ನವದೆಹಲಿ: ಇತ್ತೀಚೆಗೆ ಸಂಪನ್ನಗೊಂಡ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯು ತನ್ನ ರಾಜಕೀಯ ಶಕ್ತಿಯನ್ನು ದೇಶಾದ್ಯಂತ ವಿಸ್ತರಿಸುವ ಪಕ್ಷದ ಮಹತ್ವಾಕಾಂಕ್ಷೆಯನ್ನು ಯಾವುದೇ ಅನುಮಾನಕ್ಕೆಡೆಯಿಲ್ಲದಂತೆ ಸಾಧಿಸಿ ತೋರಿಸಿದೆ. ಮುಂಬರಲಿರುವ ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಜಯ ಸಾಧಿಸುವ ಮೂಲಕ ತನ್ನ ಈ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಜನಕಲ್ಯಾಣ, ರಾಷ್ಟ್ರೀಯತೆ, ಹಾಗೂ ಪ್ರಬಲ ನಾಯಕತ್ವಗಳನ್ನು ತನ್ನ ಮೂಲಮಂತ್ರವಾಗಿ ಪ್ರಯೋಗಿಸುವ ದೃಢನಿಶ್ಚಯವನ್ನು ಕಾರ್ಯಕಾರಿಣಿಯ ನಿರ್ಣಯಗಳು ಪ್ರಚುರ ಪಡಿಸಿವೆ.
ಉತ್ತರಪ್ರದೇಶ ಹಾಗೂ ಗುಜರಾತ್ ಸೇರಿದಂತೆ ಮುಂಬರಲಿರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕಾರಿಣಿಯಲ್ಲಿ ಮೂರು ಪ್ರಮುಖ ಸಂಗತಿಗಳಾದ ಸಂವಹನ, ಸಂಘಟನೆ, ಹಾಗೂ ಪ್ರಖರ ನಾಯಕತ್ವಗಳ ಮೇಲೆಯೇ ಹೆಚ್ಚಿನ ಗಮನ ಕೇಂದ್ರೀಕೃತವಾಗಿತ್ತು. ಇದೇ ಸಂದರ್ಭದಲ್ಲಿ ಕೋವಿಡ್ 2ನೇ ಅಲೆಯ ನಿರ್ವಹಣೆಯ ವೈಫಲ್ಯದ ಟೀಕೆಗಳಿಗೆ ತಕ್ಕ ಪ್ರತ್ಯುತ್ತರ ನೀಡುವುದು ಅತ್ಯಗತ್ಯವಾಗಿತ್ತು. ಕಾರ್ಯಕಾರಿಣಿಯಲ್ಲಿ ತೆಗೆದುಕೊಳ್ಳಲಾದ ರಾಜಕೀಯ ನಿರ್ಣಯವು ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿರುವುದು, ಮಹಾಮಾರಿಯ ಸಮಯದಲ್ಲಿ ಅಹಾರಧಾನ್ಯಗಳ ವಿತರಣೆಯಂತಹ ಜನಕಲ್ಯಾಣ ಕಾರ್ಯಕ್ರಮಗಳು, ಹಾಗೂ ಇಷ್ಟೆಲ್ಲಾ ಸಾಧನೆಗಳ ನಡುವೆಯೂ ಪ್ರತಿಪಕ್ಷಗಳು ರಚನಾತ್ಮಕವಾಗಿ ಕಾರ್ಯನಿರ್ವಹಿಸದೇ ಕೇವಲ ಅಪಪ್ರಚಾರ ಮಾಡುವ ಉದ್ದೇಶಕ್ಕಾಗಿಯೇ ಟೀಕೆ ಮಾಡುತ್ತಿದ್ದುದನ್ನು ಜನರಿಗೆ ತಿಳಿಸುವುದರ ಮೂಲಕ ಇದನ್ನು ಸಾಧಿಸಲು ಯೋಜನೆ ರೂಪಿಸಿದೆ. ಎಲ್ಲಾ ಜನಕಲ್ಯಾಣ ಯೋಜನೆಗಳನ್ನು ಮುಂದುವರೆಸುವುದರ ಜೊತೆಗೆ ಸಂವಿಧಾನದ 370ನೇ ವಿಧಿಯ ರದ್ದತಿಯಂತಹ ತನ್ನ ಇತರ ಕೆಲ ವಿವಾದಾತ್ಮಕ ರಾಜಕೀಯ ನಿರ್ಧಾರಗಳನ್ನು ಕಾರ್ಯಗತಗಳಿಸುವ ಉದ್ದೇಶವನ್ನೂ ಪಕ್ಷ ಹೊಂದಿದೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕಾರ್ಯವೈಖರಿಯ ಬಗ್ಗೆ ಪಕ್ಷದ ಕೆಲ ವರಿಷ್ಠನಾಯಕರ ಅಸಮಾಧಾನದ ವದಂತಿಗಳಿದ್ದರೂ ಪಕ್ಷವು ಅವರ ನಾಯಕತ್ವದಲ್ಲಿ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದು ಮುಂದಿನ ಚುನಾವಣೆಯನ್ನು ಅವರ ನಾಯಕತ್ವದಲ್ಲೇ ಎದುರಿಸಲು ನಿಶ್ಚಯಿಸಿದೆ. ಇದು ಪಕ್ಷದಲ್ಲಿರುವ ಅಸಮಾಧಾನಿತರಿಗೂ ಮತ್ತು ವಿರೋಧಪಕ್ಷಗಳಿಗೂ ಒಟ್ಟಿಗೇ ರವಾನೆಯಾದ ಸಂದೇಶವೆಂದೇ ಭಾವಿಸಬಹುದಾಗಿದೆ.
