ಇತ್ತೀಚೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಓರ್ವ ವಿಶಿಷ್ಟ ವ್ಯಕ್ತಿಗೆ ಪದ್ಮಶ್ರೀ ಪ್ರದಾನ ಮಾಡಿದರು. ಅವರು ಪಾಕಿಸ್ತಾನದ ಮಾಜಿ ಯೋಧ. ಹೌದು, ಇದು ನಿಜ. ಆ ತನಕ ಈ ಲೆಫ್ಟಿನೆಂಟ್ ಕರ್ನಲ್ ಖಾಜಿ ಸಜ್ಜದ್ ಅಲಿ ಜಹೀರ್ ಯಾರು ಅಂತಾನೇ ಯಾರಿಗೂ ತಿಳಿದಿರಲಿಲ್ಲ. ಅವರ ಬಗ್ಗೆ ಹುಡುಕಿದರೂ ಕಿಂಚಿತ್ತೂ ಮಾಹಿತಿ ಸಿಗದು. ಆದರೂ, ಈ ವ್ಯಕ್ತಿಗೆ ಪದ್ಮಶ್ರೀ ಕೊಡುವ ಘನ ಕಾರ್ಯ ಏನು ಮಾಡಿದ್ದಾರೆ ಅಂತ ಎಲ್ಲರಿಗೂ ಅನುಮಾನ ಶುರುವಾಯಿತು. ಇಡೀ ದೇಶದ ಗಮನ ಲೆಫ್ಟಿನೆಂಟ್ ಕರ್ನಲ್ ಖಾಜಿ ಸಜ್ಜದ್ ಅಲಿ ಜಹೀರ್ ಕಡೆ ಹೊರಳಿದ್ದೇ ಆಗ.
ನಿಜ ಹೇಳಬೇಕೆಂದರೆ, ಸಜ್ಜದ್ ಅಲಿ ಜಹೀರ್, ತಮ್ಮ ಜೀವವನ್ನೇ ಒತ್ತೆ ಇಟ್ಟು ಭಾರತದ ಗುಪ್ತಚರ ಇಲಾಖೆಗೆ ದೇಶ ಮರೆಯಲಾಗದಂಥ ಸಹಾಯ ಮಾಡಿದ್ದಾರೆ. ಬಾಂಗ್ಲಾದೇಶಕ್ಕೆ ಸ್ವಾತಂತ್ರ ಕೊಡಿಸುವ ವಿಚಾರದಲ್ಲಿ ಇವರ ಪಾತ್ರ ಬಹಳ ಹಿರಿದು. ಹೀಗಾಗಿ, ಎಲೆಮರೆ ಕಾಯಂತಿದ್ದ ಸಜ್ಜದ್ ಅಲಿ ಜಹೀರ್ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡರು.
ಸಜ್ಜದ್ ಅಲಿ ಜಹೀರ್ ಬದುಕಿನ ಕತೆ ಬಹಳ ಕೌತುಕ. ಅದು ಏನು ಅಂತ ನೋಡೋಣ ಬನ್ನಿ.
ಲೆಫ್ಟಿನೆಂಟ್ ಕರ್ನಲ್ ಸಜ್ಜದ್ ಅಲಿ ಜಹೀರ್ 20ನೇ ವಯಸ್ಸಿಗೆ ಪಾಕಿಸ್ತಾನದ ಸಿಯಾಲ್ ಕೋಟದ ಮಿಲಿಟರಿ ಆಫೀಸರ್ ಆಗಿ ನೇಮಕ ಗೊಂಡರು. ಈ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ದೌರ್ಜನ್ಯ ಮಿತಿಮೀರಿ ಹೋಗಿತ್ತು. ಇದು ಮಿಲಿಟರಿಗೂ ವ್ಯಾಪಿಸಿತ್ತು. ಬಾಂಗ್ಲಾದೇಶದಲ್ಲಿ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತಿತ್ತು. ಇದನ್ನು ತಡೆಯಲಾರದೆ ಜಹೀರ್ ಮೆಲ್ಲನೆ ಪಕ್ಕದ ಭಾರತದ ಗಡಿ ದಾಟಿ ಬಂದುಬಿಟ್ಟರು.
ಭಾರತಕ್ಕೆ ಬಂದ ಮೇಲೆ ಜಹೀರರಿಗೆ ತೊಂದರೆಗಳೇನು ತಪ್ಪಲಿಲ್ಲ. ಈತ ಒಬ್ಬ ಪಾಕಿಸ್ತಾನದ ಗೂಢಚಾರಿ ಅಂತಲೇ ಗುಮಾನಿಯಿಂದ ನೋಡತೊಡಗಿದರು. ಅಷ್ಟೇ ಅಲ್ಲ, ಗಡಿ ಭದ್ರತಾ ಪಡೆಯವರು. ಪಠಾಣ್ ಕೋಟದ ಮಿಲಿಟರಿ ಅಧಿಕಾರಿಗಳು ಜಹೀರರನ್ನು ಹಿಡಿದು, ತೀವ್ರ ವಿಚಾರಣೆಗೆ ಗುರಿಪಡಿಸಿದರು.
