂದ ಕಾಣಬೇಕು ಜತೆಗೆ ಸೋಂಕಿನ ತಡೆಗೆ ಗ್ರಾಮಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಸ್. ಸೋಮ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್.ಐ.ವಿ ಸೋಂಕಿತರಿಗೆ ತಾರತಮ್ಯ ಮಾಡದೆ ಸಮಾನತೆಯಿಂದ ಕಾಣಬೇಕು ಜತೆಗೆ ಏಡ್ಸ್ ರೋಗವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪ್ರತಿ ವರ್ಷ ಡಿಸೆಂಬರ್ ೧೦ ನ್ನು ವಿಶ್ವದೆಲ್ಲೆಡೆ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತಿದೆ, ಅಸುರಕ್ಷಿತ ಲೈಂಗಿಕತೆ, ಪರೀಕ್ಷಿಸದೆ ರಕ್ತ ಪಡೆಯುವ ಕಾರಣದಿಂದಾಗಿ ಹೆಚ್.ಐ.ವಿ ಸೋಂಕು ಹರಡಲಿದ್ದು ಈ ಬಗ್ಗೆ ಗ್ರಾಮಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿ ಅರಿವು ಮೂಡಿಸಬೇಕಿದೆ ಎಂದರು.
ಸಂವಿಧಾನ ಸಮಾಜದ ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕುಗಳನ್ನು ನೀಡಿದೆ. ಹೆಚ್.ಐ.ವಿ ಸೋಂಕಿತರು ಎಂಬ ಕಾರಣಕ್ಕೆ ಅವರನ್ನು ಅಸ್ಪಶ್ಯರಂತೆ ಕಾಣದೆ ಸಮಾನ ಗೌರವದಿಂದ ಕಾಣಬೇಕು. ಅವರ ಬಗ್ಗೆ ಕೀಳರಿಮೆ ತಾರತಮ್ಯ ಸಲ್ಲದು. ಮಾನವೀಯತೆ ದೃಷ್ಟಿಯಿಂದ ನೋಡಬೇಕು. ಕಾನೂನು ಸೇವಾ ಪ್ರಾಧಿಕಾರವು ಉಚಿತವಾಗಿ ಕಾನೂನು ಸಲಹೆ, ಆಪ್ತ ಸಮಾಲೋಚನೆ ಮೂಲಕ ನೆರವು ನೀಡಲಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿ ವ? ಡಿಸೆಂಬರ್ ೧ ರಂದು ವಿಶ್ವ ಏಡ್ಸ್ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ಸಾಮಾನ್ಯವಾಗಿ ೧೫ ರಿಂದ ೨೫ ವರ್ಷ ವಯೋಮಾನದವರಲ್ಲಿ ಹೆಚ್.ಐ.ವಿ ಸೋಂಕು ಪತ್ತೆಯಾಗಲಿದ್ದು ಅಸುರಕ್ಷಿತ ಲೈಂಗಿಕತೆ, ಪರೀಕ್ಷಿಸದೆ ರಕ್ತ ಪಡೆಯುವುದು, ಮತ್ತಿತರ ಕಾರಣದಿಂದಾಗಿ ಸೋಂಕು ಹರಡಲಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.
