ಶಿಲಾಂಗ್: ಮೇಘಾಲಯದಲ್ಲಿ ಬುಧವಾರ ರಾತ್ರಿ ಕಾಂಗ್ರೆಸ್ನಲ್ಲಿ ಕ್ಷಿಪ್ರ ಕ್ರಾಂತಿಯಾಗಿದ್ದು, 17 ಶಾಸಕರ ಪೈಕಿ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿ 12 ಮಂದಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಸೇರಿದ್ದಾರೆ. ಸ್ಪೀಕರ್ ಮೆತ್ಬಾ ಲಿಂಗ್ಡೋ ಅವರಿಗೆ ರಾತ್ರಿ 10 ಗಂಟೆಗೆ ಪತ್ರ ನೀಡಿರುವ ಈ ಶಾಸಕರ ಗುಂಪು, ವಿಧಾನಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಕೇವಲ ಒಂದು ಸ್ಥಾನಗಳಿಸಿದ್ದ ಟಿಎಂಸಿಯ ಬಲ 13ಕ್ಕೆ ಏರಿದ್ದು, ಈಗ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಪ್ರಾಪ್ತಿಯಾಗಿದೆ.
ಕಾಂಗ್ರೆಸ್ ನಾಯಕರಾದ ಕೀರ್ತಿ ಆಜಾದ್, ಅಶೋಕ್ ತನ್ವರ್, ಸಂಯುಕ್ತ ಜನತಾ ದಳದ ನಾಯಕ ಪವನ್ ವರ್ಮಾ ನವದೆಹಲಿಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಸೇರಿದ್ದಾರೆ. ಇದರ ತರುವಾಯ ಮೇಘಾಲಯದಲ್ಲಿ ಈ ಬೆಳವಣಿಗೆ ನಡೆದಿದೆ. ಮೇಘಾಲಯದಲ್ಲಿ ಪಕ್ಷಕ್ಕೆ ಸೇರಿದ ಶಾಸಕರನ್ನು ಮಮತಾ ಬ್ಯಾನರ್ಜಿ ಸ್ವಾಗತಿಸಿದ್ದಾರೆ.
ಅಸ್ಸಾಂ, ಗೋವಾ, ಉತ್ತರ ಪ್ರದೇಶ, ಬಿಹಾರ, ಹರಿಯಾಣಗಳಲ್ಲಿ ಕಾಂಗ್ರೆಸ್ನ ಅನೇಕ ಮುಖಂಡರು ಟಿಎಂಸಿಗೆ ಸೇರಿದ್ದು, ಈ ಮೂಲಕ ಟಿಎಂಸಿ ಪಶ್ಚಿಮ ಬಂಗಾಳ ಹೊರತಾಗಿ ಬೇರೆ ರಾಜ್ಯದಲ್ಲೂ ತನ್ನ ನೆಲೆ ವಿಸ್ತರಿಸುತ್ತಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಉತ್ತಮ ಗೆಳೆತನ ಹೊಂದಿರುವ ಮಮತಾ, ಈಗ ದೆಹಲಿ ಪ್ರವಾಸದಲ್ಲಿದ್ದರೂ ಅವರನ್ನು ಭೇಟಿಯಾಗಿಲ್ಲ. ‘ಸೋನಿಯಾರನ್ನು ಭೇಟಿಯಾಗಲು ಸಮಯಾವಕಾಶ ಕೇಳಿದ್ದೆ. ಆದರೆ, ಅವರು ಪಂಜಾಬ್ ಚುನಾವಣೆ ಸಂಬಂಧ ಬ್ಯುಸಿಯಾಗಿದ್ದಾರೆ. ಹೀಗಾಗಿ ಭೇಟಿ ಸಾಧ್ಯವಾಗಲಿಲ್ಲ’ ಎಂದು ಮಮತಾ ಹೇಳಿದ್ದಾರೆ.
Congress 12 MLAs Join Trinamool In Meghalaya
Discussion about this post