ವಿಶ್ವಸಂಸ್ಥೆ: ವಿಶ್ವಸಂಸ್ಥೆಯಿಂದ ನಿರ್ಬಂಧಕ್ಕೆ ಒಳಪಟ್ಟ ಅತಿ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರನ್ನು ಹೊಂದಿರುವ ಕುಖ್ಯಾತಿ ಪಾಕಿಸ್ತಾನಕ್ಕೆ ಇದೆ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾರತ ಪಾಕ್ ಗೆ ಬಹಿರಂಗ ಛೀಮಾರಿ ಹಾಕಿದೆ.
ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ಕುರಿತಾಗಿ ಉಲ್ಲೇಖಿಸಿದ್ದಕ್ಕೆ ನೆರೆಯ ದೇಶದ ವಿರುದ್ಧ ಭಾರತ ಹರಿಹಾಯ್ದಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಒಳಗೊಂಡ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಹಿಂದೆ, ಈಗ ಮತ್ತು ಎಂದೆಂದಿಗೂ ಭಾರತದ ಅವಿಭಾಜ್ಯ ಹಾಗೂ ಬೇರ್ಪಡಿಸಲಾಗದ ಭಾಗಗಳಾಗಿವೆ ಎಂದು ಮತ್ತೆ ಒತ್ತಿ ಹೇಳಿದೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧಿವೇಶನದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡುವಾಗ, ಭಯೋತ್ಪಾದಕರಿಗೆ ನೆಲೆ ಕಲ್ಪಿಸುವ, ಸಹಾಯ ಮಾಡುವ ಹಾಗೂ ಸಕ್ರಿಯವಾಗಿ ಬೆಂಬಲಿಸುವ ಇತಿಹಾಸ ಹಾಗೂ ನೀತಿಯನ್ನು ಪಾಕಿಸ್ತಾನ ಹೊಂದಿದೆ ಎಂದು ಬಲವಾಗಿ ಟೀಕಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜಾಗತಿಕ ಉಗ್ರರೆಂದು ನಿರ್ಬಂಧ ಹೇರಿದ ಭಯೋತ್ಪಾದಕರಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಉಗ್ರರನ್ನು ಹೊಂದಿರುವ ಅಪಖ್ಯಾತಿ ಪಾಕಿಸ್ತಾನಕ್ಕೆ ಇದೆ. ಒಸಾಮಾ ಬಿನ್ ಲ್ಯಾಡೆನ್ಗೆ ಪಾಕಿಸ್ತಾನ ಆಶ್ರಯ ನೀಡಿತ್ತು. ಇಂದಿಗೂ ಪಾಕಿಸ್ತಾನದ ನಾಯಕತ್ವ ಆತನನ್ನು ‘ಹುತಾತ್ಮ’ ಎಂದೇ ವೈಭವೀಕರಿಸುತ್ತಿದೆ’ ಎಂದು ಪ್ರಥಮ ಕಾರ್ಯದರ್ಶಿ ಸ್ನೇಹಾ ದುಬೆ ವಾಗ್ದಾಳಿ ನಡೆಸಿದರು.
ತನ್ನ ಹಿತ್ತಲಿನಲ್ಲಿ ಭಯೋತ್ಪಾದನೆ ಪೋಷಿಸುತ್ತಿರುವುದರಿಂದ, ತಾನೇ ಎಲ್ಲಾ ರೀತ ನಾಟಕ ಆಡ್ತಾ ಇದೆ.
ವಿಶ್ವಸಂಸ್ಥೆ ಒದಗಿಸಿರುವ ವೇದಿಕೆಯನ್ನು ಹಲವು ಬಾರಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಇದು ಮೊದಲ ಸಲವೇನಲ್ಲ ಎನ್ನುವುದು ಖೇದನೀಯ ಎಂದವರು ಹೇಳಿದರು.
ಭಯೋತ್ಪಾದಕರು ಮುಕ್ತ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವಾಗ, ಜನಸಾಮಾನ್ಯರು, ಅಲ್ಪಸಂಖ್ಯಾತ ಸಮುದಾಯದವರ ಜೀವನ ಶೋಚನೀಯವಾಗಿರುವ ಸಂದರ್ಭದಲ್ಲಿ ತನ್ನ ದೇಶದ ಹೀನಾಯ ಸ್ಥಿತಿಯಿಂದ ಜಗತ್ತಿನ ಗಮನವನ್ನು ಬೇರೆಡೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಸ್ನೇಹಾ ಟೀಕಿಸಿದರು.
Discussion about this post