ನವದೆಹಲಿ: ತುರ್ತು ದಾಸ್ತಾನು ಇರಿಸಲಾಗಿರುವ ಕಚ್ಚಾ ತೈಲದ ಪೈಕಿ 50 ಲಕ್ಷ ಬ್ಯಾರಲ್ ಮೀಸಲು ಕಚ್ಚಾ ತೈಲವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಇಳಿಕೆಯಾಗುವ ಸಾಧ್ಯತೆ ಇದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ದೆಹಲಿಯಲ್ಲಿ ಮಂಗಳವಾರ ಸಚಿವಾಲಯದ ಉನ್ನತ ಅಧಿಕಾರಿಗಳು ಮತ್ತು ತೈಲ ಮಾರಾಟ ಕಂಪನಿಗಳ ಅಧಿಕಾರಿಗಳ ಜತೆ ಸಭೆ ನಡೆಸಿದ ಬೆನ್ನಲ್ಲೇ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಮಾಡುವಂತೆ ಇತ್ತೀಚೆಗೆ ಭಾರತವು ತೈಲ ಮಾರಾಟ ಮಾಡುವ ರಾಷ್ಟ್ರಗಳ ಒಕ್ಕೂಟಕ್ಕೆ ಮನವಿ ಮಾಡಿತ್ತು. ಆದರೆ, ಕಡಿಮೆ ಬೆಲೆ ಇದ್ದಾಗ ಖರೀದಿಸಿ ಸಂಗ್ರಹಿಸಿ ಇಟ್ಟಿದ್ದ ತೈಲ ಮಾರಾಟ ಮಾಡುವಂತೆ ಅವು ಭಾರತಕ್ಕೆ ಸೂಚಿಸಿದ್ದವು.
ಇದನ್ನೂ ಓದಿ: Fuel price: ಸ್ಥಿರತೆ ಕಾಯ್ದುಕೊಂಡ ಇಂಧನ ದರ; ಪ್ರಮುಖ ನಗರಗಳಲ್ಲಿ ಬೆಲೆಯಷ್ಟು?
ದೇಶದ ಪೂರ್ವ ಹಾಗೂ ಪಶ್ಚಿಮ ಕರಾವಳಿಯ 3 ಕಡೆ ನೆಲದಡಿಯ ಸಂಗ್ರಹಾಗಾರಗಳಲ್ಲಿ ಸುಮಾರು 3.8 ಕೋಟಿ ಬ್ಯಾರಲ್ ಕಚ್ಚಾ ತೈಲವನ್ನು ಭಾರತ ಸಂಗ್ರಹಿಸಿಟ್ಟಿದೆ. ಈ ಪೈಕಿ 50 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಏಳೆಂಟು ದಿನಗಳಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳೂರಿನ ಎಂಆರ್ಪಿಎಲ್ ಹಾಗೂ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಮೂಲಕ ಕಚ್ಚಾ ತೈಲ ಮಾರಾಟ ಮಾಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಕ್ರಮವಾಗಿ 5 ರೂಪಾಯಿ ಮತ್ತು 10 ರೂಪಾಯಿಯಷ್ಟು ಇಳಿಕೆ ಮಾಡಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರ ಕೂಡ ಅಬಕಾರಿ ಸುಂಕವನ್ನು 7 ರೂಪಾಯಿಷ್ಟು ಕಡಿತಗೊಳಿಸಿತ್ತು.
Discussion about this post