ತಿರುಪತಿ: ದಕ್ಷಿಣ ವಲಯದ ಮುಖ್ಯಮಂತ್ರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇಂದ್ರ ಜಲನಂಪನ್ಮೂಲ ಸಚಿವಾಲಯಕ್ಕೆ ಕರ್ನಾಟಕ ರಾಜ್ಯದ ನಿಲುವನ್ನು ಪರಿಗಣಿಸಬೇಕೆಂದು ನಿರ್ದೇಶನ ನೀಡಿದರು.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿಯವರ ಮನವಿಗೆ ಸ್ಪಂದಿಸಿದ ಕೇಂದ್ರ ಗೃಹ ಸಚಿವರು ಗೋದಾವರಿ, ಕೃಷ್ಣಾ, ಕಾವೇರಿ,ಹಾಗೂ ಪಾಲಾರ್ ನದಿಗಳ ಜೋಡಣೆಯ ವಿವರವಾದ ಯೋಜನಾ ವರದಿಯನ್ನು ತಯಾರಿಸುವ ಮೊದಲು ಸಂಬಂಧಿಸಿದ ರಾಜ್ಯಗಳ ನೀರಿನ ಪಾಲನ್ನು ನಿರ್ಧರಿಸುವಂತೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೆ ನಿರ್ದೇಶನ ನೀಡಿದರು.
ತಿರುಪತಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಬೆಂಗಳೂರಿಗೆ ಮರಳಿದ ನಂತರ ಮುಖ್ಯಮಂತ್ರಿ ಬೊಮ್ಮಾಯಿ ಈ ವಿಷಯವನ್ನು ವರದಿಗಾರರಿಗೆ ತಿಳಿಸಿದರು. ದಕ್ಷಿಣದ ರಾಜ್ಯಗಳಿಗೆ ಸಂಬಂಧಿಸಿದ ಅನೇಕ ವಿವಾದಗಳನ್ನು ಈ ಸಭೆಯಲ್ಲಿ ಪರಿಹರಿಸಲಾಯಿತೆಂದು ಅವರು ತಿಳಿಸಿದರು. ನದಿ ಜೋಡಣೆಯ ವಿಚಾರದಲ್ಲಿ ಕರ್ನಾಟಕದ ಮನವಿಯನ್ನು ಪರಿಗಣಿಸುವಂತೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೆ ಸೂಕ್ತ ನಿರ್ದೇಶನವನ್ನು ಅಮಿತ್ ಶಾ ನೀಡಿದ್ದಾರೆಂದು ಬೊಮ್ಮಾಯಿ ತಿಳಿಸಿದರು. ಕೃಷ್ಣಾ ವಾಟರ್ ಟ್ರಿಬ್ಯೂನಲ್-2ರ ನಿರ್ಧಾರವನ್ನು ಗೆಜೆಟ್ನಲ್ಲಿ ಪ್ರಕಟಿಸಲು ಕೇಂದ್ರ ಸರಕಾರವು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾವು ಒತ್ತಾಯಿಸಿರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆಯೂ ಸಭೆಯಲ್ಲಿ ಬಲವಾಗಿ ಪ್ರತಿಪಾದಿಸಿರುವುದಾಗಿ ಹೇಳಿದರು.
ಬೆಂಗಳೂರಿನ ಮೆಟ್ರೋ ಯೋಜನೆಗೆ ಅವಶ್ಯಕವಿರುವ ಭೂಮಿಯನ್ನು ಒದಗಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತೆಂದು ಮುಖ್ಯಮಂತ್ರಿಗಳು ಹೇಳಿದರು. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ “ಮೀನುಗಾರಿಕೆಯಲ್ಲಿ ಆಂಟಿಬಯೋಟಿಕ್ಸ್ಗಳನ್ನು ಉಪಯೋಗಿಸುವುದನ್ನು ತಪ್ಪಿಸಲು, ಪೋಕ್ಸೋ ಪ್ರಕರಣಗಳ ತ್ವರಿತ ವಿಲೇವಾರಿ ಮಾಡಲು, ಹಾಗೂ ನಿಯಮಿತ ಸಮಯದಲ್ಲಿ ಚಾರ್ಜ್ಶೀಟ್ಗಳನ್ನು ಸಲ್ಲಿಸಲು ರಾಜ್ಯ ಸರಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.
