ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಆಯ್ದ ಅಲ್ಪಸಂಖ್ಯಾತ ವರ್ಗದವರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿರುವ ಉಗ್ರರ ಹೆಡಮುರಿಕಟ್ಟಲು ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಯ ಭಾಗವಾಗಿ ಶೋಪಿಯಾನ್ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಸದೆಬಡಿಯಲಾಗಿದೆ. ಹತನಾದ ಉಗ್ರನಲ್ಲಿ ಓರ್ವ ಕಳೆದ ವಾರ ನಾಗರಿಕರನ್ನು ಹತ್ಯೆ ಮಾಡಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ಉಗ್ರರು ಅಡಗಿರುವ ಖಚಿತ ವರ್ತಮಾನದ ಮೇರೆಗೆ ಕಾರ್ಯಾಚರಣೆಗಿಳಿದ ಭದ್ರತಾ ಪಡೆಗಳು, ಉಗ್ರರನ್ನು ಸುತ್ತುವರಿದು ಶರಣಾಗುವಂತೆ ಸೂಚಿಸಿತು. ಆದರೆ, ಅವರು ಗುಂಡಿನ ದಾಳಿ ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಮೂವರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಹತರಾದ ಉಗ್ರರು ಲಷ್ಕರ್-ಎ-ತೊಯ್ಬಾ ಸಂಘಟನೆಯ ದಿ ರಿಸಿಸ್ಟೆನ್ಸ್ ಫ್ರಂಟ್ಗೆ ಸೇರಿದವರು. ಇವರಲ್ಲಿ ಗಂದೆರ್ಬಾಲ್ ಜಿಲ್ಲೆಯ ಮುಖ್ತರ್ ಶಾ ಎಂಬಾತನು ಕಳೆದ ವಾರ ಬಿಹಾರದ ಮೂಲದ ವಲಸೆ ಕಾರ್ಮಿಕ ವೀರೇಂದ್ರ ಪಾಸ್ವಾನ್ ಎನ್ನುವವರನ್ನು ಹತ್ಯೆ ಮಾಡಿದ್ದ. ಘಟನಾ ಸ್ಥಳದಲ್ಲಿ ಸ್ಫೋಟಕ ಸಲಕರಣೆ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇಬ್ಬರು ಉಗ್ರರು ಬಲಿ
ಬಂಡಿಪುರ್ ಮತ್ತು ಅನಂತನಾಗ್ ಜಿಲ್ಲೆಯಲ್ಲಿ ಸೋಮವಾರ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಬಂಡಿಪುರ್ ಜಿಲ್ಲೆಯ ಹಾಜಿನ್ನಲ್ಲಿ ಇಮ್ತಿಯಾಜ್ ಅಹ್ಮದ್ ದರ್ ಸಾವನ್ನಪ್ಪಿದ್ದು, ಆತನ ನಾಲ್ವರು ಸಹಚರರನ್ನು ಬಂಧಿಸಲಾಗಿದೆ. ದರ್ ಟ್ಯಾಕ್ಸಿ ಚಾಲಕ ಮೊಹಮ್ಮದ್ ಶಫಿ ಲೋನ್ರನ್ನು ಹತ್ಯೆ ಮಾಡಿದ್ದ. ಅನಂತನಾಗ್ ವೆರಿನಾಗ್ ಖಗುಂಡ್ನಲ್ಲಿ ಇನ್ನೊಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ.
700 ಶಂಕಿತರ ಬಂಧನ
ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಭಾನುವಾರ ನಡೆದ ದಾಳಿ ಸಂಬಂಧ 48 ತಾಸಿನಲ್ಲಿ 700ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಲಾಗಿದೆ. ಇವರಲ್ಲಿ ಅನೇಕರು ನಿಷೇಧಿತ ಜಮಾತ್-ಎ-ಇಸ್ಲಾಮಿ ಸಂಘಟನೆಗೆ ಸೇರಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ.
ಐವರು ಯೋಧರ ವೀರ ಮರಣ
ಫೂಂಛ್ ಜಿಲ್ಲೆಯ ಸೂರನಕೋಟೆಯಲ್ಲಿ ಸೋಮವಾರ ನಡೆದ ಕಾರ್ಯಾಚರಣೆ ವೇಳೆ ಕಿರಿಯ ಅಧಿಕಾರಿ (ಜೆಸಿಒ) ಸೇರಿ ಐವರು ಯೋಧರು ಹುತ್ಮಾತರಾಗಿದ್ದಾರೆ. ಪಾಕ್ನಿಂದ ನುಸುಳಿದ ಉಗ್ರರ ತಂಡ ಚಾರ್ಮರ್ ಅಡವಿಯಲ್ಲಿ ಅಡಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸೇನಾಪಡೆ ಶೋಧ ಕಾರ್ಯ ನಡೆಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಉಗ್ರರು ಹಾರಿಸಿದ ಗುಂಡಿಗೆ ತೀವ್ರವಾಗಿ ಗಾಯಗೊಂಡ ಐವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಬದುಕುಳಿಯಲಿಲ್ಲ ಎಂದು ಸೇನಾ ವಕ್ತಾರರು ಹೇಳಿದ್ದಾರೆ.
ಕಾಶ್ಮೀರ ತೊರೆಯಲು ಮುಂದಾದ ಪಂಡಿತ ಸಮುದಾಯ
ಆಯ್ದ ಅಲ್ಪಸಂಖ್ಯಾತ ವರ್ಗದವರ ಮೇಲೆ ವ್ಯಾಪಕ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಯಭೀತರಾದ ಕಾಶ್ಮೀರಿ ಪಂಡಿತ ಸಮುದಾಯ ಕಣಿವೆಯನ್ನು ತೊರೆಯಲು ಮುಂದಾಗಿದೆ. ರಕ್ಷಣೆಯ ಭರವಸೆಯನ್ನು ಜಮ್ಮು-ಕಾಶ್ಮೀರದ ಆಡಳಿತ ನೀಡಿದ್ದರೂ ಹತ್ತಾರು ಕುಟುಂಬುಗಳು ಈಗಾಗಲೇ ಜಮ್ಮು ಭಾಗಕ್ಕೆ ವಲಸೆ ಹೋಗಿವೆ. ಈಮಧ್ಯೆ, ಕೇಂದ್ರ ಗೃಹ ಮಂತ್ರಾಲಯವು ಹಿರಿಯ ಅಧಿಕಾರಿಗಳ ತಂಡವನ್ನು ಕಾಶ್ಮೀರಕ್ಕೆ ಕಳುಹಿಸಿ, ಪಂಡಿತ ಸಮುದಾಯದವರಲ್ಲಿ ವಿಶ್ವಾಸ ಮೂಡಿಸುವಂತೆ ಸೂಚಿಸಿದೆ.
India News Indian Army Operation Kills 3 Terrorists in Kashmir 5 Army Soldiers Martyred
ಇದನ್ನೂ ಓದಿ: ಉಗ್ರ ನಂಟಿನ ಶಂಕೆ: ಜಮ್ಮು–ಕಾಶ್ಮೀರದಲ್ಲಿ ಒಂದೇ ವಾರದಲ್ಲಿ 700 ಮಂದಿ ಪೊಲೀಸ್ ವಶಕ್ಕೆ
ಇದನ್ನೂ ಓದಿ: ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಭಜರಂಗದಳದಿಂದ ಪ್ರತಿಭಟನೆ
Discussion about this post