ಬೆಂಗಳೂರು: ದುಬೈನಲ್ಲಿ ಕಳೆದ ಭಾನುವಾರವಷ್ಟೇ ಮುಕ್ತಾಯಗೊಂಡ T20 ವಿಶ್ವಕಪ್ ಪಂದ್ಯಾವಳಿಯ ಅಂತಿಮ ಪಂದ್ಯದ ಸೋಲಿನ ಕಹಿಯು ಇನ್ನೂ ಹಸಿರಾಗಿರುವಾಗಲೇ ನ್ಯೂಜಿಲೆಂಡ್ ಇಂದು ಭಾರತದ ವಿರುದ್ಧದ T20 ಸರಣಿಯ ಪ್ರಥಮ ಪಂದ್ಯವನ್ನಾಡಲಿದೆ. ಪ್ರಮುಖ ಪಂದ್ಯಾವಳಿಯ ಸೋಲಿನ ಸೂಕ್ತ ವಿಮರ್ಶೆಗೂ ಮುನ್ನ ಪಂದ್ಯವನ್ನಾಡಬೇಕಾಗಿರುವ ನ್ಯೂಜಿಲೆಂಡ್ ಸ್ಥಿತಿಗಿಂತ ಭಾರತದ ಸ್ಥಿತಿಯೂ ಭಿನ್ನವಾಗಿಲ್ಲ. ಪಂದ್ಯಾವಳಿಯ ಪ್ರಾರಂಭಿಕ ಸುತ್ತಿನಲ್ಲೇ ಪಾಕೀಸ್ತಾನ ಹಾಗೂ ನ್ಯೂಜೆಲೆಂಡ್ಗಳ ವಿರುದ್ಧ ಹೀನಾಯವಾಗಿ ಸೋತು ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದ ಭಾರತ ಈ ಸರಣಿಯನ್ನು ಗೆದ್ದು ಸೇಡು ತೀರಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದೆ.
ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧರಾಗಲು T20 ಸರಣಿಯಿಂದ ಹೊರಗುಳಿದಿದ್ದು ಮೊನ್ನೆಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಹೆಚ್ಚಿನ ಅವಕಾಶ ಪಡೆಯದ ಕೈಲ್ ಜೇಮಿಸನ್, ಟಾಡ್ ಆಸ್ಟಲ್, ಮತ್ತು ಮಾರ್ಕ್ ಚಾಪ್ಮನ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಟಿಮ್ ಸೌದೀ ಅವರನ್ನು T20 ಸರಣೀಗೆ ತಂಡದ ನಾಯಕನನ್ನಾಗಿ ಹೆಸರಿಸಲಾಗಿದೆ.
ಭಾರತಕ್ಕೂ ಸಹ ಸಿದ್ಧತೆಗೆ ಹೆಚ್ಚಿನ ಸಮಯಾವಕಾಶ ಸಿಕ್ಕಿಲ್ಲ. ಐಪಿಎಲ್ ಪಂದ್ಯಾವಳಿ ಕೂಡಾ ವಿಶ್ವಕಪ್ ಮುನ್ನವೇ ಮುಗಿದಿದ್ದು ಹೆಚ್ಚಿನ ವಿಶ್ರಾಂತಿ ಸಿಕ್ಕಿಲ್ಲ. ಈ ಸಮಸ್ಯೆಯಿಂದ ಹೊರಬರಲು ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಪ್ರತಿಭಾವಂತರು ಲಭ್ಯವಿರುವುದರಿಂದ ವಿವಿಧ ಮಾದರಿಯ ಕ್ರಿಕೆಟ್ಗೆ ಬೇರೆ-ಬೇರೆ ತಂಡಗಳನ್ನು ಹೊಂದುವ ಸಲಹೆಯೂ ಚರ್ಚಿತವಾಗುತ್ತಿದೆ. ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್ನಲ್ಲಿ ಆಡುತ್ತಿದ್ದಾಗ ಭಾರತದ ಇನ್ನೊಂದು ತಂಡ ಶ್ರೀಲಂಕಾ ಪ್ರವಾಸ ಮಾಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ.
ಆದರೆ ಸದ್ಯ ಭಾರತ ತಂಡದ ಪ್ರಮುಖ ಕೋಚ್ ರಾಹುಲ್ ದ್ರಾವಿಡ್ರ ಅಭಿಪ್ರಾಯದಂತೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಹಾಗೂ ಜಸ್ಪ್ರೀತ್ ಬುಮ್ರಾರಂತಹ ಪ್ರಮುಖ ಆಟಗಾರರು ಎಲ್ಲಾ ಮಾದರಿಯ ಕ್ರಿಕೆಟ್ ಆಡುವುದು ಅವಶ್ಯಕವಾಗಿದೆ. ಆಟಗಾರರ ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಪರಗಣಿಸುತ್ತಾ ಅವರೊಂದಿಗೆ ಸೂಕ್ತವಾಗಿ ಸಂವಾದಿಸುತ್ತಾ ಇಂತಹ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದ್ದು ಅವರು ಯಾವುದೇ ಮಾದರಿಯ ಪಂದ್ಯವಾಡಿದರೂ ಅವರು ಚುರುಕಾಗಿ ಹಾಗೂ ಅವರು ಆಡುತ್ತಿರುವ ಮಾದರಿಗೆ ಸೂಕ್ತವಾದ ಮನಸ್ಥಿತಿ ಹೊಂದಿರುವಂತೆ ನೋಡಿಕೊಳ್ಳಬೇಗಿದೆಯೆಂದರು ದ್ರಾವಿಡ್.
ಭಾರತ ತಂಡಕ್ಕೆ ಮುಂದಿನ ವರ್ಷವೂ ಬಿಡುವಿಲ್ಲದ ವರ್ಷವಾಗಿದ್ದು ಡಿಸೆಂಬರ್ 7ಕ್ಕೆ ಮುಗಿಯುವ ನ್ಯೂಜಿಲೆಂಡ್ ಸರಣಿಯ ನಂತರ 10 ದಿನಗಳ ವಿಶ್ರಾಂತಿ ದೊರೆಯಲಿದ್ದು ನಂತರ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಲಿದೆ ಎಂದು ದ್ರಾವಿಡ್ ಹೇಳಿದರು. ಇಲ್ಲಿಂದ ಮುಂದಿನ ವರ್ಷದ ಜುಲೈ ತಿಂಗಳವರೆಗೆ ಭಾರತೀಯರು ಎಡೆಬಿಡದೆ ಕ್ರಿಕೆಟ್ ಆಡಬೇಕಾಗಿದೆ ಎಂದು ಹೇಳಿದ ದ್ರಾವಿಡ್ ಎಲ್ಲಾ ಮಾದರಿಯ ಕ್ರಿಕೆಟ್ಗೂ ನಾವು ಸಮಾನ ಪ್ರಾಮುಖ್ಯತೆ ನೀಡಲಿದ್ದೇವೆ ಎಂದರು.
First of three T20 matches between India and Newzealand will be played today at Jaipur
ಇದನ್ನೂ ಓದಿ: World Diabetes Day: ಕ್ರಿಕೆಟ್ನಲ್ಲಿ ಮಾತ್ರವಲ್ಲದೇ ಮಧುಮೇಹದಲ್ಲೂ ಭಾರತದೊಂದಿಗೆ ಸ್ಪರ್ಧೆಗೆ ಬಿದ್ದಿರುವ ಪಾಕಿಸ್ತಾನ
ಇದನ್ನೂ ಓದಿ: Cricket again: ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ಗೆ ?
Discussion about this post