ಮಂಡ್ಯ: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬೇರೊಂದು ಪಕ್ಷಕ್ಕೆ ಬೆಂಬಲ ಅಥವಾ ಸಹಕಾರ ನೀಡುವ ಬಗ್ಗೆ ನಾಳೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಮಂಡ್ಯದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ನಾಳೆ ಬೆಳಗ್ಗೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದೇನೆ. ಅಲ್ಲಿ ಎಲ್ಲ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸುತ್ತೇನೆ ಎಂದರು.
ಈ ಕ್ಷಣದವರೆಗೂ ನಾನು ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಈ ಬಗ್ಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಕುಮಾರಸ್ವಾಮಿ ಅವರೇ ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ. ಈವರೆಗೂ ಬಿಜೆಪಿ ಅಧಿಕೃತವಾಗಿ ನಮ್ಮ ಬೆಂಬಲ ಕೇಳಿಲ್ಲ. ಯಡಿಯೂರಪ್ಪ ಅವರು ಮಾತ್ರ ಒಂದೆರಡು ಸಲ ಈ ಬಗ್ಗೆ ಮಾತನಾಡಿದ್ದಾರೆ. ಪ್ರತಿ ಚುನಾವಣೆ ಬಂದಾಗಲೂ ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ವಿರುದ್ಧ ಹುನ್ನಾರ, ಅಪಪ್ರಚಾರ ನಡೆಸುವುದು ಸಾಮಾನ್ಯವಾಗಿಬಿಟ್ಟಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿದ್ದು ಹಾಸನದಲ್ಲಿ ಐಐಟಿ ಸ್ಥಾಪನೆಗಾಗಿ ಮಾತ್ರ ಎಂದು ಸ್ವತಃ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೇ ಹೇಳಿದ್ದಾರೆ. ಈ ಐಐಟಿ ಹದಿನೈದು ವರ್ಷಗಳ ಬೇಡಿಕೆ. ಆದರೆ, ಕಾಂಗ್ರೆಸ್ ನಾಯಕರು ಈ ಭೇಟಿಯ ಬಗ್ಗೆ ಸಣ್ಣತನದ ಪ್ರತಿಕ್ರಿಯೆಗಳನ್ನು ನೀಡಿದರಲ್ಲದೆ, ಚುನಾವಣೆ ಮೈತ್ರಿ ಬಗ್ಗೆ ಇಬ್ಬರು ನಾಯಕರು ಚರ್ಚಿಸಿದರು ಎಂದು ಅಪಪ್ರಚಾರ ನಡೆಸಿದರು. ಆದರೆ ಮೈತ್ರಿ ಬಗ್ಗೆ ನರೇಂದ್ರ ಮೋದಿ ಅವರ ಜತೆಗೂ ಚರ್ಚೆಯಾಗಿಲ್ಲ. ಬದಲಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತ್ರ ಗೌಡರು ಚರ್ಚೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷದ ನಾಯಕರು ಕೂಡ ನಮ್ಮ ಪಕ್ಷದ ಬೆಂಬಲ ಕೇಳಿಲ್ಲ. ಹಾಗಂತ ಬಿಜೆಪಿ ಪಕ್ಷವೂ ಬೆಂಬಲ ಕೋರಿಲ್ಲ. ಯಡಿಯೂರಪ್ಪನವರು ಎರಡ್ಮೂರು ಕಡೆ ಮಾತನಾಡಿ, ಎಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಹಾಕಿಲ್ಲವೋ ಅಲ್ಲಿ ಬಿಜೆಪಿಗೆ ಬೆಂಬಲ ನೀಡಲಿ ಎಂದು ಮನವಿ ಮಾಡಿದ್ದಾರೆ. ಹಾಗೆಯೇ, ನಿನ್ನೆ ಮಂಡ್ಯದಲ್ಲೇ ಯಡಿಯೂರಪ್ಪ ಅವರು ಹೇಳಿಕೆ ನೀಡಿ; ಚುನಾವಣೆ ಮೈತ್ರಿ ಇಲ್ಲ, ಬದಲಿಗೆ ಸಹಕಾರ ಕೇಳಿದ್ದೇವೆ ಎಂದಷ್ಟೇ ಹೇಳಿದ್ದಾರೆ. ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ಪಕ್ಷದ ನಿರ್ಧಾರವನ್ನು ತಿಳಿಸಲಾಗುವುದು. ಜೆಡಿಎಸ್ ಆರು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದೆ. ಇಷ್ಟೂ ಕಡೆ ಮೂರು ಪಕ್ಷಗಳ ಅಭ್ಯರ್ಥಿಗಳು ಗೆಲ್ಲಲು ಭಾರೀ ಹಣಾಹಣಿ ನಡೆಸುತ್ತಿವೆ. ಬಿಜೆಪಿ ಕೂಡ ಸರಿಸಮನಾಗಿ ಹೋರಾಟ ನಡೆಸುತ್ತಿದೆ. ಆ ಪಕ್ಷದಿಂದ ನಮಗೇನು ಸಹಕಾರ ಇಲ್ಲ. ಅವರ ಮತಗಳನ್ನು ನಮ್ಮ ಅಭ್ಯರ್ಥಿಗಳಿಗೆ ಕೊಡುವಂತೆ ಅವರೇನು ಸೂಚನೆ ನೀಡಿಲ್ಲ. ನಾವು ಸ್ಪರ್ಧಿಸಿರುವ ಆರು ಸ್ಥಾನಗಳಲ್ಲೂ ನಮ್ಮನ್ನು ಮುಳುಗಿಸ್ತೀವಿ ಅಂತಾರೆ. ಈಗ ಮಂಡ್ಯ ಜಿಲ್ಲೆಯನ್ನೇ ಆವರಿಸಿಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ಬಿಜೆಪಿಯವರು ನಮ್ಮ ಶತ್ರು ಪಕ್ಷವೇ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ನಮಗೆ ಸರಿ ಸಮನಾದ ಶತ್ರುಗಳೇ ಎಂದು ಅವರು ವಿವರಿಸಿದರು.
ಕೇವಲ ಜೆಡಿಎಸ್ ಪಕ್ಷದ ಮತಗಳನ್ನು ಕಸಿಯಲು ಕಾಂಗ್ರೆಸ್ ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿದೆ. ನಮ್ಮ ಪಕ್ಷವನ್ನು ಮುಗಿಸುವುದೇ ಅವರ ಅಜೆಂಡಾ ಆಗಿದೆ. ಆದರೆ, ಜನರ ಆಶೀರ್ವಾದ ಇರುವ ಜೆಡಿಎಸ್ಪಕ್ಷವನ್ನು ನಿರ್ನಾಮ ಮಾಡುವುದು ಅಸಾಧ್ಯ.2023ರ ವಿಧಾನಸಭೆ ಚುನಾವಣೆಯಲ್ಲಿ ನಾವು 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಈ ಚುನಾವಣೆಯಲ್ಲಿ 19 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳಿಲ್ಲ. ಹಾಗಂತ ಈ ಚುನಾವಣೆಯಲ್ಲೂ ನಾವು ಯಾರ ಜತೆಗೂ ಮೈತ್ರಿ ಮಾಡಿಕೊಂಡಿಲ್ಲ. ನಮ್ಮ ಹೇಳಿಕೆಗಳನ್ನು ತಮಗೆ ಬೇಕಾದ ಹಾಗೆ ಗ್ರಹಿಸಿಕೊಂಡರೆ ನಾವೇನು ಮಾಡಲು ಸಾಧ್ಯ? ಯಡಿಯೂರಪ್ಪ ಅವರು ಬೆಂಬಲ ಕೇಳಿದ್ದಾರೆ ನಿಜ. ಅವರು ಈಗ ಮಾಜಿ ಮುಖ್ಯಮಂತ್ರಿಗಳು. ಪಕ್ಷದ ಪದಾಧಿಕಾರಿಗಳಲ್ಲ. ಅವರು ವೈಯಕ್ತಿಕವಾಗಿ ಸಹಕಾರ ಕೇಳಿದ್ದಾರೆ. ಮುಖ್ಯಮಂತ್ರಿಗಳು ಕೂಡ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರ ವೈಯಕ್ತಿಕ ಮಟ್ಟದಲ್ಲಿ ಚರ್ಚೆ ಆಗಿದೆ, ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಯಾವುದೇ ಊಹಾಪೂಹದಲ್ಲಿ ಸುದ್ದಿಗಳು ಬಿತ್ತರ ಆಗುವುದು ಬೇಡ. ನಾಳೆಯ ದಿನ ಎಲ್ಲ ವಿಷಯವನ್ನು ನಾನು ತಿಳಿಸುತ್ತೇನೆ ಎಂದು ಜೆಡಿಎಸ್ ವರಿಷ್ಠರೂ ಆಗಿರುವ ಅವರು ತಿಳಿಸಿದರು.
