ನವದೆಹಲಿ: ವಿವಾದಾತ್ಮಕವಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಪ್ರಸ್ತಾವನೆ ಚಳಿಗಾಲದ ಅಧಿವೇಶನದ ಮೊದಲ ದಿನ ಮಂಡನೆಯಾಗುವ ಹಿನ್ನೆಲೆಯಲ್ಲಿ ಸೋಮವಾರ ತನ್ನೆಲ್ಲ ಸಂಸದರು ಸದನದಲ್ಲಿ ಹಾಜರಿರುವಂತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ವಿಪ್ ಜಾರಿ ಮಾಡಿವೆ.
ರೈತರ ಪ್ರತಿಭಟನೆ ಮುಂದೆ ಮಂಡಿಯೂರಿದ ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದರು. ಈ ವಾರ ನಡೆದ ಸಂಪುಟ ಸಭೆಯಲ್ಲಿ ಈ ಕಾಯ್ದೆ ಹಿಂಪಡೆಯುವ ಮಸೂದೆಯೂ ಸೇರಿ ಸುಮಾರು 26 ಹೊಸ ವಿಧೇಯಕಗಳಿಗೆ ಕೇಂದ್ರ ಸಂಪುಟ ಸಮ್ಮತಿಸಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನದ ಮೊದಲ ದಿನವೇ ಮೂರು ಕೃಷಿ ಕಾಯ್ದೆಯನ್ನು ಹಿಂಪಡೆಯುವ ಮಸೂದೆಯನ್ನು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಡಿಸಲಿದ್ದಾರೆ.
ಈ ಅಧಿವೇಶನದಲ್ಲೇ ಕ್ರಿಪ್ಟೊ ಕರೆನ್ಸಿಗೆ ನಿಯಂತ್ರಣ ವಿಧಿಸುವ ಮತ್ತು ಬಿಟ್ಕಾಯಿನ್ಗೆ ತೆರಿಗೆ ಹಾಕುವ, ಸಾರ್ವಜನಿಕ ವಲಯದ ಉದ್ದಿಮೆಗಳ ಷೇರು ವಿಕ್ರಯ ಮಾಡುವ, ವೈಯಕ್ತಿಕ ಬಳಕೆಗೆ ಅಲ್ಪ ಪ್ರಮಾಣದ ಡ್ರಗ್ಸ್ ಹೊಂದುವುದನ್ನು ಅಪರಾಧ ಪಟ್ಟಿಯಿಂದ ಕೈಬಿಡುವ ತಿದ್ದುಪಡಿಗಳು ಮಂಡನೆ ಆಗಲಿವೆ.
ಮೂರು ಕೃಷಿ ಮಸೂದೆಯನ್ನು ಕಳೆದ ವರ್ಷ ಮುಂಗಾರು ಅಧಿವೇಶನದಲ್ಲಿ ಸಂಸತ್ ಅಂಗೀಕರಿಸಿತ್ತು. ರಾಷ್ಟ್ರಪತಿ ಅಂಕಿತದೊಂದಿಗೆ ಕಾಯ್ದೆಯಾದ ಇದನ್ನು ವಿರೋಧಿಸಿ ರೈತರು ಸುಮಾರು ಒಂದು ವರ್ಷ ಪರ್ಯಂತ ಚಳವಳಿ ನಡೆಸಿ ಕಡೆಗೂ ಈ ಕಾಯ್ದೆಯನ್ನು ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಹರತಾಳವನ್ನು ರೈತರು ನಿಲ್ಲಿಸಿಲ್ಲ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಾತ್ಮಕವಾಗಿ ಖಾತರಿ ಪಡಿಸುವಂತೆ ಮತ್ತು ಪ್ರತಿಭಟನೆಯ ಸಂದರ್ಭದಲ್ಲಿ ಜೀವ ಕಳೆದುಕೊಂಡು 700 ರೈತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ರೈತರ ಪ್ರತಿಭಟನೆ ಶನಿವಾರ (ನ.26) ಒಂದು ವರ್ಷ ಪೂರೈಸಿದೆ.
ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಂದಿನ ವರ್ಷ ಫೆಬ್ರವರಿ/ಮಾರ್ಚ್ನಲ್ಲಿ ನಡೆಯುವ ಕಾರಣ ಕೃಷಿ ಕಾಯ್ದೆಗಳನ್ನು ಬಿಜೆಪಿ ಹಿಂಪಡೆಯುವುದಾಗಿ ಘೋಷಿಸಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ರೈತರ ಬಗ್ಗೆ ನಿಜಕ್ಕೂ ಕಾಳಜಿ ಇದಿದ್ದರೆ ಈ ಕಾಯ್ದೆಯನ್ನೇ ತರುತ್ತಿರಲಿಲ್ಲ ಅಥವಾ ಕಾಯ್ದೆ ಹಿಂಪಡೆಯುವ ನಿಧರ್ಧಾರವನ್ನು ಮುಂಚೆಯೇ ಮಾಡುತ್ತಿತ್ತು. ಇದರಿಂದ 700 ರೈತರ ಜೀವ ಉಳಿಯುತಿತ್ತು. ಈಗ ಅದನ್ನು ಹಿಂಪಡೆಯುತ್ತಿರುವ ಉದ್ದೇಶ ಮತ ಬೇಟೆ ಬಿಟ್ಟು ಇನ್ನೇನೂ ಇಲ್ಲ. ಬಿಜೆಪಿಯದ್ದು ಸೋಗಲಾಡಿ ರಾಜಕಾರಣ ಎಂದು ಹಂಗಿಸಿವೆ.
ಇದನ್ನೂ ಓದಿ: Nagamohan Das: ಮಲೆನಾಡಿನ ಕೃಷಿಕರಿಗೆ ಕೃಷಿಗೆ ನೂತನ ಕೃಷಿ ಕಾಯಿದೆ ಮಾರಕ
Discussion about this post