ನವದೆಹಲಿ: ಪೂರ್ವ ಲಡಾಖ್ನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ಬಳಿಯ ಉದ್ವಿಗ್ನತೆ ತಗ್ಗಿಸಲು ಭಾರತ ಮತ್ತು ಚೀನಾ ಸೇನೆಯ ಕಮಾಂಡರ್ ಹಂತದ ಅಧಿಕಾರಿಗಳ ಮಧ್ಯೆ ನಡೆಯುತ್ತಿರುವ ಮಾತುಕತೆಯ 13ನೇ ಸಭೆ ವಿಫಲವಾಗಿದೆ. ಪೂರ್ವ ಲಡಾಖ್ ಗಡಿ ಬಳಿಯ ಉದ್ವಿಗ್ನತೆ ಕಡಿಮೆ ಮಾಡಲು ಭಾರತ-ಚೀನಾ ಸೇನಾ ಕಮಾಂಡರ್ ಹಂತದಲ್ಲಿ ಭಾನುವಾರ ನಡೆದ 13ನೇ ಸುತ್ತಿನ ಮಾತುಕತೆ ವಿಫಲವಾಗಿದೆ.
ಗಡಿಯಲ್ಲಿ ಬಾಕಿ ಉಳಿದಿರುವ ಎರಡು ಕಡೆ (ಹಾಟ್ಸ್ಪ್ರಿಂಗ್ಸ್ ಮತ್ತು ದೆಪ್ಸಾಂಗ್) ಸೇನೆ ಹಿಂದಕ್ಕೆ ಕರೆಯಿಸಿಕೊಳ್ಳುವ ವಿಷಯದಲ್ಲಿ ಚೀನಾ ಮೊಂಡುತನ ಮಾಡುತ್ತಿದೆ. ಮಾತುಕತೆಯಲ್ಲಿ ಪ್ರಗತಿ ಕಾಣುವ ಪ್ರಸ್ತಾವಕ್ಕೆ ಚೀನಾ ಮುಂದಡಿ ಇರಿಸುತ್ತಿಲ್ಲ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
‘ನಾವು ಬಾಕಿ ಇರುವ ಎರಡು ಕಡೆಗಳಲ್ಲಿ ಸೇನೆ ಹಿಂಪಡೆಯುವ ಪ್ರಸ್ತಾವ ಮಾಡಿದೆವು. ಈ ವಿಷಯ ಎತ್ತಿದಾಗಲೆಲ್ಲಾ ಚೀನಾ ವಿಷಯಾಂತರ ಮಾಡುತ್ತಿತ್ತು. ಬಗ್ಗೆ ಆಸಕ್ತಿ ತೋರಲಿಲ್ಲ. ಇದು ಮಾತುಕತೆ ವಿಫಲದ ಸುಳಿವನ್ನು ನೀಡಿತು. ಆದರೆ, ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದೆಕೊಳ್ಳಲು ಸಂವಹನದ ವಿಷಯದಲ್ಲಿ ಸಹಕಾರ ನೀಡಲು ಚೀನಾ ಒಪ್ಪಿತು’ ಎಂದು ಹೇಳಿದೆ.
‘ಉಭಯ ದೇಶಗಳ ದ್ವೀಪಕ್ಷೀಯ ಸಂಬಂಧ ಸಮಗ್ರ ದೃಷ್ಟಿಕೋನದಲ್ಲಿ ಗಡಿಯಲ್ಲಿ ಬಾಕಿರುವ ವಿವಾದಗಳನ್ನು ಶೀಘ್ರ ಒಪ್ಪಂದ ಮತ್ತು ಶಿಷ್ಟಾಚಾರದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳುವುದು ನಮ್ಮ ಉದ್ದೇಶವಾಗಿತ್ತು. ಚೀನಾ ಕೂಡ ಇದಕ್ಕೆ ಸ್ಪಂದಿಸುತ್ತದೆ ಎಂಬ ನಮ್ಮ ನಿರೀಕ್ಷೆ ಕೈಗೂಡಲಿಲ್ಲ’ ಎಂದು ಸೇನೆ ತಿಳಿಸಿದೆ.
