ಮುಂಬೈ: ಮಹಾರಾಷ್ಟ್ರ ಕೇಡರ್ನ ಹಿರಿಯ ಐಪಿಎಸ್ ಅಧಿಕಾರಿ ಪರಂಬೀರ್ ಸಿಂಗ್ ನಾಪತ್ತೆಯಾಗಿದ್ದಾರೆಂದು ಘೋಷಿಸಿದ್ದ ಬೆನ್ನಿಗೆ ಅವರು ಮುಂಬೈನ ಅಪರಾಧ ವಿಭಾಗದ 11ನೇ ಟಕಕ್ಕೆ ಗುರುವಾರ ಬೆಳಗ್ಗೆ 11ಗಂಟೆಗೆ ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ. ಸೋಮವಾರವಷ್ಟೆ ಬಂಧನದಿಂದ ಸುಪ್ರೀಂಕೋರ್ಟ್ ರಕ್ಷಣೆ ಪಡೆದ ಅವರು, ತಮ್ಮ ವಿರುದ್ಧ ಭ್ರಷ್ಟಾಚಾರ ಆಪಾದನೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾದರು.
ಚಂಡೀಗಡದಿಂದ ವಿಮಾನದಲ್ಲಿ ಬಂದ ಅವರು ಮುಂಬೈ ವಿಮಾನ ನಿಲ್ದಾಣದ ಹೊರಗೆ ಸುದ್ದಿಗಾರರ ಜತೆ ಮಾತನಾಡಿ, “ಕೋರ್ಟ್ ಸೂಚನೆಯಂತೆ ವಿಚಾರಣೆಗೆ ಬಂದಿರುವೆ. ನ್ಯಾಯಾಂಗದಲ್ಲಿ ಸಂರ್ಪೂಣ ನಂಬಿಕೆ ಇದೆ. ಎಲ್ಲಿಯೂ ಓಡಿ ಹೋಗಿರಲಿಲ್ಲ’ ಎಂದು ಹೇಳಿದ್ದಾರೆ. ತಮ್ಮ ಕಕ್ಷಿದಾರರು ಪರಾರಿಯಾಗಿರಲಿಲ್ಲ. ಜೀವಭಯವಿದ್ದ ಕಾರಣ ಮುಂಬೈನಿಂದ ಹೊರಗೆ ಹೋಗಿದ್ದರು ಎಂದು ಸಿಂಗ್ ಪರ ವಕೀಲರು ಸುಪ್ರೀಂಕೋರ್ಟ್ನಲ್ಲಿ ಸೋಮವಾರ ವಾದಿಸಿದ್ದರು.
ಘಟನೆಯ ಹಿನ್ನೆಲೆ
ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ನೂರು ಕೋಟಿ ರೂಪಾಯಿ ಲಂಚ ವಸೂಲಿ ಆರೋಪ ಮಾಡಿರುವ ಪರಂಬೀರ್ ಸಿಂಗ್ ವಿರುದ್ಧವೂ ಭ್ರಷ್ಟಾಚಾರ ನಡೆಸಿದ ಆಪಾದನೆ ಮೇಲೆ ದೂರು ದಾಖಲಾಗಿದೆ. ಈ ಸಂಬಂಧ ವಿಚಾರಣೆಗೆ ಗುರಿಪಡಿಸಲು ಅವರನ್ನು ಹುಡುಕಲಾಗುತ್ತಿತ್ತು.
ಕಳೆದ ಫೆಬ್ರವರಿಯಲ್ಲಿ ಮುಕೇಶ್ ಅಂಬಾನಿಯವರ ನಿವಾಸದ ಬಳಿ ಸ್ಪೋಟಕ ಸಾಮಗ್ರಿ ಇದ್ದ ಕಾರು ಪತ್ತೆ ಆಗಿತ್ತು. ಈ ಕಾರಿನ ಮಾಲೀಕ ಕೂಡ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಈ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿ ಸಚಿನ್ ವಝೆ ಪಾತ್ರ ಇರುವುದು ಪತ್ತೆಯಾದ ನಂತರ ಅವರನ್ನು ಎನ್ಐಎ ಬಂಧಿಸಿದೆ. ವಝೆಯನ್ನು ಕೆಲಸದಿಂದಲೂ ವಜಾ ಮಾಡಲಾಗಿದೆ. ಸ್ಫೋಟಕ ಸಾಮಗ್ರಿ ಇದ್ದ ಕಾರಿನ ಪ್ರಕರಣವನ್ನು ಸಮರ್ಪಕವಾಗಿ ತನಿಖೆ ಮಾಡಲಿಲ್ಲವೆಂಬ ಕಾರಣಕ್ಕೆ ಮುಂಬೈ ಪೊಲೀಸ್ ಕಮಿಷನರ್ ಆಗಿದ್ದ ಪರಂಬೀರ್ ಸಿಂಗ್ರನ್ನು ಗೃಹ ರಕ್ಷಕ ದಳದ ಮುಖ್ಯಸ್ಥರ ಹುದ್ದೆಗೆ ಎತ್ತಂಗಡಿ ಮಾಡಲಾಯಿತು. ಈ ಸಮಯದಲ್ಲಿ ಅವರು ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಹೋಟೆಲ್, ಬಾರ್, ರೆಸ್ಟೋರೆಂಟ್ಗಳಿಂದ ತಿಂಗಳಿಗೆ ನೂರು ಕೋಟಿ ರೂಪಾಯಿ ವಸೂಲು ಮಾಡಲು ಹುಕ್ಕುಂ ಮಾಡಿದ್ದಾರೆಂದು ಆಪಾದಿಸಿದರು. ಈ ಬಗ್ಗೆ ಬಾಂಬೆ ಹೈಕೋರ್ಟ್ಗೆ ದೂರು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್, ದೂರನ್ನು ಸಿಬಿಐ ಪರಿಶೀಲನೆಗೆ ಒಪ್ಪಿಸಿ, ಸತ್ಯವಿದ್ದರೆ ಪ್ರಕರಣ ದಾಖಲಿಸಲು ಸೂಚಿಸಿತ್ತು.
ಇದನ್ನೂ ಓದಿ: ಮುಂಬೈ ನಗರದ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ನಾಪತ್ತೆ
Discussion about this post