ಬೆಂಗಳೂರು: ನಗರ ಪ್ರದೇಶದಲ್ಲಿ ಮಳೆನೀರು ನಿರ್ವಹಣೆಯ ಪರಿಶೋಧನಾ ವರದಿಯ ಪ್ರಕಾರ ಜಲಮೂಲಗಳ ಸಂಕುಚಿಸುವಿಕೆ ಹಾಗೂ ಒಳಚರಂಡಿ ಮತ್ತು ನೀರಿನ ಹರಿಯುವ ಮಾರ್ಗಗಳ ಅವ್ಯವಸ್ಥೆಗಳಿಂದ ಜಲಮೂಲಗಳ ಹಾಗೂ ಒಳಚರಂಡಿಗಳ ನಡುವಿನ ಸಂಪರ್ಕ ಕೊರತೆಯುಂಟಾಗಿದ್ದು ಮಳೆನೀರಿನ ಸರಾಗ ಹರಿವಿಗೆ ಅಡ್ಡಿಯಾಗಿದೆ.
ಕಳೆದ ಭಾನುವಾರ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಮಳೆ ಬಿದ್ದ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಬೆಂಗಳೂರಿಗರಿಗೆ ಇದೇನೂ ಹೊಸ ವಿಷಯವಲ್ಲದಿದ್ದರೂ ಹಾಗೂ ಇತ್ತೀಚಿನ ಕೆಲ ವರ್ಷಗಳಲ್ಲಿ ಆಗಾಗ ಕಾಣುತ್ತಿರುವ ದೃಶ್ಯವೇ ಆಗಿದೆ.
ಹೆಚ್ಚಿನ ಪ್ರಮಾಣದ ಮಳೆಯಾದಾಗ ಇತ್ತೀಚಿನ ವರ್ಷಗಳಲ್ಲಿ ಉಂಟಾಗುತ್ತಿರುವ ಪ್ರವಾಹ ಪರಿಸ್ಥಿತಿಗೆ, ಸಿಎಜಿ ವರದಿಯ ಪ್ರಕಾರ, ನಗರ ಬೆಳೆದಂತೆ ಜನರ ವಾಸದ ಉದ್ದೇಶದಿಂದ ಆಗುತ್ತಿರುವ ಸತತ ಜಲಮೂಲಗಳ ಒತ್ತುವರಿ ಹಾಗೂ ಹೆಚ್ಚಿನ ಮಳೆನೀರು ಸರಾಗವಾಗಿ ಹರಿದು ಹೋಗಲು ರಾಜಕಾಲುವೆಗಳೊಂದಿಗೆ ಒಳಚರಂಡಿಗಳ ಸಂಪರ್ಕ ಸುಸ್ಥಿತಿಯಲ್ಲಿ ಇಲ್ಲದಿರುವುದೇ ಆಗಿದೆ. ಇದು ಬೆಂಗಳೂರು ಮಹಾನಗರಪಾಲಿಕೆಯ (ಬಿಬಿಎಂಪಿ) ಅತಿಮುಖ್ಯ ವೈಫಲ್ಯಗಳಲ್ಲೊಂದಾಗಿದೆಯೆಂಬುದು ನಿರ್ವಿವಾದ.
ಇದೇ ವರದಿಯ ಪ್ರಕಾರ, ಬೆಂಗಳುರಿನ ವಿವಿಧ ವಲಯಗಳಲ್ಲಿ ಇಲ್ಲಿಯವರೆಗೆ ಗುರುತಿಸಲಾದ ಒಟ್ಟು 2,626 ಒತ್ತುವರಿ ಪ್ರಕರಣಗಳಲ್ಲಿ ಇನ್ನೂ 714 ಒತ್ತುವರಿ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ವರದಿಯು ಇಂತಹ 23 ಬಹುಮುಖ್ಯ ಒತ್ತುವರಿ ಪ್ರಕರಣಗಳನ್ನು ಗುರುತಿಸಿದ್ದು ಇವುಗಳಲ್ಲಿ 16 ಪ್ರಕರಣಗಳು ಬಿಬಿಎಂಪಿ ನೀಡಿದ ಪಟ್ಟಿಯಲ್ಲೇ ಇಲ್ಲವೆಂದು ತಿಳಿಸಿದ್ದು ಇದು ನಿಜಕ್ಕೂ ಆತಂಕಕಾರಿ ವಿಷಯವೇ ಅಗಿದೆ.
