ನಮ್ಮ ಸಮಾಜವನ್ನು ಬಾಧಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳಲ್ಲಿ ಪ್ರಮುಖವಾದ ಸಮಸ್ಯೆಯೆಂದರೆ ವೃದ್ಧರನ್ನು ಸಂವೇದನಾರಹಿತವಾಗಿ ನೋಡಿಕೊಳ್ಳುತ್ತಿರುವುದು, ನಡೆಸಿಕೊಳ್ಳುತ್ತಿರುವುದು. ತಾವು ಹೆತ್ತ ಮಕ್ಕಳೇ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡಾಗ ಆ ಹಿರಿಯ ಜೀವಗಳು ಅನುಭವಿಸುವ ಮಾನಸಿಕ ಯಾತನೆ ಊಹೆಗೂ ನಿಲುಕದ್ದು. ಹುಟ್ಟಿದಾರಭ್ಯ ಮಕ್ಕಳೇ ತಮ್ಮ ಸರ್ವಸ್ವವೆಂದು ಭಾವಿಸಿ ತಮ್ಮ ಸುಖ-ಸಂತೋಷಗಳನ್ನೂ ತ್ಯಾಗ ಮಾಡಿ ಸಾಕಿ ಸಲಹುವ ತಂದೆ-ತಾಯಿಯರು ಅನಿವಾರ್ಯವಾಗಿ ವೃದ್ಧಾಪ್ಯದಲ್ಲಿ ತಮ್ಮ ಮಕ್ಕಳನ್ನೇ ಅವಲಂಬಿಸಬೇಕಾಗುತ್ತದೆ. ಅಲ್ಲಿಯ ತನಕ ಪೋಷಕರ ಬೆಂಬಲದಲ್ಲೇ ಬೆಳೆದು, ವಿದ್ಯಾರ್ಜನೆ ಮಾಡಿ, ತಮ್ಮ ಬೇಕು-ಬೇಡಗಳನ್ನೆಲ್ಲಾ ಈಡೇರಿಸಿಕೊಳ್ಳುವ ಮಕ್ಕಳು ಒಮ್ಮೆ ತಾವು ಸ್ವಾವಲಂಬಿಗಳಾದ ಮೇಲೆ ಈ ಸ್ಥಿತಿಗೆ ಬರಲು ಕಾರಣರಾದ ಪೋಷಕರು, ಅವರು ತಮಗೆ ನೀಡಿದ ಬೆಂಬಲ ಎಲ್ಲವನ್ನೂ ಮರೆತುಬಿಡುತ್ತಾರೆ.
ಎಲ್ಲಿಯವರೆಗೂ ಪೋಷಕರು ಆರೋಗ್ಯವಾಗಿದ್ದು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಶಕ್ತರಾಗಿರತ್ತಾರೋ ಅಲ್ಲಿಯವರೆಗೆ ಹೆಚ್ಚಿನ ಸಮಸ್ಯೆ ಇರದು. ಒಂದೊಮ್ಮೆ ದುರದೃಷ್ಟವಶಾತ್ ಅನಾರೋಗ್ಯಪೀಡಿತರಾಗಿ ಹಾಸಿಗೆ ಹಿಡಿದುಬಿಟ್ಟರೆ ಕೆಲವೇ ದಿನಗಳಲ್ಲಿ ಮಕ್ಕಳ ತಾಳ್ಮೆ ಕಳೆದುಹೋಗುವ ಸಾಧ್ಯತೆಗಳೇ ಹೆಚ್ಚು. ತಾವು ಮಕ್ಕಳಾಗಿದ್ದಾಗ ವರ್ಷಾನುಗಟ್ಟಲೆ ಪೋಷಕರಿಂದ ಪಡೆದ ಸೇವೆ-ಸಹಾಯ ಎಲ್ಲಾ ಮರೆತು ಈ ಸಮಸ್ಯೆಯಿಂದ ಆದಷ್ಟು ಬೇಗ ಹೊರಬರುವ ದಾರಿ ಕುರಿತು ಯೋಚಿಸತೊಡಗುತ್ತಾರೆ. ಆಗ ಅವರಿಗೆ ಹೊಳೆಯುವ ಉಪಾಯವೇ ವೃದ್ಧಾಶ್ರಮಗಳು.
