ನಮ್ಮ ಕಳೆದ ವಾರದ “ಜ್ಯೋತಿಷ್ಯ ಎಂದರೆ ಭಯ ಏಕೆ” ಲೇಖನದ ಮುಂದುವರೆದ ಭಾಗವಿದು. ನಾವು ಈಗಾಗಲೇ ತಿಳಿದಿರುವಂತೆ ಜ್ಯೋತಿಷ್ಯವೆಂದರೆ ಬೆಳಕಿನ ಆಟ. ಬಹಳಷ್ಟು ಜ್ಯೋತಿಷ್ಯ ಪಂಡಿತರು ಈ ಮಾತನ್ನು ಕೇಳಿ ನಗಬಹುದು, ಅಲ್ಲದೇ ಜ್ಯೋತಿಷ್ಯವೆಂದರೆ ಅವರ ಪ್ರಕಾರ “ಗ್ರಹಗಳ ಆಟ” ಎಂದೂ ಕೂಡ ಹೇಳಬಹುದು, ಅದೂ ನಿಜವೇ. ಅದು ಹೇಗೆ ಎನ್ನುವುದನ್ನು ಇನ್ನು ಸ್ವಲ್ಪ ವಿವರವಾಗಿ ನೋಡೋಣ. ಇಡೀ ಬ್ರಹ್ಮಾಂಡದ ಸೃಷ್ಟಿಗೆ ಹಾಗೂ ಸೌರಮಂಡಲದಲ್ಲಿ ಭೂಮಿಯನ್ನೂ ಸೇರಿ ಇತರ ಗ್ರಹಗಳು ನಿಂತಿರಲು ಸೂರ್ಯನಾರಾಯಣನೇ ಕಾರಣ, ಹಾಗೂ ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳ ಉತ್ಪತ್ತಿಗೆ ಕಾರಣನೂ ಅವನೇ.
ನಾವು ಸೂರ್ಯನ ಚಿತ್ರವನ್ನು ನೋಡಿದ್ದೇವೆ. ಏಳು ಕುದುರೆಗಳನ್ನು ಹೊಂದಿರುವ ರಥದಮೇಲೆ ಅವನ ಸಂಚಾರ. ಸೂರ್ಯನಿಂದ ಹೊರಸೂಸುತ್ತಿರುವ ಕಿರಣಗಳನ್ನು ಸೂರ್ಯನ ಕಾಲ್ಪನಿಕ ಚಿತ್ರದಲ್ಲಿ ನಾವು ನೋಡಬಹುದಾಗಿದೆ. ಇತ್ತೀಚಿನ ವಿಜ್ಞಾನಿಗಳೂ ಕೂಡ ಸೂರ್ಯನಿಂದ ಬರುವಂತಹ ಕಿರಣಗಳನ್ನು ಪ್ರಮುಖವಾಗಿ 7 ವಿಭಾಗಗಳಲ್ಲಿ ವಿಂಗಡಿಸಿದ್ದಾರೆ. ಸೂರ್ಯನಿಂದ ಏಳು ವಿಧವಾದ ಅಲ್ಟ್ರಾವೈಲಟ್ ಕಿರಣಗಳು ಬರುತ್ತವೆ ಹಾಗೂ ಅವಕ್ಕೆ 7 ವಿಧದ ಬಣ್ಣಗಳಿವೆ. ಇದರಿಂದ ನಮ್ಮ ಪೂರ್ವಿಕರು ಎಷ್ಟು ವಿವರವಾದ ಅಧ್ಯಯನ ಮಾಡಿ ಸಂಗತಿಗಳನ್ನು ವೈಜ್ಞಾನಿಕವಾಗಿ ತಿಳಿದುಕೊಂಡಿದ್ದರೆಂಬುದು ಅರ್ಥವಾಗುತ್ತದೆ. ಸೂರ್ಯನ ಕಿರಣಗಳು ಭೂಮಿಗೆ ಹಾಗೂ ಸೌರಮಂಡಲದ ಇತರ ಗ್ರಹಗಳಿಗೆ ಬಹಳ ವೇಗವಾಗಿ ತಲಪುವುದರಿಂದ ವೇಗವಾಗಿ ಓಡುವ 7 ಕುದುರೆಗಳನ್ನು ಅವನ ರಥಕ್ಕೆ ಕಟ್ಟಲಾಗಿದೆ. ಹಾಗಾಗಿ, ಯಾವುದನ್ನೂ ಆತುರದಿಂದ ವಿಮರ್ಶೆ ಮಾಡಿ, ಅರ್ಥಮಾಡಿಕೊಳ್ಳದೇ ಅವೈಜ್ಞಾನಿಕವೆಂದು ಹಾಗೂ ಮೂಢನಂಬಿಕೆಯೆಂದು ಹೇಳುವುದು ಸರಿಯಲ್ಲವೆಂದು ನಮ್ಮ ಅಭಿಪ್ರಾಯ.