ಚೀನಾ ಸೇನೆ ಹೇಳಿಕೆ
ಮಾತುಕತೆ ಕುರಿತಂತೆ ಚೀನಾ ಪೂರ್ವ ಸೇನಾ ಥಿಯೇಟರ್ ಕಮಾಂಡ್ ಹೇಳಿಕೆ ಬಿಡುಗಡೆ ಮಾಡಿದ್ದು, ಭಾರತದ ಸೇನೆಯು ಅಸಮಂಜಸ ಮತ್ತು ಅವಾಸ್ತವಿಕ ಬೇಡಿಕೆಗಳನ್ನು ಮಂಡಿಸಿದ್ದರಿಂದಲೇ ಮಾತುಕತೆ ವಿಫಲವಾಯಿತು. ಬಾಕಿ ಇರುವ ಕಡೆ ಕೂಡಲೇ ಸೇನೆ ಹಿಂಪಡೆಯಬೇಕು ಎಂಬ ಒತ್ತಾಯಕ್ಕೆ ಭಾರತ ಅಂಟಿಕೊಂಡ ಕಾರಣ ಚರ್ಚೆ ಮುಂದುವರಿಯಲಿಲ್ಲ ಎಂದಿದೆ.
ಎಂಟೂವರೆ ತಾಸು ಸಭೆ
ಚೀನಾದ ಚುಶುಲ್ ಮಾಲ್ಡಾ ಭಾಗದಲ್ಲಿ ಬೆಳ್ಳಗೆ 10.30ಕ್ಕೆ ಆರಂಭವಾದ ಮಾತುಕತೆ, ಎಂಟೂವರೆ ತಾಸು ನಡೆದು ಸಂಜೆ 7ರ ಹೊತ್ತಿಗೆ ಮುಗಿತು. ಹಾಟ್ಸ್ಪ್ರಿಂಗ್ಸ್ (ಗಸ್ತು ಸರಹದ್ದು 15) ಮತ್ತು ದೆಪ್ಸಾಂಗ್ನಲ್ಲಿ ಸೇನೆ ವಾಪಸು ಕರೆಯಿಸಿಕೊಳ್ಳುವ ವಿಷಯ ಕಗ್ಗಂಟಾಯಿತು. ಎರಡು ತಿಂಗಳ ಹಿಂದೆ ನಡೆದಿದ್ದ ಮಾತುಕತೆಯಲ್ಲಿ ಗೋಗ್ರಾ (ಗಸ್ತು ಸರಹದ್ದು 17ಎ)ದಿಂದ ಸೇನೆ ವಾಪಸಾತಿಗೆ ಉಭಯ ಸೇನೆಗಳು ಒಪ್ಪಿದ್ದವು.
