ಮಳೆಕಾಟದಿಂದ ಆಗಿರುವುದು ಒಂದೆರಡಲ್ಲ. ಅಕಾಲಿಕ ಮಳೆ ರೈತರ ಬೆಳೆ ಹಾಳು ಮಾಡಿದೆ. ಮನೆಗಳನ್ನು ಉರುಳಿಸಿವೆ. ರಸ್ತೆ,ಅಪಾರ್ಟ್ಮೆಂಟ್ ಗಳಿಗೆ ಎಗ್ಗಿಲ್ಲದೆ ನೀರು ನುಗ್ಗಿದೆ..ಹೀಗೆ ಒಂದೇ ಎರಡೇ. ಈ ಸಾಲಿನಲ್ಲಿ ನಟಿ ರಾಗಿಣಿಯವರನ್ನು ಸೇರಿಸಬಹುದು. ಹಾಗಂತ ರಾಗಿಣಿ ಮನೆಗೇನು ನೀರು ನುಗ್ಗಿಲ್ಲ, ಅವರ ಮನೆಯ ರಸ್ತೆ ತುಂಬಿಲ್ಲ. ಬದಲಾಗಿ ರಾಣ ಚಿತ್ರದಲ್ಲಿ ವಿಶೇಷ ಡ್ಯಾನ್ಸ್ ಮಾಡುವ ಅವಕಾಶವನ್ನು ಮಳೆ ಕಿತ್ತುಕೊಂಡಿದೆ ಎಂದು ಗಾಂಧಿನಗರದ ಗಲ್ಲಿಗಳು ಮಾತನಾಡಿಕೊಳ್ಳುತ್ತಿವೆ.
ಇದು ನಿಜ, ರಾಗಿಣಿ ಜಾಗಕ್ಕೆ ಈಗ ಕಿರಿಕ್ ಹುಡುಗಿ ಎಂದೇ ಹೆಸರಾದ ಸಂಯುಕ್ತಾ ಹೆಗ್ಡೆ ಬಂದಿದ್ದಾರೆ. ಅಂತಾದರೆ, ರಾಗಿಣಿಗೆ ಗೇಟ್ ಪಾಸ್ ಅಲ್ಲದೇ ಮತ್ತೇನು.
‘ಸಾರ್, ಇದೇನು ಗೇಟ್ ಪಾಸ್ ಅಂತಲ್ಲ. ನಮ್ಮ ಯೋಜನೆ ಪ್ರಕಾರ ಆಗಿದ್ದರೆ ರಾಗಿಣಿ ಶ್ರೇಯಸ್ ಅಯ್ಯರ್ ಅವರ ಹಾಡಿನ ಶೂಟಿಂಗ್ ಮುಗಿಯಬೇಕಿತ್ತು. ಇದಕ್ಕಾಗಿ ಕಂಠೀರವ ಸ್ಟುಡಿಯೋದ ಅಂಗಳದಲ್ಲಿ ಸೆಟ್ ಕೂಡ ಹಾಕಿದ್ದೇವೆ. ಆದರೆ, ರಣಮಳೆ ಬಿಡಬೇಕಲ್ಲ. ಹೀಗಾಗಿ, ರಾಗಿಣಿ ಅವರ ಡೇಟ್ಸ್ ಸಿಗಲಿಲ್ಲ. ಬೇರೆ ಶೂಟಿಂಗ್ ಇತ್ತು. ಆ ಜಾಗಕ್ಕೆ ಸಂಯುಕ್ತರನ್ನು ಕರೆದುಕೊಂಡು ಬಂದಿದ್ದೇವೆ ಅಷ್ಟೇ’ ಎಂದು ನಂದಕಿಶೋರ್ ಮಳೆಯ ಸತ್ಯವನ್ನು ಹೊರಚೆಲ್ಲುತ್ತಾರೆ.
ರಾಣ ಚಿತ್ರದ ಇನ್ನೊಂದು ವಿಶೇಷ ಇಲ್ಲಿ ಹೇಳಲೇಬೇಕು. ಮಳೆ ನಿಂತ ನಂತರ ಮೂರು ದಿನಗಳ ಕಾಲ 200 ಕ್ಕೂ ಹೆಚ್ಚು ಡ್ಯಾನ್ಸರ್ ಜೊತೆಯಲ್ಲಿ ಹಾಡಿನ ಶೂಟಿಂಗ್ ನಡೆಯಲಿದೆ. ನಂತರ, ಹೊಸಪೇಟೆಯಲ್ಲಿ ಎರಡು ಸಾವಿರ ಡ್ಯಾನ್ಸರ್ ಗಳನ್ನು ಬಳಸಿಕೊಂಡು ಶ್ರೇಯಸ್ ಜೋಡಿ ಕುಣಿಯಲಿದೆ. ಚಂದನ್ ಶೆಟ್ಟಿ ಸಂಗೀತ ಈ ಚಿತ್ರಕ್ಕಿದೆ. ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದಾರೆ.
ಇದನ್ನೂ ಓದಿ: ರಚಿತಾ ರಾಮ ರಾಮ! ರಚ್ಚು ಮತ್ತೆ ಮಾದಕವಾಗಿ ಕಾಣಿಸಿಕೊಂಡಿದ್ದೇಕೆ?
Discussion about this post