ಚಿಕ್ಕಮಗಳೂರು: ಅಳಿಯುವುದು ಕಾಯ ಉಳಿಯುವುದು ಕೀರ್ತಿ ಎಂಬುದಕ್ಕೆ ನಿದರ್ಶನ ಗೌರಮ್ಮ ಎಂದು ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.
ಬ್ಯಾಗದಹಳ್ಳಿಯ ಅರಳುಗುಪ್ಪೆ ಹೆರಿಟೇಜ್ನಲ್ಲಿ ಆಯೋಜಿಸಿದ್ದ ‘ಗೌರಮ್ಮಬಸವೇಗೌಡರ ಸ್ಮರಣೋತ್ಸವ’ ದಿವ್ಯಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಒಳ್ಳೆಯ ಕೆಲಸವನ್ನು ಸದಾ ಬೆಂಬಲಿಸುತ್ತಿದ್ದ ಗೌರಮ್ಮ ಹೊಗಳಿಕೆಗೆ ಹಿಗ್ಗದೆ ತೆಗಳಿಕೆಗೆ ಕುಗ್ಗದೆ ಸರಿಯಾದ ಹಾದಿಯಲ್ಲಿ ಮುನ್ನಡೆಯುತ್ತಿದ್ದರು. ಅನಗತ್ಯ ಟೀಕೆಟಿಪ್ಪಣಿಗಳಿಗೆ ಎಂದೂ ತಲೆಬಾಗಲಿಲ್ಲ. ನಿರಂತರವಾಗಿ ಪ್ರಾಮಾಣಿಕವಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡವರು. ಕ್ರಿಯಾತ್ಮಕತೆ ಮತ್ತು ಶಾಶ್ವತವಾದ ದೂರದೃಷ್ಟಿ ಅವರ ಕಾರ್ಯದಲ್ಲಿರುತ್ತಿತ್ತು.
ಸಿರಿವಂತ ಮನೆಯಲ್ಲಿ ಹುಟ್ಟಿದರೂ ಎಲ್ಲರೊಂದಿಗೂ ಬೆರೆತು ಬಾಳಿದವರು. ಫಲಹೊತ್ತ ಮಾವು, ತೆನೆಹೊತ್ತ ದಂಟು, ಗೊನೆಹೊತ್ತ ಬಾಳೆಯಂತೆ ವಿನಯಶೀಲತೆಯಿಂದ ಸದಾ ಬಾಗುತ್ತಿದ್ದ ಗೌರಮ್ಮ, ಆದರ್ಶಪರಂಪರೆ, ಸಂಸ್ಕೃತಿ ಅರಿತು ಮಾರ್ಗದರ್ಶಿಯಾಗಿ ಬಾಳಿದವರೆಂದ ರಂಭಾಪುರಿ ಜಗದ್ಗುರುಗಳವರು, ಅಗಲಿದ ನಂತರ ಆ ವ್ಯಕ್ತಿಯ ಕೊರತೆ ಮಹತ್ವ ಗುರುತಿಸುವುದು ಸಮಾಜದ ಪದ್ಧತಿ ಎಂದರು.
ಅರಳಗುಪ್ಟೆ ಮನೆತನದ ಹಿರಿಯರಾದ ಧರ್ಮಪ್ರಕಾಶ ಚಂದ್ರೇಗೌಡರ ಪುತ್ಥಳಿಯನ್ನು ಅನಾವರಣಗೊಳಿಸಿ ಶಾಸಕ ಮತ್ತು ಬಿಜೆಪಿ ರಾಷ್ಟ್ರೀಯಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ ಗೌರಮ್ಮನವರನ್ನು ಬಣ್ಣಿಸಲು ಶಬ್ದಗಳಿಲ್ಲ. ತುಂಬಿದಕೊಡ ಎನ್ನಬಹುದು.
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆಹಿಡಿದ ಎಂಬ ಗಾದೆ ಇದೆ. ಹುಟ್ಟಿ ಸೇರಿದ ಮನೆಗಳೆರಡರಲ್ಲೂ ಶ್ರೀಮಂತಿಕೆ ತುಂಬಿದ್ದರೂ ಅಹಂಕಾರಕ್ಕೆ ಇವರಲ್ಲಿ ಜಾಗವಿರಲಿಲ್ಲ. ಮನೆಗೆ ಬಂದವರಿಗೆ ಆತಿಥ್ಯನೀಡುತ್ತಿದ್ದ, ದಾನ ಕೇಳಿಬಂದವರನ್ನು ಎಂದೂ ಬರಿಗೈಯಲ್ಲಿ ಕಳುಹಿಸದ ಗೌರಮ್ಮ ಸದ್ಗುಣಶೀಲೆ ಎಂದರು.
ಲಕ್ಷ್ಮಿ ಚಂಚಲೆ. ಆದರೆ ದಾನ-ಧರ್ಮ ಇರುವ ಮನೆಯಲ್ಲಿ ಮಾತ್ರ ಸದಾ ನೆಲೆಸಿರುತ್ತಾಳೆ. ಹತ್ತು ತಲೆಮಾರಿನ ನಂತರವೂ ಶ್ರೀಮಂತಿಕೆ ಅರಳಗುಪ್ಪೆ ಮನೆಯಲ್ಲಿ ಉಳಿದಿದೆ. ಧರ್ಮವನ್ನು ಯಾರು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ ಎಂದು ರವಿ ನುಡಿದರು.