ಇವರೆಲ್ಲಾ ಅಂದುಕೊಂಡಂತೆ ಜಹೀರ್ ಆಗಿರಲಿಲ್ಲ. ಆಗಲೇ ಜಹೀರ್ ಭಾರತಕ್ಕೆ ಬಂದ ನಿಜವಾದ ಉದ್ದೇಶ ಬೆಳಕಿಗೆ ಬಂದದ್ದು. ಅದು ಏನೆಂದರೆ, ಭಾರತದ ಮಿಲಿಟರಿಗೆ ತಲುಪಿಸಲೆಂದೇ ಜಹೀರ್ ಪಾಕಿಸ್ತಾನಕ್ಕೆ ಸಂಬಂಧಿಸಿದ ಮಹತ್ವದ ಗೌಪ್ಯದಾಖಲೆಗಳನ್ನು ತಮ್ಮ ಜೊತೆಗೆ ತಂದಿದ್ದರು. ಈ ಮೊದಲು ಭಾರತೀಯ ಗುಪ್ತಚರ ದಳದೊಂದಿಗೆ ಜಹೀರ್ ಸಂಬಂಧ ಹೊಂದಿದ್ದರು. ಹೀಗಾಗಿ, ಮಾಹಿತಿ ಪಡೆದ ಮಿಲಿಟರಿ ಅಧಿಕಾರಿಗಳು, ಗೌಪ್ಯ ದಾಖಲೆಗಳನ್ನು ಪಡೆದು ಜಹೀರರನ್ನು ನೇರಾಗಿ ದೆಹಲಿಯ ಗೌಪ್ಯ ಮನೆಗೆ ಬಂದರು.
ಇದಾದ ನಂತರ ಮಾಜಿ ಲೆಫ್ಟಿನೆಂಟ್, ಪಾಕಿಸ್ತಾನದ ಮಾಜಿ ಯೋಧ ಜಹೀರ್ ಬಾಂಗ್ಲಾದೇಶಕ್ಕೆ ಹೋಗಿ ಅಲ್ಲಿ ಪಾಕಿಸ್ತಾನಿ ಪಡೆಯನ್ನು ಓಡಿಸಲು, ಅಲ್ಲಿನ ಮುಕ್ತಿ ಬಹಿನಿ ಅನ್ನುವ ಸ್ವಾತಂತ್ರ್ಯ ಹೋರಾಟಗಾರರಿಗೆ ಗೆರಿಲ್ಲಾ ತರಬೇತಿ ಕೊಟ್ಟರು. ಇದು ಬಾಂಗ್ಲಾ ಸ್ವತಂತ್ರ ಪಡೆಯಲು ನೆರವಾಯಿತು.
ಇವತ್ತೂ ಸಹ ಜಹೀರ್ ರನ್ನು ಪಾಕಿಸ್ತಾನಿಗಳು ದ್ವೇಷಿಸುತ್ತಾರೆ. ಮಾಜಿ ಯೋಧರೊಬ್ಬರ ಪ್ರಕಾರ, ಕಳೆದ 50 ವರ್ಷಗಳ ಹಿಂದೆ ಜಹೀರ್ಗೆ ಪಾಕಿಸ್ತಾನದಲ್ಲಿ ವಿಧಿಸಿದ ಗಲ್ಲುಶಿಕ್ಷೆ ಇನ್ನೂ ಬಾಕಿ ಇದೆಯಂತೆ. ಆದರೆ, ಬಾಂಗ್ಲಾದೇಶದ ಇದಕ್ಕೆ ವೈರುಧ್ಯ. ಗೆರಿಲ್ಲಾ ಯುದ್ಧ ತರಬೇತಿ ನೀಡಿ ದೇಶ ಸ್ವಾತಂತ್ರ್ಯ ಪಡೆಯಲು ನೆರವಾದ ಜಹೀರರನ್ನು ಅಲ್ಲಿನವರು ಸನ್ಮಾನಿಸಿ, ಪದಕ ನೀಡಿದ್ದಾರೆ. ಅಲ್ಲಿನ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯನ್ನು ಜಹೀರರಿಗೆ ನೀಡಿ ಗೌರವಿಸಿದೆ.
ಮೊನ್ನೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಜಹೀರರು ಭಾರತದ ಭದ್ರತೆಗಾಗಿ ಜೀವದ ಹಂಗು ತೊರೆದು ನೆರವಾದ, ಹಲವು ಯುದ್ಧಗಳಲ್ಲಿ ಭಾಗಿಯಾದ ಜಹೀರರ ಸೇವೆಯನ್ನು ಪರಿಗಣಿಸಿ ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮಶ್ರೀ ಪ್ರದಾನ ಮಾಡಿದೆ.
ಇದನ್ನೂ ಓದಿ: ವೃಕ್ಷಮಾತೆಗೆ ಸ್ಟಾರ್ ನಟರಿಗಿಂತ ಅದ್ದೂರಿ ಸ್ವಾಗತ; ಪದ್ಮಶ್ರೀ ತುಳಸಿ ಗೌಡ ಜೊತೆ ಸೆಲ್ಫಿಗಾಗಿ ಕಾತುರದಿಂದ ಕಾದ ಜನ
Discussion about this post