ಒಂದು ವೇಳೆ ಮದುವೆಯಾಗಿ ಮನೆಗೆ ಬಂದ ಸೊಸೆಯಂದಿರೂ ಇದೇ ಮನೋಭಾವದವರಾಗಿಬಿಟ್ಟರಂತೂ ಮುಗಿದೇ ಹೋಯಿತು, ವೃದ್ಧರ ಜೀವನ ನರಕಸದೃಶವಾಗಿಬಿಡುತ್ತದೆ.
ಪೋಷಕರೇನಾದರೂ ಆರ್ಥಿಕವಾಗಿ ಸಬಲರಾಗಿದ್ದರೆ, ಆಸ್ತಿವಂತರಾಗಿದ್ದರೆ ಹೆಚ್ಚಿನ ಸಮಸ್ಯೆಯಿರದು. ದುರದೃಷ್ಟದಿಂದ ಆರ್ಥಿಕವಾಗಿ ದುರ್ಬಲರಾದರೆ ಅವರದು ಅತ್ಯಂತ ದಯನೀಯ ಸ್ಥಿತಿ. ಎಷ್ಟೋ ಜನ ಸ್ಥಿತಿವಂತ ಮಕ್ಕಳೇ ತಮ್ಮ ತಾಯಿಯನ್ನೋ ಅಥವಾ ತಂದೆಯನ್ನೋ ತಮ್ಮದೇ ವಾಹನಗಳಲ್ಲಿ ಕರೆತಂದು ಕಾಣದ ಪ್ರದೇಶಗಳಲ್ಲಿ, ಪರಿಚಯವೇ ಇಲ್ಲದ ಊರುಗಳಲ್ಲಿ ಬಿಟ್ಟುಹೋಗಿರುವ ನಿದರ್ಶನಗಳು ಬೇಕಾದಷ್ಟಿವೆ, ಆಗಾಗ ವರದಿಯಾಗುತ್ತಿವೆ.
ವಿವಾಹ ಸಂದರ್ಭದಲ್ಲಿ ಕೆಲವೊಂದು ನಕ್ಷತ್ರಗಳಲ್ಲಿ ಜನಿಸಿದ ಹೆಣ್ಣುಮಕ್ಕಳಿಗೆ ಅತ್ತೆ/ಮಾವನಿಲ್ಲದ ಮನೆ ಹಾಗೂ ಭಾವ/ಮೈದುನರಿಲ್ಲದ ಮನೆ ಬೇಕೆಂದು ಹುಡುಕುವ ಕಾಲವೊಂದಿತ್ತು. ಆದರೆ, ಈಗ ತಮ್ಮ ಮಗಳನ್ನು ಅತ್ತೆ-ಮಾವಂದಿರಿಲ್ಲದ ಮನೆಗೆ ಮಾತ್ರ ಕೊಡುತ್ತೇವೆನ್ನುವವರೆಗೆ ಹೆಣ್ಣಿನ ಪೋಷಕರು ಬಂದಿರುವುದು ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿರುವ ವಿಚಾರ. ಪೋಷಕರಿಗೇ ಇಂತಹ ಮನೋಭಾವವಿದ್ದರೆ ಅವರು ಬೆಳೆಸಿದ ಹೆಣ್ಣುಮಕ್ಕಳಲ್ಲಿ ಇನ್ನೆಂಥ ಅಭಿಪ್ರಾಯವಿರುತ್ತದೆನ್ನುವುದನ್ನು ಊಹಿಸಲು ಹೆಚ್ಚೇನೂ ಕಷ್ಟ ಪಡಬೇಕಾಗಿಲ್ಲ. ಅತ್ತೆ-ಮಾವಂದಿರನ್ನೇ ತನ್ನ ತಂದೆ-ತಾಯಿಯಂತೆ ಭಾವಿಸಿ ಸಲಹುತ್ತಿದ್ದ, ಸಲಹುತ್ತಿರುವ ಹೆಣ್ಣುಮಕ್ಕಳು ಇಂದಿಗೂ ಬಹುತೇಕರು ನಮ್ಮಲ್ಲಿದ್ದಾರೆ.