ಸಂಘರ್ಷದ ಹಿನ್ನೆಲೆ
2020ರ ಮೇನಲ್ಲಿ ಚೀನಾ ಸೇನೆ ಗಡಿ ಅತಿಕ್ರಮಿಸಿದ್ದರಿಂದ ಪೂರ್ವ ಲಡಾಖ್ನಲ್ಲಿ ಘರ್ಷಣೆ ಭುಗಿಲೆದಿತು. ಗಲ್ವಾನ್ ಕಣಿವೆಯಲ್ಲಿ ಜೂನ್ 15ರ ಮಧ್ಯರಾತ್ರಿ ಘರ್ಷಣೆ ಏರ್ಪಟ್ಟು ಭಾರತದ 20 ಯೋಧರು ಹುತಾತ್ಮರಾಗಿದ್ದರು. ಚೀನಾ ಕಡೆ 40 ಯೋಧರು ಸತ್ತಿದ್ದಾರೆ ಎನ್ನಲಾಗಿದೆ. ಆದರೆ, ಚೀನಾ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ಘಟನೆಯ ನಂತರ ಗಡಿಯಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿತು ಉಭಯ ದೇಶಗಳು 60 ಸಾವಿರದಷ್ಟು ಸೈನಿಕರು, ಯುದ್ಧ ಪರಿಕರಗಳನ್ನು ಗಡಿ ಸೂಕ್ಷ್ಮ ಸ್ಥಳಗಳಲ್ಲಿ ತಂದು ನಿಲ್ಲಿಸಿದ್ದವು. ಇದರಿಂದ ಪ್ಯಾಂಗಾಂಗ್ ತ್ಸೋ ಸರೋವರ, ಗಲ್ವಾನ್ ಕಣಿವೆ, ಗೋಗ್ರಾ, ಹಾಟ್ಸ್ಪ್ರಿಂಗ್ಸ್, ದೆಪ್ಸಾಂಗ್ನ ಆರು ಸರಹದ್ದಿನಲ್ಲಿ ವಿವಾದ ಉಂಟಾಗಿತ್ತು. ಈ ಪೈಕಿ ಗಲ್ವಾನ್ ಕಣಿವೆ, ಪ್ಯಾಂಗಾಂಗ್ ತ್ಸೋ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆ, ಗೋಗ್ರಾಗಳಲ್ಲಿ ಸೇನೆ ವಾಪಸಾತಿ ಆಗಿದೆ.
ದೆಪ್ಸಾಂಗ್ ಅತ್ಯಂತ ಆಯಕಟ್ಟಿನ ಜಾಗವಾಗಿದ್ದು, ಇಲ್ಲಿ ವಿವಾದ ಬಗೆಹರಿಯಬೇಕು ಎಂಬುದು ಭಾರತ ನಿಲುವು. ಚೀನಾ ಸೇನೆ ವಿವಾದಿತ ಪ್ರದೇಶದಿಂದ ಹಿಂದಿರುಗದಿದ್ದರೆ ನಾವು ಕೂಡ ತುಕಡಿಗಳನ್ನು ಹಿಂಪಡೆಯುವುದಿಲ್ಲ. ತಂತ್ರಕ್ಕೆ ಪ್ರತಿತಂತ್ರ ಮಾಡುತ್ತೇವೆ ಎಂದು ಭೂಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ. ನರಾವಣೆ ಶನಿವಾರ ಹೇಳಿದ್ದರು.
ಈ ಮಧ್ಯೆ, ಆಗಸ್ಟ್ 30ರಂದು ಉತ್ತರಾಖಂಡದ ಬರಾಹೋತಿಗೆ ಚೀನಾ ಲಿಬರೇಷನ್ ಆರ್ಮಿಯ 100 ಯೋಧರು ಮತ್ತು 10 ದಿನದ ಹಿಂದೆ ವಾರ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನ ಯಾಂಗ್ಸ್ಟೆಗೆ 150 ಯೋಧರು ಅಕ್ರಮವಾಗಿ ಪ್ರವೇಶಿಸಿದ್ದರು. ಆದರೆ, ಕೆಲವು ತಾಸಿನಲ್ಲಿ ಹಿಂದಿರುಗಿತು.
India China 13th Round Dialogue Fails
ಇದನ್ನೂ ಓದಿ: Nitin Gadkari: ಚೀನಾ ಬದಲು ಭಾರತದಲ್ಲಿ ಎಲೆಕ್ಟ್ರಿಕ್ ಕಾರು ತಯಾರಿಸಿ: ಟೆಸ್ಲಾಗೆ ನಿತಿನ್ ಗಡ್ಕರಿ ಸೂಚನೆ
ಇದನ್ನೂ ಓದಿ: ಅರುಣಾಚಲ ಪ್ರದೇಶದ ಎಲ್ಎಸಿ ಸಮೀಪ ಭಾರತ-ಚೀನಾ ಸೈನಿಕರ ಸಂಘರ್ಷ
Discussion about this post