ಬೆಂಗಳೂರು: ವಿವಾದಿತ ಕೃಷಿ ಕಾಯ್ದೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಾಪಸ್ ಪಡೆದಿರುವುದು ಸ್ವಾಗತಾರ್ಹವೇ ಆದರೂ, ದೇಶದ ರೈತರಲ್ಲಿ ಇನ್ನೂ ಇರುವ ಅನುಮಾನಗಳನ್ನು ಅವರು ನಿವಾರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ ಮಾಡಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ಉತ್ತರ ಪ್ರದೇಶವು ಸೇರಿ ಮುಂಬರುವ ಐದು ರಾಜ್ಯಗಳ ಚುನಾವಣೆಯನ್ನು ದೃಷ್ಟಿಯಲ್ಲಿತ್ತುಕೊಂಡು ಈ ನಿರ್ಧಾರ ಮಾಡಲಾಗಿದೆ. ಏನೇ ಆದರೂ ಕೇಂದ್ರ ಸರ್ಕಾರ ಅಂತಿಮವಾಗಿ ರೈತರ ಹೋರಾಟಕ್ಕೆ ಮಣಿದಿದೆ ಎಂದರು.
ಕೇಂದ್ರ ಸರಕಾರ ರೈತರ ಜತೆ ಚರ್ಚೆ ಮಾಡದೇ ಏಕಪಕ್ಷೀಯವಾಗಿ ಈ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತು. ಈಗ ಅದೇ ರೀತಿ ಚರ್ಚೆಯೇ ಇಲ್ಲದೆ ಕಾಯ್ದೆಗಳನ್ನು ವಾಪಸ್ ಪಡೆದುಕೊಂಡಿದೆ. ನಿಜಕ್ಕೂ ಸರಕಾರಕ್ಕೆ ಬದ್ಧತೆ, ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಕಾಯ್ದೆಗಳ ಜಾರಿಗೆ ಮುನ್ನವೇ ಕೃಷಿಕರ ಜತೆ ಮಾತುಕತೆ ನಡೆಸಬೇಕಾಗಿತ್ತು ಎಂದರು ಕುಮಾರಸ್ವಾಮಿ ಅವರು.
ಕೃಷಿ ಕಾಯ್ದೆಗಳ ವಾಪಸಾತಿ ವಿಷಯದಲ್ಲಿ ಯಾರೂ ರಾಜಕೀಯದ ಮೈಲೇಜ್ ತೆಗೆದುಕೊಳ್ಳುವ ಕೆಲಸ ಮಾಡಬಾರದು. ಕಾಯ್ದೆಗಳ ರದ್ದತಿ ರೈತ ಹೋರಾಟಕ್ಕೆ ಸಂದ ಜಯ. ಹುತಾತ್ಮ ಅನ್ನದಾತರಿಗೆ ಈ ವಿಜಯವನ್ನು ಅರ್ಪಣೆ ಮಾಡಬೇಕು. ಯಾವುದೇ ಪಕ್ಷಗಳು ಬೆನ್ನು ತಟ್ಟಿಕೊಳ್ಳುವ ಅಗತ್ಯವಿಲ್ಲ. ಇದೇನಿದ್ದರೂ ರೈತರ ಹೋರಾಟಕ್ಕೆ ಸಂದಿರುವ ಗೆಲುವು ಎಂದು ಅವರು ಹೇಳಿದರು.
ಮೊದಲೇ ಸ್ಪಂದಿಸಿದ್ದರೆ ಮುಜುಗರ ತಪ್ಪುತ್ತಿತ್ತು
ರೈತರು ದೆಹಲಿ ಮತ್ತು ಉತ್ತರ ಭಾರತದ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆ ಶುರು ಮಾಡಿದ ಸಂದರ್ಭದಲ್ಲೇ ಸ್ಪಂದನೆ ಮಾಡಿದ್ದಿದ್ದರೆ ಸರಕಾರಕ್ಕೆ ಈ ಮಟ್ಟದ ಮುಜುಗರ ಆಗುತ್ತಿರಲಿಲ್ಲ. ಮೋದಿ ಅವರ ಏಕಾಏಕಿ ನಿರ್ಧಾರದಲ್ಲಿ ವಿಶ್ವಾಸದ ಕೊರತೆಯಿದೆ. ಚುನಾವಣೆಗಳ ಲಾಭ, ನಷ್ಟ ಇಟ್ಟುಕೊಂಡು ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೃಷಿ ಕಾಯ್ದೆಗಳ ಬಗ್ಗೆ ರೈತ ಮುಖಂಡರನ್ನು ಮಾತುಕತೆಗೆ ಕರೆಯದೇ, ತಜ್ಞರ ಬಳಿ ಕೂಡ ಚರ್ಚಿಸದೇ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ರೈತರಲ್ಲಿ ಅನುಮಾನಗಳು ಮೂಡಿವೆ. ಅವುಗಳನ್ನು ನಿವಾರಿಸಬೇಕಾದ ಹೊಣೆ ಕೇಂದ್ರ ಸರಕಾರದ್ದು ಎಂದು ಅವರು ಹೇಳಿದರು.
ಇದನ್ನೂ ಓದಿ: Farm Laws: ವಿವಾದಿತ ಕೃಷಿಕಾಯ್ದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರ
Discussion about this post