ನವದೆಹಲಿ: ದೇಶದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಸಾಕಷ್ಟು ಕಲ್ಲಿದ್ದಲಿನ ದಾಸ್ತಾನಿದ್ದು ದೇಶದ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಮರ್ಥವಾಗಿವೆಯಲ್ಲದೇ ಕಲ್ಲಿದ್ದಲಿನ ದಾಸ್ತಾನು ಹೆಚ್ಚುತ್ತಿದೆ ಎಂದು ಇಂಧನ ಸಚಿವ ಆರ್ಕೆ ಸಿಂಗ್ ತಿಳಿಸಿದ್ದಾರೆ. ದೇಶದ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳು ಇತ್ತೀಚೆಗೆ ಕಲ್ಲಿದ್ದಲಿನ ಕೊರತೆ ಎದುರಿಸುತ್ತಿದ್ದು ಪಂಜಾಬ್, ರಾಜಸ್ಥಾನ, ಹಾಗೂ ಉತ್ತರಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ಈ ವಿದ್ಯುತ್ ಕೊರತೆಯಿಂದಾಗಿ ವಿದ್ಯುತ್ ಕಡಿತ ಮಾಡಲು ಪ್ರಾರಂಭಿಸಿದ್ದವು.
ಅಕ್ಟೋಬರ್ 24ರ ದಾಸ್ತಾನಿನ ಪ್ರಕಾರ ಎಲ್ಲ ಘಟಕಗಳಲ್ಲಿ ಸರಾಸರಿ 5 ದಿನಗಳಿಗೆ ಸಾಕಾಗುವಷ್ಟು ಕಲ್ಲಿದ್ದಲಿನ ದಾಸ್ತಾನಿದ್ದು ಇದು ಕಲ್ಲಿದ್ದಲು ಮೂಲಗಳಿಂದ ಇರುವ ದೂರವನ್ನಾಧರಿಸಿ ಅಪೇಕ್ಷಿತ 15-30 ದಿನಗಳ ದಾಸ್ತಾನಿಗೆ ಹೋಲಿಸಿದರೆ ಕಡಿಮೆಯೇ.
ವಿದ್ಯುತ್ ಕೊರತೆ ನೆನ್ನೆಯೂ ಇರಲಿಲ್ಲ ಹಾಗೂ ಇದಕ್ಕೆ ಮೊದಲೂ ಇರಲಿಲ್ಲ. ಹಾಗೇನಾದರೂ ಇದ್ದರೆ ಆಯಾ ರಾಜ್ಯಗಳ ಸ್ಥಳೀಯ ಸಮಸ್ಯೆಗಳಿಂದಾಗಿ ಇರಬಹುದಷ್ಟೇ ಎಂದ ಆರ್ಕೆ ಸಿಂಗ್ ಸದ್ಯ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಒಟ್ಟು 8.1 ಮಿಲಿಯನ್ ಟನ್ಗಳಷ್ಟು ಕಲ್ಲಿದ್ದಲಿನ ದಾಸ್ತಾನಿದ್ದು ಇದು ಅಕ್ಟೋಬರ್ 1, 2021ರ ನಂತರದ ಅತಿ ಹೆಚ್ಚಿನ ದಾಸ್ತಾನಾಗಿದ್ದು ಪರಿಸ್ಥಿತಿ ಕ್ರಮೇಣ ಇನ್ನೂ ಉತ್ತಮವಾಗಲಿದೆ ಎಂದರು.
ಮುಂದುವರೆದು ಮಾತನಾಡಿದ ಅವರು ರಾಜ್ಯ ಹಾಗೂ ಕೇಂದ್ರ ವಿದ್ಯುತ್ ಉತ್ಪಾದನಾ ಘಟಕಗಳು ಕೋಲ್ ಇಂಡಿಯಾ ಸಂಸ್ಥೆಗೆ ಸುಮಾರು 16,000 ಕೋಟಿ ರೂಪಾಯಿಗಳ ಬಾಕಿ ಉಳಿಸಿಕೊಂಡಿದ್ದು ವಿದ್ಯುತ್ ಪ್ರಸರಣಾ ಸಂಸ್ಥೆಗಳು ಉತ್ಪಾದನಾ ಘಟಕಗಳ ಬಾಕಿ ತೀರಿಸದಿದ್ದರೆ ಅವು ಕಲ್ಲಿದ್ದಲನ್ನು ಕೊಳ್ಳಲು ತೊಂದರೆಯಾಗುತ್ತದೆಂದೂ ಅವರು ತಿಳಿಸಿದರು.
Central power minister RK Singh says there is no power shortage in the country
ಇದನ್ನೂ ಓದಿ: Xiaomi: ವಿದ್ಯುತ್ ಕಾರುಗಳ ಉತ್ಪಾದನಾ ರಂಗಕ್ಕೆ ಧುಮುಕಲಿದೆ ಚೀನಾದ ಸ್ಮಾರ್ಟ್ಫೋನ್ ದಿಗ್ಗಜ ಶಿಯೋಮಿ
ಇದನ್ನೂ ಓದಿ: ಕಲ್ಲಿದ್ದಲಿಗೆ ತೀವ್ರ ತತ್ವಾರ
Discussion about this post