ಉದಾತ್ತವಾದ ಭಾರತೀಯ ಸಂಸ್ಕೃತಿಯಲ್ಲಿ ತಂದೆ-ತಾಯಿಯರನ್ನು ದೈವಸಮಾನವೆಂದು ಭಾವಿಸಿ ಪೋಷಿಸುತ್ತಿದ್ದ ನಾವು ತಲುಪಿರುವ ಅಧೋಗತಿಗೆ ಇದು ಕನ್ನಡಿ ಹಿಡಿಯುವ ವಿಷಯ. ವಿದ್ಯಾವಂತರೂ, ಸ್ಥಿತಿವಂತರೂ, ಸಮಾಜದಲ್ಲಿ ಗಣ್ಯಸ್ಥಾನಗಳನ್ನು ಹೊಂದಿರುವವರೂ ಇಂತಹ ಕೃತ್ಯಗಳಲ್ಲಿ ತೊಡಗುತ್ತಿರುವುದು ಅತ್ಯಂತ ಶೋಚನೀಯ, ಖಂಡನೀಯ. ಅಂಧ ಮಾತಾಪಿತೃಗಳನ್ನು ಕಾವಡಿಯಲ್ಲಿ ಹೊತ್ತು ತೀರ್ಥಯಾತ್ರೆ ಮಾಡಿಸಿದ ಶ್ರವಣಕುಮಾರನಂಥ ಸಹೃದಯಿಗಳು ಜನಿಸಿದ ನಾಡು, ಸಂಸ್ಕೃತಿ ನಮ್ಮದು.
ನಮ್ಮನ್ನು ಹೆತ್ತು-ಹೊತ್ತು ಸಾಕಿ-ಸಲಹಲು ಅನೇಕ ಕಷ್ಟಗಳನ್ನು ನಗು-ನಗುತ್ತ ಎದುರಿಸಿ, ನಮ್ಮ ಸಂತೋಷಕ್ಕಾಗಿ ತಮ್ಮ ಸುಖ-ಸಂತೋಷಗಳನ್ನು ತ್ಯಾಗಮಾಡಿದ ನಮ್ಮ ಪೋಷಕರನ್ನು ಅವರ ಅಂತ್ಯಕಾಲದಲ್ಲಿ ಪ್ರೀತ್ಯಾದರಗಳಿಂದ ಹಾಗೂ ಅವರ ಗೌರವಕ್ಕೆ ಧಕ್ಕೆಬಾರದಂತೆ, ಮನಸ್ಸಿಗೆ ಘಾಸಿಯಾಗದಂತೆ ನೋಡಿಕೊಳ್ಳಬೇಕಾದದ್ದು ಮಕ್ಕಳಾಗಿ ನಮ್ಮ ಆದ್ಯ ಕರ್ತವ್ಯವಲ್ಲವೇ? ಅಷ್ಟೂ ಮಾನವೀಯತೆ ನಮ್ಮಲ್ಲಿಲ್ಲದಿದ್ದರೆ ನಮ್ಮ ಮನುಷ್ಯ ಜನ್ಮಕ್ಕೆ ಅರ್ಥವೆಲ್ಲಿದೆ? ಇನ್ನಾದರೂ ನಮ್ಮ ಜವಾಬ್ದಾರಿಯರಿತು ಮೃಗೀಯತೆ ತೊರೆದು ಹಿರಿಯ ಜೀವಗಳು ತಮ್ಮ ಅಂತಿಮ ದಿನಗಳನ್ನು ಸಂತೃಪ್ತಿಯಿಂದ ಕಳೆಯುವಂತೆ ಮಾಡುವುದೇ ನಮ್ಮ ಜೀವನದ ಗುರಿಯಾಗಬೇಕಲ್ಲವೇ?
how to care old-age people senior citizen
ಇದನ್ನೂ ಓದಿ: ಪೆರಿಯಾರ್ ರಾಮಸ್ವಾಮಿ ಜನ್ಮದಿನ;ಸಾಮಾಜಿಕ ನ್ಯಾಯದಿನ
ಇದನ್ನೂ ಓದಿ:ಧಾರ್ಮಿಕ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕೊಡುಗೆ ಅವಿಸ್ಮರಣೀಯ
Discussion about this post