ಎಲ್ಲವೂ ಪುನೀತ್ಗೆ ಮಾತ್ರ ಗೊತ್ತು…
ಪುನೀತ್ ಅವರನ್ನು ಕಳೆದುಕೊಂಡು 17 ದಿನ ಕಳೆದರೂ ನೋವು, ನೆನಪು ಇನ್ನೂ ಮರೆಮಾಚಿಲ್ಲ. ಪದೇ ಪದೆ ಪುನೀತ್ ಎಲ್ಲರನ್ನೂ ಕಾಡತೊಡಗಿದ್ದಾರೆ. ಕಿರಿಯ ವಯಸ್ಸಿನಲ್ಲಿ ಆದ ಆಘಾತಕ್ಕೆ ಇಡೀ ಚಿತ್ರರಂಗ ಮಮ್ಮಲ ಮರಗುತ್ತಲೇ ಇದೆ. ಈ ವಯಸ್ಸಲ್ಲಿ ಪುನೀತ್ ಅವರು ಸಾಯಲು ಯಾವ ಕಾರಣಗಳೂ ಇಲ್ಲ ಎಂದು ಆರೋಪಿಸಿರುವ ಅಭಿಮಾನಿಗಳು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರಂತೂ ಪೊಲೀಸ್ ಠಾಣೆಯಲ್ಲಿ ವೈದ್ಯರ ವಿರುದ್ಧ ದೂರು ದಾಖಲು ಕೂಡ ಮಾಡಿದ್ದಾರೆ.
ನಿಜವಾಗಿಯೂ ಪುನೀತ್ ಸಾವಿನ ಹಿಂದೆ ನಡೆದದ್ದಾರೂ ಏನು..
ಈ ಬಗ್ಗೆ ನಟ ಶಿವರಾಜ್ ಕುಮಾರ್ ಹೀಗೆನ್ನುತ್ತಾರೆ. ‘ಪುನೀತ್ ಸಾವಿನ ಬಗ್ಗೆ ಏನು ಹೇಳಬೇಕು ತಿಳಿಯುತ್ತಿಲ್ಲ. ಆವತ್ತು ಏನೇ ಆಗಿದ್ದರೂ ಅದು ಅವನಿಗೆ ಮತ್ತು ದೇವರಿಗೆ ಮಾತ್ರ ಗೊತ್ತಿರುತ್ತದೆ. ನಾವ್ಯಾರು ಅಲ್ಲಿ ಇರಲಿಲ್ಲ. ಹೀಗಾಗಿ, ನಾನು ಏನೇ ಹೇಳಿದರು ತಪ್ಪಾಗುತ್ತದೆ. ನೋವಿನ ವಿಚಾರ ಏನೆಂದರೆ, ದೇವರು ನನ್ನ ತಮ್ಮನನ್ನು ಉಳಿಸಿಕೊಳ್ಳಲು ಒಂದು ಅವಕಾಶವನ್ನಾದರೂ ಕೊಡಬೇಕಿತ್ತು.
ಆವತ್ತು, ಪುನೀತ್ ಪತ್ನಿ ಅಶ್ವಿನಿ ಕೂಡ ಬಹಳ ಗೊಂದಲಕ್ಕೆ ಒಳಗಾಗಿದ್ದರು. ಏನು ಮಾಡಬೇಕು ಅವರಿಗೂ ತೋಚದಾಗಿತ್ತು. ಅಲ್ಲಿ ಏನು ನಡೆಯಿತು ಅಂತ ವೈದ್ಯರಷ್ಟೇ ಹೇಳಬೇಕು. ಅವರ ಹೇಳಿಕೆಯನ್ನು ಮತ್ತೆ ನಾವು ಸರೀನಾ, ತಪ್ಪಾ ಮತ್ತೆ ಅನುಮಾನ ವ್ಯಕ್ತಪಡಿಸಬಾರದು. ಏಕೆಂದರೆ, ನಾವ್ಯಾರು ಆವತ್ತು ಅಲ್ಲಿ ಇರಲಿಲ್ಲ. ನಾವಿಲ್ಲದ, ನಾವು ಪ್ರತ್ಯಕ್ಷವಾಗಿ ನೋಡದೆ ಏನೇನೋ ಮಾತನಾಡುವುದು ಸರಿಯಲ್ಲ. ಮಾತನಾಡುವುದು ನಿಜಕ್ಕೂ ತಪ್ಪಾಗುತ್ತದೆ. ಹೀಗಾಗಿ, ಅಲ್ಲಿ ಏನೇ ಮಾಡಿರುವುದು ಅವರವರ ಮನಸ್ಸಾಕ್ಷಿಗೆ ಸರಿಯಾಗಿ ಗೊತ್ತಿರುತ್ತದೆ’ ಎಂದು ಶಿವಣ್ಣ ಹೇಳಿದರು.
ಇದನ್ನೂ ಓದಿ: ‘ನೆನಪಿನಲ್ಲಿ ನೀವೀಗ ಎಂದಿಗಿಂತ ಸನಿಹ’: ಪುನೀತ್ ರಾಜ್ಕುಮಾರ್ ಬಗ್ಗೆ ರಾಧಿಕಾ ಪಂಡಿತ್ ಭಾವುಕ ಸಂದೇಶ
Discussion about this post