ಹೀಗೆ ಸೂರ್ಯನಿಂದ ಬರುವ ಬೆಳಕು ವಿವಿಧ ಗ್ರಹಗಳಿಗೆ ಹೋಗಿ ಭೂಮಿಗೆ ಬರುವಾಗ ಆ ಗ್ರಹಗಳ ಪ್ರಭಾವವೂ ಅದರಲ್ಲಿ ಸೇರಿರುತ್ತದೆ. ಹಾಗಾಗಿ, ಸೂರ್ಯನು ಜ್ಯೋತಿಷ್ಯದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುವುದರಿಂದ ಸೂರ್ಯನು ರಾಜ ಗ್ರಹವಾಗಿದ್ದು ಇತರ ಗ್ರಹಗಳು ಅವನ ಸುತ್ತ ಸುತ್ತುತ್ತಾ ಇವೆ ಹಾಗೂ ಭೂಮಿಯ ಮೇಲಿನ ಎಲ್ಲಾ ಜೀವಿಗಳ ಮೇಲೂ ತಮ್ಮ ಪ್ರಭಾವವನ್ನು ಬೀರುತ್ತಿವೆ. ಒಂದು ಕಾರ್ಖಾನೆಯಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ತಯಾರಾಗುವ ವಸ್ತುಗಳು ಒಂದೇ ರೀತಿ ಇರುತ್ತವೆ, ಆದರೆ ತಂದೆ-ತಾಯಿಗೆ ಹುಟ್ಟುವ ಮಕ್ಕಳ ಗುಣ-ಲಕ್ಷಣಗಳು ಬೇರೆ ಬೇರೆಯಾಗಿರುತ್ತವೆ. ಇದಕ್ಕೆ ಜ್ಯೋತಿಷ್ಯದಿಂದ ಮಾತ್ರ ಸರಿಯಾದ ಉತ್ತರ ಸಿಗುಬಹುದಾಗಿದೆ. ಆಯಾಯ ಮಕ್ಕಳು ಹುಟ್ಟುವ ಕಾಲ-ಮಾನಗಳು ಬೇರೆ-ಬೇರೆಯಾಗಿದ್ದು ಅವು ಹುಟ್ಟಿದ ಸಮಯದಲ್ಲಿನ ಗ್ರಹಸ್ಥಿತಿಗಳಿಗನುಸಾರವಾಗಿ ಅವರ ಗುಣ-ಲಕ್ಷಣಗಳಿರುತ್ತವೆ. ಗ್ರಹಣಗಳ ಸಮಯಗಳಲ್ಲಿ ಹೊರಸೂಸುವ ಕಿರಣಗಳಲ್ಲಿ ಹೆಚ್ಚಿನ ಶಕ್ತಿಯಿದ್ದು ಅವು ಹೆಚ್ಚಿನ ಪ್ರಭಾವ ಬೀರುತ್ತವೆ.
ಮಕ್ಕಳು ಹುಟ್ಟುವ ಸಮಯದ ಗ್ರಹಸ್ಥಿತಿಗಳಂತೆ ಶುಭಾಶುಭ ಫಲಗಳು ದೊರೆಯುತ್ತವೆ. ಇದನ್ನು ನಾವು ಜನ್ಮಲಗ್ನ ಕುಂಡಲಿಯಿಂದ ತಿಳಿಯಬಹುದಾಗಿದೆ. ಸೂರ್ಯನಿಂದಲೇ ಈ ಜಗತ್ತಿನ ವ್ಯಾಪಾರವು ನಡೆಯುತ್ತಿದ್ದು ಅವನಿಲ್ಲದೇ ಇದ್ದರೆ ಯಾವುದೂ ಇರುವುದಿಲ್ಲ, ಎಲ್ಲೆಲ್ಲೂ ಅಯೋಮಯ ಪರಿಸ್ಥಿತಿಯುಂಟಾಗಿ ಅಲ್ಲೋಲ-ಕಲ್ಲೋಲವಾಗುತ್ತದೆ, ಇಡೀ ಸೌರಮಂಡಲವೇ ನಾಶವಾಗಿಬಿಡುತ್ತವೆ. ಹಾಗೆಯೇ, ಜ್ಯೋತಿಷ್ಯ ಶಾಸ್ತ್ರದಲ್ಲೂ ಜಾತಕದಲ್ಲಿನ ಸೂರ್ಯನ ಸ್ಥಿತಿ-ಬಲಗಳನ್ನು ಹಾಗೂ ಇತರ ಗ್ರಹಗಳ ಸ್ಥಿತಿ-ಗತಿಗಳನ್ನು ನೋಡಿ ಮನುಷ್ಯನ ಶಕ್ತಿ, ಬರುವ ಗಂಡಾಂತರಗಳು, ಉದ್ಯೋಗ, ಲೌಕಿಕ ಕಷ್ಟ-ನಷ್ಟಗಳು, ಅಯಸ್ಸು, ಹಾಗೂ ಇನ್ನಿತರ ಫಲಾಫಲಗಳನ್ನು ತಿಳಿಯಬಹುದಾಗಿದೆ.
ಮುಂದಿನ ಲೇಖನದಲ್ಲಿ ಜನ್ಮಲಗ್ನ ಕುಂಡಲಿ ಎಂದರೇನು, ಅದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ, ಯಾವ ಗ್ರಹಸ್ಥಿತಿಗಳಿಂದ ಏನು ಫಲ, ಹಾಗೂ ಸಮಸ್ಯೆಗಳಿದ್ದರೆ ಏನು ಪರಿಹಾರ ಎಂಬೆಲ್ಲಾ ವಿವರಗಳನ್ನು ತಿಳಿಯೋಣ.
Astrology is the study of planetary movements at the time of one’s birth and also whenever one wants to know about his future

ಇದನ್ನೂ ಓದಿ: Opinion: ಜ್ಯೋತಿಷವೆಂದರೆ ಭಯ ಬೇಡ, ಬೆಳಕಿನ ಆಟದ ಮೂಲ ತತ್ವಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ
ಇದನ್ನೂ ಓದಿ: Weekly Horoscope: ಮೀನ ರಾಶಿಯವರ ಹಣಕಾಸು ತುಸು ಸುಧಾರಿಸಲಿದೆ: ನಿಮ್ಮ ವಾರ ಭವಿಷ್ಯದ ವಿವರ ಇಲ್ಲಿದೆ
Discussion about this post