ಪ್ರತಿ ಹೆಜ್ಜೆಯಲ್ಲೂ ಪ್ರಧಾನಿ ಮೋದಿಯವರ ಗುಣಗಾನವೇ ಕಾಣುವ ಕಾರ್ಯಕಾರಿಣಿಯ ನಿರ್ಣಯವನ್ನು ನೋಡಿದರೆ ಪಕ್ಷವನ್ನು ಗೆಲ್ಲಿಸಬಲ್ಲ ಎಕೈಕ ವ್ಯಕ್ತಿ ಅವರೇ ಎನ್ನುವಂತಿದ್ದು ಅಧಿಕ್ಕಾರಕ್ಕೇರಿದ 7 ವರ್ಷಗಳ ನಂತರವೂ ಇದೇ ಸ್ಥಿತಿ ಮುಂದುವರೆದಿರುವುದು ಅನೇಕ ಸಮೀಕ್ಷೆಗಳಿಂದಲೂ ವ್ಯಕ್ತವಾಗಿದೆ. ಪಕ್ಷಕ್ಕಿಂತಲೂ ಪ್ರಧಾನಿ ಮೋದಿಯವರೇ ಜನಪ್ರಿಯವಾಗಿರುವುದು ಇದರಿಂದ ಸುಸ್ಪಷ್ಟ. ಇದೇ ಸ್ಥಿತಿ ಇನ್ನೆಷ್ಟು ಕಾಲ ಮುಂದುವರೆಯಬಹುದು ಎನ್ನುವುದು ಕಾದು ನೋಡಬೇಕಾಗಿರುವ ಕುತೂಹಲಕರ ಸಂಗತಿಯಾಗಿದ್ದು ಇದು ಪಕ್ಷದ ಸಾಂಘಿಕ ಶಕ್ತಿಯನ್ನು ಘಾಸಿಗೊಳಿಸುವ ಹಾಗೂ ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲವೆನಿಸಿದರೂ ಇದೇ ಸದ್ಯದ ಅನಿವಾರ್ಯತೆಯೂ ಆಗಿರುವಂತಿದೆ.
BJP kickstarts its massive preparation for 2022 Assembly Elections in the recently concluded national executive meeting
ಇದನ್ನೂ ಓದಿ: ಬಿಜೆಪಿ ಕುಟುಂಬ ಚಾಲಿತ ಪಕ್ಷವಲ್ಲ, ಉಪಚುನಾವಣೆಗಳಲ್ಲಿ ಅಭೂತಪೂರ್ವ ಯಶಸ್ಸು ನಮ್ಮದಾಗಿದೆ – ನರೇಂದ್ರ ಮೋದಿ
ಇದನ್ನೂ ಓದಿ: Covid vaccine: ಮುಂದಿನ ವರ್ಷದ ಹೊತ್ತಿಗೆ 5 ಮಿಲಿಯನ್ ಡೋಸ್ ಕೋವಿಡ್ ಲಸಿಕೆ ಉತ್ಪಾದನೆ: ಪ್ರಧಾನಿ ಮೋದಿ.
Discussion about this post