ಇದಲ್ಲದೇ, ಸಿಎಜಿ ವರದಿಯು ಗಮನಿಸಿರುವಂತೆ, ಬಿಬಿಎಂಪಿಯ ಜಲಮೂಲಗಳ ಮುಖ್ಯ ಅಭಿಯಂತರರು ನೀಡಿದ ವರದಿಯಲ್ಲೇ ಲೋಪವಿದ್ದು ಎರಡೂ ಸಂಸ್ಥೆಗಳ ಸಹಪರಿಶೀಲನೆಯಲ್ಲಿ ಕಂಡುಬಂದಂತೆ ಒಂದು ಅತಿಕ್ರಮಣ ಪ್ರಕರಣದಲ್ಲಿ ಅತಿಕ್ರಮಣವನ್ನು ತೆಗೆದುಹಾಕಲಾಗಿದೆ ಎಂದು ವರದಿ ಮಾಡಿದ್ದರೂ ವಾಸ್ತವವಾಗಿ ಅಲ್ಲಿ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ, ಒತ್ತುವರಿ ಹಾಗೆಯೇ ಮುಂದುವರೆದಿದ್ದು ಕೆಲವೆಡೆ ಒತ್ತುವರಿ ನಿವಾರಣಾಕಾರ್ಯ ಅಪೂರ್ಣವಾಗಿದೆ.
ಎರಡೂ ಸಂಸ್ಥೆಗಳ ಜಂಟಿ ಪರಿಶೋಧನಾ ಕಾರ್ಯವು ಒಳಚರಂಡಿ ಹಾಗೂ ರಾಜಕಾಲುವೆಗಳು ಜಲಮೂಲಗಳೊಂದಿಗೆ ನೇರವಾಗಿ ಸಂಪರ್ಕ ಹೊಂದಿಲ್ಲದಿರುವುದನ್ನು ಎತ್ತಿ ತೋರಿಸಿದೆ. ಕೆಲವು ಪ್ರಕರಣಗಳಲ್ಲಿ, ಕೆರೆಗಳಿಂದ ಹೊರಬಂದ ನೀರು ಬದಲಿ ಕಾಲುವೆಗಳಲ್ಲಿ ಹರಿಯುತ್ತಿದ್ದು ಪ್ರವಾಹದ ಸಾಧ್ಯತೆಗಳನನ್ನು ಹೆಚ್ಚಿಸಿದೆ.
ನೀರು ಹರಿಯುವ ಮಾರ್ಗಗಳು ಹಾಗೂ ಒಳಚರಂಡಿಗಳು ಕಾಂಕ್ರಿಟೀಕರಣಗೊಂಡಿರುವುದು ಅಂತರ್ಜಲದ ಮರುಪೂರಣಕ್ಕೆ ಅಡ್ಡಿಯಾಗಿದೆ. ಅಲ್ಲದೇ, ಇದು ಪದೇ-ಪದೇ ಹೆಚ್ಚಿನ ಪ್ರಮಾಣದ ಮಳೆಯು ಬಂದಾಗ ಪ್ರವಾಹ ಪರಿಸ್ಥಿತಿ ಉಂಟಾಗುವುದಕ್ಕೂ ಕಾರಣವಾಗಿದೆ.
ಜಲಮೂಲಗಳನ್ನು ಜನವಸತಿ ಪ್ರದೇಶಗಳಾಗಿ ಪರಿವರ್ತಿಸಿ ಕಾಂಕ್ರಿಟೀಕರಣಗೊಳಿಸಿರುವ ಅನೇಕ ಉದಾಹರಣೆಗಳನ್ನು ವರದಿಯು ಎತ್ತಿ ತೋರಿಸಿದ್ದು , ಕಾಮಾಕ್ಷಿಪಾಳ್ಯದ ಕೆರೆಯನ್ನು ಆಟದ ಮೈದಾನವನ್ನಾಗಿ ಪರಿವರ್ತಿಸಿರುವುದು ಹಾಗೂ ದಾಸರಹಳ್ಳಿ ಕೆರೆಯನ್ನು ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣವನ್ನಾಗಿ ಪರವರ್ತಿಸಿರುವುದು ಇದಕ್ಕೆ ಕೆಲ ನಿದರ್ಶನಗಳಾಗಿವೆ.
ಬಿಬಿಎಂಪಿಯ ಜಲಮೂಲಗಳ ವಿಭಾಗದ ಮುಖ್ಯ ಅಭಿಯಂತರರು ಸಿಎಜಿಗೆ ಸಲ್ಲಿಸಿರುವ ಅಂಕಿ-ಅಂಶಗಳ ಪ್ರಕಾರ ಬೆಂಗಳೂರಿನ 210 ಜಲಮೂಲ/ಕೆರೆಗಳಲ್ಲಿ 66ರನ್ನು ಇನ್ನೂ ಅಭಿವೃದ್ಧಿ ಮಾಡಬೇಕಾಗಿದ್ದು, 37 ಪುನರುಜ್ಜೀವನಗೊಳ್ಳುತ್ತಿವೆ, ಹಾಗೂ 18 ನಿರುಪಯುಕ್ತವಾಗಿವೆ. ಈ 18 ನಿರುಪಯುಕ್ತ ಜಲಪ್ರದೇಶಗಳು ಸರಿಸುಮಾರು 254 ಎಕರೆ ಪ್ರದೇಶದಲ್ಲಿ ವಿಸ್ತಾರಗೊಂಡಿದ್ದು ಮುಂಬರುವುದಿನಗಳಲ್ಲಿ ಒತ್ತುವರಿಯಾಗುವ ಹಾಗೂ ಪರಿವರ್ತಿತಗೊಳ್ಳುವ ಹಾಗೂ ಇತರ ಉಪಯೋಗಗಳಿಗಾಗಿ ಬಳಕೆಗೊಳ್ಳುವ ಅಪಾಯ ಹೆಚ್ಚಿದೆ.
