ನವದೆಹಲಿ: ಕೋವಿಡ್-19 ಎರಡನೇ ಅಲೆಯಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ ದೈನಿಕ ಸೋಂಕಿನ ಪ್ರಕರಣವು ಏಳು ತಿಂಗಳ ಬಳಿಕ 14 ಸಾವಿರಕ್ಕಿಂತ ಕೆಳಗೆ ಇಳಿದಿದೆ. ಸೋಮವಾರ ಬೆಳಗ್ಗೆ ಕೊನೆಗೊಂಡ 24 ತಾಸಿನ ಅವಧಿಯಲ್ಲಿ 13,596 ಪ್ರಕರಣಗಳು ವರದಿಯಾಗಿದ್ದು, 230 ದಿನಗಳ ನಂತರ ಇಳಿಕೆ ಕಂಡಿದೆ.
ದೇಶದಲ್ಲಿ 1,89,694 (ಶೇ.0.56) ಸಕ್ರಿಯ ಪ್ರಕರಣಗಳಿದ್ದು, 221 ದಿನಗಳ ಬಳಿಕ ಸಕ್ರಿಯ ಪ್ರಕರಣಗಳ ಪ್ರಮಾಣ ತಗ್ಗಿದೆ. ನಿತ್ಯದ ಪಾಸಿಟಿವಿಟಿ ದರ ಶೇ. 1.37 ಇದ್ದು, ಕಳೆದ 49 ದಿನಗಳಿಂದ ಇದು ಶೇ. 3ಕ್ಕಿಂತ ಕೆಳಗಿದೆ. ಕೊರೊನಾ ವ್ಯಾಧಿಯಿಂದ ಮರಣ ಸಂಭವಿಸಲು ಆರಂಭವಾದ ನಂತರ ಇದೇ ಮೊದಲ ಬಾರಿಗೆ ಭಾನುವಾರ ಮುಂಬೈನಲ್ಲಿ ಕೋವಿಡ್ ಸೋಂಕಿತ ಯಾವುದೇ ರೋಗಿ ಸತ್ತಿಲ್ಲ. ಕೇರಳದಲ್ಲಿ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣ ವರದಿಯಾಗುತ್ತಿದ್ದು, ಭಾನುವಾರ 7,555 ಹೊಸ ಪ್ರಕರಣಗಳು ದೃಢಪಟ್ಟಿವೆ. ಈ ಮಧ್ಯೆ, ರಾಜ್ಯದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಜಾಡ್ಯ ಹೆಚ್ಚುವ ಆತಂಕ ಎದುರಾಗಿದೆ.
ಜಾಗತಿಕವಾಗಿ 24 ಕೋಟಿ ಕೊರೊನಾ ಪ್ರಕರಣ ಇದ್ದು, 48.98 ಲಕ್ಷ ಸಾವು ಸಂಭವಿಸಿದೆ. ಅಮೆರಿಕದಲ್ಲಿ ಅತಿ ಹೆಚ್ಚು ರೋಗಿಗಳು ಮತ್ತು ಸಾವು ಸಂಭವಿಸಿದೆ.
26ಕ್ಕೆ ಡಬ್ಲ್ಯುಎಚ್ಒ ಸಭೆ
ಭಾರತದಲ್ಲಿ ದೇಶೀಯವಾಗಿ ಲಸಿಕೆ ಅಭಿವೃದ್ಧಿ ಪಡಿಸಿರುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ಗೆ ಮಾನ್ಯತೆ ನೀಡುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್ಒ) ತಾಂತ್ರಿಕ ಸಲಹಾ ತಂಡ ಅ.26ರಂದು ಸಭೆ ನಡೆಸಲಿದೆ ಎಂದು ಡಬ್ಲ್ಯುಎಚ್ಒದ ಮುಖ್ಯ ವಿಜ್ಞಾನಿಯಾದ ಭಾರತ ಮೂಲದ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಲಸಿಕೆ ಅಭಿಯಾನಕ್ಕೆ ವಿಶ್ವಬ್ಯಾಂಕ್ ಶ್ಲಾಘನೆ
ದೇಶದಲ್ಲಿ ಭಾನುವಾರ ಸಂಜೆಗೆ ಕೊನೆಗೊಂಡಂತೆ 97.79 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದ್ದು, ಈ ವರ್ಷದ ಅಂತ್ಯಕ್ಕೆ 108 ಕೋಟಿ ವಯಸ್ಕರಿಗೆ ಎರಡೂ ಡೋಸ್ ಲಸಿಕೆ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಎಲ್ಲ ವಯಸ್ಕರಿಗೂ ಎರಡೂ ಡೋಸ್ ಲಸಿಕೆ ನೀಡಿದ ಮೊದಲ ರಾಜ್ಯ ಎಂಬ ಶ್ರೇಯಕ್ಕೆ ಉತ್ತರಾಖಂಡ ಪಾತ್ರವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 74 ಮಂದಿ ವಯಸ್ಕರು ಇದ್ದಾರೆ.
ಭಾರತದಲ್ಲಿ ಲಸಿಕಾ ಅಭಿಯಾನವು ಚುರುಕಿನಿಂದ ಮತ್ತು ಯಶಸ್ವಿಯಾಗಿ ನಡೆಯತ್ತಿದೆ ಎಂದು ವಿಶ್ವ ಬ್ಯಾಂಕ್ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Corona Lowest Daily Rise In 7 Months
ಇದನ್ನು ಓದಿ: ಕೊರೊನಾದಿಂದ ಅನಾಥ ಮಕ್ಕಳಿಗೆ 10 ಲಕ್ಷ ರೂ ಸ್ಟೈಫಂಡ್
ಇದನ್ನು ಓದಿ: ಕೇಂದ್ರ ಸರಕಾರದ ಸಕ್ಷಮ ಪ್ರಾಧಿಕಾರ ಕೊನೆಯ ಸರ್ಟಿಫಿಕೇಶನ್ ಬಳಿಕ ಮಕ್ಕಳಿಗೆ ಕೋವಿಡ್ ಲಸಿಕೆ
Discussion about this post