ಸಭೆಯಲ್ಲಿ “ಮೇಕೆದಾಟು” ಯೋಜನೆಯ ಪ್ರಸ್ತಾಪವಾಯಿತಾದರೂ ತಮಿಳುನಾದಿನ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸದ ಕಾರಣ ಅದರ ಬಗ್ಗೆ ಚರ್ಚೆ ಮಾಡಲು ಸಾಧ್ಯವಾಗಲಿಲ್ಲವೆಂದೂ ಬೊಮ್ಮಾಯಿ ತಿಳಿಸಿದರು. ಕೇಂದ್ರದ ಜಲಸಂಪನ್ಮೂಲ ಸಚಿವರನ್ನು ಯೋಜನೆಗೆ ಸಂಬಂಧಿಸಿದ ಅಡೆ-ತಡೆಗಳನ್ನು ನಿವಾರಿಸಲು ಒತ್ತಾಯಿಸಲಾಗುವುದು ಎಂದ ಅವರು ನನ್ನ ಇತ್ತೀಚಿನ ದೆಹಲಿ ಭೇಟಿಯ ಸಂದರ್ಭದಲ್ಲಿ ಕಾನೂನು ತಜ್ಞರೊಡನೆ ಇದರ ಬಗ್ಗೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.
ತಮಿಳುನಾಡಿನೊಂದಿಗಿನ ಜಲ ವಿವಾದದ ಬಗ್ಗೆ ಮಾತನಾಡಿದ ಅವರು ಇದೊಂದು ಸ್ವಾತಂತ್ರ್ಯಪೂರ್ವ ಸಮಯದಿಂದಲೂ ಮುಂದುವರೆದಿರುವ ಸಮಸ್ಯೆಯಾಗಿದ್ದು ನೀರಿನ ಹಂಚಿಕೆಯ ವಿಷಯದಲ್ಲಿ ತಮಿಳುನಾಡು ರಾಜ್ಯವು ರಾಜಕೀಯ ಮಾಡುತ್ತಿದೆಯೆಂದರು. ಕಾವೇರಿ ನ್ಯಾಯ ಮಂಡಳಿಯು ತನ್ನ ತೀರ್ಮಾನವನ್ನು ಪ್ರಕಟಿಸಿದ ಮೇಲೂ ಪಕ್ಕದ ರಾಜ್ಯವು ತನ್ನ ತಕರಾರನ್ನು ಮುಂದುವರೆಸಿದ್ದು ನಾವೂ ಸಹ ಆ ರಾಜ್ಯದ ನಿಲುವಿಗೆ ನಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದೇವೆ ಎಂದರು. ಈ ವಿವಾದಗಳನ್ನು ಕಾನೂನಾತ್ಮಕವಾಗಿಯೇ ಪರಿಹರಿಸಿಕೊಳ್ಳಬೇಕಾಗಿದೆಯೆಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರು ಹೊರವಲಯದ ವರ್ತುಲ ರಸ್ತೆ ಯೋಜನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಇದರ ಬಗ್ಗೆ 2 ಸಭೆಗಳನ್ನು ನಡೆಸಲಾಗಿದೆಯಲ್ಲದೇ ಯೋಜನೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದು ಸದ್ಯದಲ್ಲೇ ಅಂತಿಮಗೊಳಿಸಲಾಗುವುದು ಎಂದರು.
CM Bommai returns after attending the south zone CMs meet held in Tirupati chaired by Amit Shah
ಇದನ್ನೂ ಓದಿ: Air Pollution: ದೆಹಲಿ ಎನ್ಸಿಆರ್ನಲ್ಲಿ ಶಾಲಾ-ಕಾಲೇಜುಗಳು ಬಂದ್, ಶೇ. 50ರಷ್ಟು ಕಚೇರಿಗಳಲ್ಲಿ ವರ್ಕ್ ಫ್ರಂ ಹೋಮ್
ಇದನ್ನೂ ಓದಿ:ಪೂರ್ವಾಂಚಲ ಎಕ್ಸ್ಪ್ರೆಸ್ವೇ ಉತ್ತರಪ್ರದೇಶದ ಸಮಗ್ರ ಅಭಿವೃದ್ಧಿಯ ಹೆದ್ದಾರಿಯಾಗಲಿದೆ: ಪ್ರಧಾನಿ ಮೋದಿ
Discussion about this post