ಚಿಕ್ಕಮಗಳೂರು ಗಾಲ್ಫ್ ಕ್ಲಬ್ ಅಧ್ಯಕ್ಷ ಎ.ಬಿ.ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿ ಮನೆಯಲ್ಲಿ ಮಹಿಳೆಯನ್ನು ಗೌರವಿಸಬೇಕೆಂದು ಸದಾ ನಂಬಿದವರು ತಾಯಿ ಗೌರಮ್ಮನವರು. ತುಂಬುಕುಟುಂಬದಲ್ಲಿ ಎಲ್ಲವನ್ನೂ ಸರಿದೂಗಿಸುತ್ತಿದ್ದ ಅವರ ದೂರದೃಷ್ಟಿಯಿಂದ ಅರಳುಗುಪ್ಪೆ ಕುಟುಂಬದ ಘನತೆ ಹೆಚ್ಚಿಸಿದೆ ಎಂದರು.
ಲೈಫ್ ಲೈನ್ಪೀಡ್ಸ್ ಮುಖ್ಯಸ್ಥ ಕಿಶೋರಕುಮಾರಹೆಗ್ಡೆ, ಎಐಟಿ ಕುಲಸಚಿವ ಡಾ.ಸಿ.ಕೆ.ಸುಬ್ರಾಯ, ಯೂನಿವರ್ಸಲ್ ಕಾಫಿಫೌಂಡೇಶನ ಕಾರ್ಯದರ್ಶಿ ಗೋಪಾಲಕೃಷ್ಣ, ಹಿರಿಯಪತ್ರಕರ್ತ ಸ.ಗಿರಿಜಾಶಂಕರ್, ಅಕ್ಕಮಹಾದೇವಿ ಮಹಿಳಾ ಸಂಘದ ಯಮುನಾಸಿ.ಶೆಟ್ಟಿ, ರೇಣುಕಾಚಾರ್ಯಟ್ರಸ್ಟ್ ಸದಸ್ಯ ಶಿವಶಂಕರ್ ನುಡಿ ನಮನ ಸಲ್ಲಿಸಿದರು.
ಹುಲಿಕೆರೆದೊಡ್ಡಮಠದ ಶ್ರೀವಿರೂಪಾಕ್ಷಲಿಂಗ ಶಿವಾಚಾರ್ಯರು, ಶಂಕರದೇವರಮಠದ ಶ್ರೀಚಂದ್ರಶೇಖರ ಶಿವಾಚಾರ್ಯರು, ಬೇರುಗಂಡಿಮಠದ ಶ್ರೀರೇಣುಕಮಹಾಂತ ಶಿವಾಚಾರ್ಯರು, ಬೀರೂರುಮಠದ ಶ್ರೀರುದ್ರಮುನಿ ಶಿವಾಚಾರ್ಯರು ಉಪದೇಶಾಮೃತ ನೀಡಿದರು.
ಪೂಜಾರಾಘವೇಂದ್ರ ಸ್ವಾಗತಿಸಿ, ಅರ್ಪಿತಾನಿತಿನ್ ವಂದಿಸಿದರು. ಮಾಧ್ಯಮಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ನಯನಾಸಂತೋಷ ಪ್ರಾರ್ಥಿಸಿ, ಅರಳಗುಪ್ಪೆ ಮನೆಯ ೧೦ನೆಯ ತಲೆಮಾರಿನಕುಡಿ ಬಾಲಕ ಅಧೋಕ್ಷ ಗಣಪತಿಸ್ತೋತ್ರ ಪ್ರಸ್ತುಪಡಿಸಿದನು.
ಕಾಫಿಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ, ಜಿ.ಪಂ.ಮಾಜಿಉಪಾಧ್ಯಕ್ಷರುಗಳಾದ ಪ್ರಭುರಾಜಶೇಖರ್ ಮತ್ತು ಸೋಮಶೇಖರ್, ಪ್ರಬೋಧಿನಿ ಗುರುಕುಲದ ಅಧ್ಯಕ್ಷ ರಾಜಗೋಪಾಲ, ಅಖಿಲ ಭಾರತೀಯ ಸಾಹಿತ್ಯಪರಿಷದ್ ಜಿಲ್ಲಾಧ್ಯಕ್ಷ ಚಟ್ನಳ್ಳಿಮಹೇಶ್, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೊಸಳ್ಳಿಲೋಕೇಶ್, ಜಿಲ್ಲಾ ಕಾಂಗ್ರೇಸ್ ಮಾಜಿಅಧ್ಯಕ್ಷ ಡಾ.ವಿಜಯಕುಮಾರ್, ಸ್ವಚ್ಛಟ್ರಸ್ಟ್ ಸ್ಥಾಪಕ ಅಧ್ಯಕ್ಷೆ ಡಾ.ಶುಭಾ, ಪಟ್ಟಣಸಹಕಾರಿಬ್ಯಾಂಕ್ ಅಧ್ಯಕ್ಷ ನಂಜೇಗೌಡ, ಕರ್ನಾಟಕ ಮಹಿಳಾ ಸಹಕಾರಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ, ಎ.ಬಿ.ಮಲ್ಲಿಕಾರ್ಜುನ್, ಎ.ಬಿ.ರವಿಶಂಕರ್ ಮತ್ತಿತರರು ಗೌರಮ್ಮಬಸವೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
Discussion about this post