ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಫ್ಸ್ಪಿನರ್ ಹರಭಜನ್ ಸಿಂಗ್ ನಾಳೆಯಿಂದ ಪ್ರಾರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ T20 ಸರಣಿಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾ ಭಾರತವೇ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿದ್ದು 2-1 ಅಂತರದಿಂದ ಗೆಲ್ಲಲಿದೆಯೆಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಎರಡೂ ತಂಡಗಳು T20 ಸರಣಿಯಲ್ಲಿ ಮುಖಾಮುಖಿಯಾದಾಗ ಭಾರತ ತಂಡ ಕ್ಲೀನ್ಸ್ವೀಪ್ ಸಾಧಿಸಿದ್ದು ಈ ಬಾರಿ ನ್ಯೂಜಿಲೆಂಡ್ ತಂಡದಿಂದ ಹೆಚ್ಚಿನ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದವರು ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಪ್ರಾರಂಭಿಕ ಹಂತದಲ್ಲೇ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋತು ಪಂದ್ಯಾವಳಿಯಿಂದ ಹೊರಬಿದ್ದಿತ್ತು.
ಮೂರು ಪಂದ್ಯಗಳ ಈ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವು ಕೇನ್ ವಿಲಿಯಮ್ಸನ್ರ ಸೇವೆಯಿಂದ ವಂಚಿತವಾಗಲಿದ್ದು ಭಾರತ ತಂಡದ ಪೂರ್ಣಾವಧಿಯ ನಾಯಕತ್ವವನ್ನು ಪ್ರಥಮ ಬಾರಿಗೆ ರೋಹಿತ್ ಶರ್ಮ ವಹಿಸಲಿದ್ದಾರೆ. ಭಾರತ ತಂಡವು ಭರವಸೆ ಮೂಡಿಸಿರುವ ಯುವ ಆಟಗಾರರಿಂದ ತುಂಬಿದ್ದು ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆಂದು ಹರಭಜನ್ ತಿಳಿಸಿದ್ದಾರೆ. ಅವರಲ್ಲೂ ಇಬ್ಬರು ಆಟಗಾರರ ಮೇಲೆ ನನಗೆ ಹೆಚ್ಚಿನ ವಿಶ್ವಾಸವಿದೆಯೆಂದವರು ಹೇಳಿದ್ದಾರೆ.
ಯುವ ಆಟಗಾರ ಇಶಾನ್ ಕಿಶನ್ ಅಪಾರ ಪ್ರತಿಭೆಯನ್ನು ಹೊಂದಿದ್ದು ಮುಂದಿನ T20 ವಿಶ್ವಕಪ್ ಪಂದ್ಯಾವಳಿಯಲ್ಲಿ ಪ್ರಮುಖ ಆಟಗಾರನಾಗಲಿದ್ದಾರೆಂದು ಹೇಳಿದರು. ಅವರು 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿರುವುದರಿಂದ ಅವರಿಗೆ ಹೆಚ್ಚಿನ ಸಂಖ್ಯೆಯ ಅವಕಾಶಗಳನ್ನು ನೀಡಬೇಕಾದ ಅವಶ್ಯಕತೆಯಿದೆಯೆಂದು ವರದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು ಹರಭಜನ್ ಸಿಂಗ್. ಇಶಾನ್ ಅಲ್ಲದೇ ಮತ್ತೊಬ್ಬ ಆಟಗಾರ ಸೂರ್ಯಕುಮಾರ್ ಯಾದವ್ರನ್ನೂ ಹೆಸರಿಸಿದ ಹರಭಜನ್ ಸದ್ಯ ಅವರು ರನ್ ಗಳಿಸಲು ಪರದಾಡುತ್ತಿದ್ದರೂ ಮುಂದಿನ ವರ್ಷ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್ನಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಇತ್ತೀಚಿನ ಸೋಲಿನ ಕಹಿ ನೆನಪುಗಳನ್ನು ಮರೆಸುವಂತಹ ಆಟ ಆಡಬೇಕಾಗಿದೆ ಎಂದರು. ಸೂರ್ಯಕುಮಾರ್ ಯಾವುದೇ ಮಾದರಿಯ ಕ್ರಿಕೆಟ್ಗೆ ಹೊಂದಿಕೆಯಾಗಬಲ್ಲ ಪ್ರತಿಭಾವಂತನಾಗಿದ್ದು ಯಾವುದೇ ಕ್ರಮಾಂಕದಲ್ಲಿ ಆಡಬಲ್ಲ ಪರಿಣತಿ ಹೊಂದಿದ್ದಾರೆ ಎಂದೂ ಅವರು ಹೇಳಿದರು. ಸೂರ್ಯಕುಮಾರ್ ಕೆಲ ಪಂದ್ಯಗಳನ್ನು ಮಾತ್ರವಲ್ಲದೇ ಇಡೀ ಪಂದ್ಯಾವಳಿಯನ್ನೇ ಗೆಲ್ಲಿಸಿಕೊಡಬಹುದಾದಂತಹ ಆಟಗಾರನಾಗಿದ್ದು ನಾನು ಅವರ ಮುಂಬರುವ ಸಾಧನೆಯನ್ನು ಕಾತರದಿಂದ ಎದುರು ನೋಡುತ್ತಿದ್ದೇನೆಂದೂ ಹರಭಜನ್ ಹೇಳಿದ್ದಾರೆ.
Ex Indian Cricketer Harbhajan singh says Ishan Kishan and Suryakumar Yadav are the 2 key players he is going to watch out for future
ಇದನ್ನೂ ಓದಿ: World Diabetes Day: ಕ್ರಿಕೆಟ್ನಲ್ಲಿ ಮಾತ್ರವಲ್ಲದೇ ಮಧುಮೇಹದಲ್ಲೂ ಭಾರತದೊಂದಿಗೆ ಸ್ಪರ್ಧೆಗೆ ಬಿದ್ದಿರುವ ಪಾಕಿಸ್ತಾನ
Discussion about this post