ಜಲಮೂಲಗಳೊಂದಿಗೆ ಒಳಚರಂಡಿಗಳನ್ನು ಸಂಪರ್ಕಿಸುವುದರಲ್ಲಿ ಬಿಬಿಎಂಪಿಯು ವಿಫಲವಾಗಿರುವುದರಿಂದ ಬೆಂಗಳೂರು ನಗರದ ಅನೇಕ ಜಲಮೂಲಗಳು ಬತ್ತಿಹೋಗಿದ್ದು ಈ ಪ್ರದೇಶಗಳನ್ನು ಬೇರೆ ಉದ್ದೇಶಗಳಿಗಾಗಿ ಪರಿವರ್ತಿಸಲು ಕಾರಣವಾಗಿದೆ.
ಕೊಳಚೆನೀರನ್ನು ಬೇರ್ಪಡಿಸಲು ಹಾಗೂ ಜಲಮೂಲಗಳ ಸಮೀಪದ ಪ್ರದೇಶಗಳಲ್ಲಿ ಉತ್ತಮ ಪರಿಸರ ನಿರ್ಮಾಣಮಾಡಲು ಸುಮಾರು 60 ಕೋಟಿ ರೂಪಾಯಿಗಳ ವೆಚ್ಚ ತಗುಲಬಹುದೆಂದು, ಸಿಎಜಿ ವರದಿಯ ಪ್ರಕಾರ, ಅಂದಾಜಿಸಲಾಗಿದೆ. ಬಿಬಿಎಂಪಿ ಮತ್ತು ಸಿಎಜಿಯ ಜಂಟಿ ಪರಿಶೋಧನೆಯು ಕೊಳಚೆ ನೀರು ಒಳಚರಂಡಿಗಳ ಸಂಪೂರ್ಣ ವ್ಯಾಪ್ತಿಯಲ್ಲಿ ಹರಿಯುತ್ತಿದ್ದು ನೇರವಾಗಿ ಜಲಮೂಲಗಳಿಗೇ ಹೋಗಿ ಸೇರುತ್ತಿದ್ದು ಸಂಪೂರ್ಣ ವೆಚ್ಚವು ಅನುತ್ಪಾದಕ ವೆಚ್ಚವಾಗಿದೆಯೆಂದೇ ಹೇಳಬೇಕಾಗಿದೆ.
ವರದಿಯ ಮುಖ್ಯಾಂಶಗಳು
1. ಜಲಮೂಲಗಳ ಹಾಗೂ ರಾಜಕಾಲುವೆ/ಒಳಚರಂಡಿಗಳ ಒತ್ತುವರಿಯ ಅಂತರ್ಜಲ ಮಟ್ಟದ ಕುಸಿತಕ್ಕೆ ಹಾಗೂ ಪ್ರವಾಹ ಸ್ಥಿತಿಯ ಆತಂಕಕ್ಕೆ ಕಾರಣವಾಗಿದೆ.
2. ಘನತ್ಯಾಜ್ಯ ವಸ್ತುಗಳು ಹಾಗೂ ನಿರ್ಮಾಣಕಾರ್ಯದ ನಿರುಪಯುಕ್ತ ವಸ್ತುಗಳನ್ನು ರಾಜಕಾಲುವೆ/ಒಳಚರಂಡಿಗಳಲ್ಲಿ ಹಾಕುತ್ತಿರುವುದು ಅಪಾಯಕ್ಕೆ ಕಾರಣವಾಗಿದೆ.
3. ಪರಿಷ್ಕರಣೆಗೊಳ್ಳದ ಕಲುಷಿತ ನೀರು ಹಾಗೂ ತ್ಯಾಜ್ಯಗಳ ಸತತ ಒಳಹರಿವು ಜಲಮೂಲಗಳನ್ನು ಕಲುಷಿತಗೊಳಿಸುತ್ತಿವೆ.
4. ಹೂಳು ಮತ್ತು ನಿರುಪಯುಕ್ತ ವಸ್ತುಗಳ ಜಮಾವಣೆಯು ಜಲಮೂಲಗಳ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುವುದು.
5. ಜಲಮೂಲಗಳ ಅಂತರ್ಸಂಪರ್ಕದಲ್ಲಿನ ಕೊರತೆ.
Bangalore floods Concretisation of drainages and encroachment of water bodies main cause
ಇದನ್ನೂ ಓದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 24 ವರ್ಷಗಳ ನಂತರ ಗರಿಷ್ಠ ಮಳೆ
ಇದನ್ನೂ ಓದಿ: ಧಾರಾಕಾರ ಮಳೆಗೆ ರಸ್ತೆ ಮೇಲೆ ಉಕ್ಕಿ ಹರಿದ ಚರಂಡಿ ನೀರು

























Discussion about this post