ಅಸಮಾನತೆಗಳನ್ನು ಕೊನೆಗಾಣಿಸಿ, ಏಡ್ಸ್ನ್ನು ಕೊನೆಗಾಣಿಸಿ, ಸಾಂಕ್ರಾಮಿಕ ರೋಗಗಳನ್ನು ಕೊನೆಗಾಣಿಸಿ ಎಂಬ ಧ್ಯೇಯವಾಕ್ಯದೊಂದಿಗೆ ಏಡ್ಸ್ ದಿನವನ್ನು ಆಚರರಿಸಲಾಗುತ್ತಿದೆ. ಏಡ್ಸ್ ರೋಗದ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರಿಂದ ಆಪ್ತ ಸಮಾಲೋಚನೆ ಪಡೆದುಕೊಳ್ಳುವಂತೆ ತಿಳಿಸಿದ ಅವರು ಸೋಂಕಿತರನ್ನು ಅಸ್ಪೃಶ್ಯರಂತೆ ಕಾಣದೆ ಸಮಾನ ದೃಷ್ಟಿಯಿಂದ ಕಾಣಬೇಕು, ಜತೆಗೆ ಈ ಬಗ್ಗೆ ಹೆಚ್ಚು ಜನಜಾಗೃತಿ ಮೂಡಿಸಿ ಸೋಂಕು ತಡೆಗಟ್ಟುವಲ್ಲಿ ಶ್ರಮಿಸಲಾಗುವುದು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ವಿ.ಟಿ. ಥಾಮಸ್ ಮಾತನಾಡಿ ಈ ಹಿಂದೆ ಏಡ್ಸ್ ಪೀಡಿತರನ್ನು ಅತ್ಯಂತ ನಿಕೃಷ್ಟವಾಗಿ ತಾರತಮ್ಯದಿಂದ ಕಾಣಲಾಗುತ್ತಿತ್ತು, ಇದೀಗ ಸೋಂಕು ನಿಯಂತ್ರಣಕ್ಕಾಗಿ ಔಷದಿ ಕಂಡು ಹಿಡಿಯಲಾಗಿದ್ದು ತಡೆಗೆ ಹಲವಾರು ವಿಧಧ ಅಭಿಯಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಏಡ್ಸ್ ಕುರಿತಾಗಿ ಗ್ರಾಮೀಣ ಭಾಗದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ಸರ್ಜನ್ ಡಾ. ಮೋಹನ್ ಮಾತನಾಡಿ ಹೆಚ್.ಐ.ವಿ ಸೋಂಕಿತರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಸಮಾಜದಲ್ಲಿ ಸೋಂಕು ಪೀಡಿತರನ್ನು ತಾರತಮ್ಯದಿಂದ ಕಾಣದೆ ಸಮಾನತೆಯಿಂದ ಕಾಣಬೇಕು.
ಶೇ ೪೦ ರಷ್ಟು ವಯಸ್ಕರಲ್ಲ್ಲಿ ಹೆಚ್.ಐ.ವಿ ಏಡ್ಸ್ ಸೋಂಕು ಕಂಡು ಬರುತ್ತಿದ್ದು ಸೋಂಕು ಬಾರದಂತೆ ತಡೆಯಲು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಪಾರ್ಶ್ವವಾಯು ಟಿ.ಬಿ. ಕಾಯಿಲೆ ಇತರೆ ಸಾಂಕ್ರಾಮಿಕ ರೋಗಗಳನ್ನು ಗುಣಪಡಿಸುವಂತೆ ಹೆಚ್.ಐ.ವಿ ಸೋಂಕು ಗುಣಪಡಿಸಲು ಹಲವು ವಿಧವಾದ ಉತೃಷ್ಟ ಔಷಧಿಗಳನ್ನು ಕಂಡು ಹಿಡಿಯಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಪ್ರಭುಕುಮಾರ್ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ಬಾಬು, ಆರ್.ಸಿ.ಹೆಚ್. ಡಾ.ಭರತ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದ ಕಾರ್ಯಾಕ್ರಮಾಧಿಕಾರಿ ಡಾ.ಬಾಲಕೃಷ್ಣ, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಸೀಮಾ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ. ಮಹೇಂದ್ರ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಗೀತಾ, ಇದ್ದರು. ಆಶಾ ಮೇಲ್ವಿಚಾರಕಿ ಜ್ಯೋತಿ ಸ್ವಾಗತಿಸಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಲಿತಾ ನಿರೂಪಿಸಿದರು. ಕಿರಣ್ಕುಮಾರ್ ವಂದಿಸಿದರು.
Create public awareness for hiv infection prevention
Discussion about this post