ಬೆಂಗಳೂರು: ಪುನೀತ್ ರಾಜ್ಕುಮಾರ್ ಭಾವಚಿತ್ರದ ಎದುರು ಶಾಂಪೇನ್ ಬಾಟಲಿ ತೆರೆದು ‘ಏಕ್ ಲವ್ಯಾ’ ಚಿತ್ರದ ಹಾಡು ಬಿಡುಗಡೆ ಮಾಡಿರುವ ವಿಚಾರ ವಿವಾದಕ್ಕೀಡಾಗುತ್ತಿದ್ದಂತೆಯೇ ಸಿನಿಮಾ ನಾಯಕಿ ರಚಿತಾ ರಾಮ್ ಕ್ಷಮೆ ಯಾಚಿಸಿದ್ದಾರೆ. ‘ಅಪ್ಪು’ ಅವರನ್ನು ಅವಮಾನಿಸುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಅವರು ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
‘ನಿನ್ನೆ ಏಕ್ ಲವ್ಯಾ ಸಿನಿಮಾದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಅಪ್ಪು ಭಾವಚಿತ್ರದ ಎದುರು ಶಾಂಪೇನ್ ಬಾಟಲಿ ತೆರೆದು ಹಾಡು ಬಿಡುಗಡೆ ಮಾಡಿರುವುದರಿಂದ ನಿಮಗೆಲ್ಲರಿಗೆ ಅಸಮಾಧಾನವಾಗಿದೆ. ಆ ಬಗ್ಗೆ ದಯಮಾಡಿ ಕ್ಷಮೆ ಇರಲಿ. ನಾನೂ ಕೂಡ ಚಿತ್ರ ತಂಡದ ಭಾಗವಾಗಿರುವುದರಿಂದ ಕ್ಷಮೆ ಯಾಚಿಸುತ್ತಿದ್ದೇನೆ. ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ, ಆಲೋಚನೆ ಯಾವ ಕನ್ನಡಿಗರಿಗೂ ಇರುವುದಿಲ್ಲ. ಅದಾಗಿಯೂ ಉದ್ದೇಶಪೂರ್ವಕವಲ್ಲದೆ ಆದ ತಪ್ಪನ್ನು ಅಭಿಮಾನಿಗಳು ಮನ್ನಿಸುತ್ತಾರೆ ಎಂದು ನಂಬಿದ್ದೇನೆ. ಇಂತಿ ನಿಮ್ಮ ರಚಿತಾ ರಾಮ್’ ಎಂದು ಅವರು ಟ್ವಿಟರ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಇನ್ಸ್ಟಾಗ್ರಾಂನಲ್ಲಿ ಬಿಸಿ ಏರಿಸಿದ ‘ಪೂಲ್ ಬೇಬಿ’ ಜಾಕ್ವೆಲಿನ್ ಫರ್ನಾಂಡೀಸ್
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಏಕ್ ಲವ್ಯಾ ಸಿನಿಮಾದ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಮೊದಲಿಗೆ ಇತ್ತೀಚೆಗೆ ಅಗಲಿದ ಖ್ಯಾತ ನಟ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ಇಟ್ಟು ಗೌರವ ಸಲ್ಲಿಸಲಾಗಿತ್ತು. ಆನಂತರ ಶಾಂಪೇನ್ ಬಾಟಲ್ ತೆರೆದು ನಟ, ನಟಿಯರು ಸಂಭ್ರಮಿಸಿದ್ದರು. ಬಳಿಕ ಹಾಡು ಬಿಡುಗಡೆ ಮಾಡಲಾಗಿತ್ತು.
ಇದಕ್ಕೆ ಹಲವು ನಿರ್ಮಾಪಕರು, ನಟರು, ಪುನೀತ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
— Rachita Ram (@RachitaRamDQ) November 13, 2021
Discussion about this post