ನನ್ನದು ಕಟುಕ ಹೃದಯದ ಸಂಸ್ಕೃತಿ ಅಲ್ಲ
ನನ್ನನ್ನು ಕಣ್ಣೀರಸ್ವಾಮಿ ಎಂದು ಕರೆದಿರುವ ಸಿದ್ದರಾಮಯ್ಯ ಬಗ್ಗೆ ಹೇಳುವುದಾದರೆ, ಇನ್ನು ಮುಂದೆ ನಾನು ಕಣ್ಣೀರು ಹಾಕೋದಿಲ್ಲ. ಜನ ಸಾಮಾನ್ಯರ ಕಷ್ಟಗಳನ್ನು ನೋಡಿದಾಗ ಹಾಗೆ ಆಗುತ್ತದೆ. ನಾನು ಮೊದಲಿನಿಂದಲೂ ಭಾವನಾತ್ಮಕ ಸಂಸ್ಕೃತಿಯಲ್ಲಿ ಬೆಳೆದು ಬಂದಿದ್ದೇನೆ. ನಾವು ಕಟುಕ ಹೃದಯದ ಸಂಸ್ಕೃತಿಯಲ್ಲಿ ಬಂದವರಲ್ಲ. ರಾಜಕಾರಣದಲ್ಲಿ ಮತ ಪಡೆಯಲು ಕಣ್ಣೀರು ಹಾಕಿದವನಲ್ಲ ನಾನು. ಮಂಡ್ಯದ ಕನಕನಮರಡಿ ಬಳಿ ನಾಲೆಗೆ ಬಸ್ಬಿದ್ದು ಪ್ರಯಾಣಿಕರು ಅಸುನೀಗಿದಾಗ, ಅದರಲ್ಲಿ ಪುಟ್ಟ ಮಕ್ಕಳು ಶವವಾಗಿ ಕಂಡಾಗ ನಾನು ದುಃಖ ವ್ಯಕ್ತಪಡಿಸಿದ್ದೇನೆ. ಆಗ ನಾನು ಮುಖ್ಯಮಂತ್ರಿ ಆಗಿದ್ದೆ. ಬಿಜೆಪಿಯ ಪಕ್ಷಕ್ಕೆ ಸೇರಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ನಿನ್ನೆ ಮಂಡ್ಯದಲ್ಲಿ ಹೇಳಿರುವಂತೆ, ಕಾಂಗ್ರೆಸ್ನಾಯಕರು 6 ರೂಪಾಯಿ, 5 ರೂಪಾಯಿ, 2 ರೂಪಾಯಿಗೆಲ್ಲ ಪಕ್ಷದ ಅಭ್ಯರ್ಥಿ ಮನೆ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದಾರೆ ಎಂದು ಹೇಳಿದ್ದಾರೆ. ಸಚಿವರ ಹೇಳಿಕೆಯನ್ನು ಗಮನಿಸಿದರೆ ಈ ಜಿಲ್ಲೆಯ ಕಾಂಗ್ರೆಸ್ನಾಯಕರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದು ಅಯ್ಯೋ ಎಂದು ಎನಿಸುತ್ತಿದೆ. ಜೆಡಿಎಸ್ ಪಕ್ಷವನ್ನು ಮುಗಿಸೇಬಿಟ್ಟಿದ್ದೇವೆ ಎನ್ನುತ್ತಿರುವ ಮಹಾನ್ನಾಯಕರ ಹೀನಾಯ ಸ್ಥಿತಿಯ ಬಗ್ಗೆ ಮರುಕ ಉಂಟಾಗುತ್ತಿದೆ. ಇಂಥ ಪರಿಸ್ಥಿತಿ ಯಾರಿಗೂ ಬರಬಾರದು ಅನಿಸುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದರು. ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಪರಿಷತ್ಚುನಾವಣೆಯ ಮಂಡ್ಯ ಜಿಲ್ಲೆಯ ಪಕ್ಷದ ಅಭ್ಯರ್ಥಿ ಅಪ್ಪಾಜಿ ಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಇದನ್ನೂ ಓದಿ: ಕಮಿಷನ್ ದಂದೆ: ಸ್ವತಂತ್ರ ಆಯೋಗ ರಚಿಸಿ ತನಿಖೆ ನಡೆಸಲು ಸಿದ್ದರಾಮಯ್ಯ ಆಗ್ರಹ
(HD Kumaraswamy says Vidhana Parishad alliance decision will take tomorrow)
Discussion about this post