ಲಖನೌ: ಸಮಾಜವಾದಿ ಪಕ್ಷದ ಬೆಂಬಲಿಗರಾದ ಸುಗಂಧ ದ್ರವ್ಯ ಮತ್ತು ಪರಿಮಳಯುಕ್ತ ಪದಾರ್ಥಗಳ ಉದ್ಯಮ ನಡೆಸುತ್ತಿರುವ ಪಿಯೂಷ್ ಜೈನ್ ಮನೆ, ಕಾರ್ಖಾನೆ, ಪೆಟ್ರೋಲ್ ಬಂಕ್ಗಳ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಮತ್ತು ಸರಕು ಮತ್ತು ಸೇವಾ ತೆರಿಗೆಯ ಬೇಹುಗಾರಿಕಾ ಮಹಾನಿರ್ದೇಶನಾಲಯ (ಡಿಜಿಜಿಐ) ಜಂಟಿ ದಾಳಿ ನಡೆಸಿ 150 ಕೋಟಿ ರೂಪಾಯಿಗೂ ಹೆಚ್ಚು ನಗದನ್ನು ವಶಪಡಿಸಿಕೊಂಡಿದೆ. ಉತ್ತರ ಪ್ರದೇಶದ ಮಾತ್ರವಲ್ಲದೆ ಪಿಯೂಷ್ಗೆ ಸೇರಿದ ಗುಜರಾತ್ ಮತ್ತು ಮುಂಬೈಗಳಲ್ಲಿನ ಸ್ಥಳಗಳಲ್ಲೂ ದಾಳಿ ನಡೆದಿದೆ.
ಪಿಯೂಷ್ ಅವರ ಆನಂದಪುರಿಯ ಮನೆಯ ಎರಡು ಕಪಾಟುಗಳಲ್ಲಿ ಪೇಪರ್ ಕವರ್ಗಳಲ್ಲಿ ಹಳದಿ ಪಟ್ಟಿ ಸುತ್ತಿದ್ದ ನೋಟಿನ ಕಂತೆ ಕಂತೆಗಳು ಪತ್ತೆಯಾಗಿವೆ. ಇದರ ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದುವರೆಗೂ ನಮ್ಮ ಇಲಾಖೆ ವಶಪಡಿಸಿಕೊಂಡ ಅತಿ ದೊಡ್ಡ ಮೊತ್ತ ಇದಾಗಿದೆ. ಎಸ್ಬಿಐ ಅಧಿಕಾರಗಳ ನೆರವಿನಿಂದ ಮೂರು ಯಂತ್ರಗಳಲ್ಲಿ ನೋಟಿನ ಎಣಿಕೆ ನಡೆಯುತ್ತಿದ್ದು, ಮೊತ್ತ ಇನ್ನೂ ಹೆಚ್ಚಾಗಬಹುದು ಎಂದು ಆದಾಯ ತೆರಿಗೆ ಇಲಾಖೆಯ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ ಅಧ್ಯಕ್ಷ ವಿವೇಕ್ ಜೋಹ್ರಿ ಹೇಳಿದ್ದಾರೆ.
ಪತ್ತೆಯಾಗಿರುವ ನಗದು ನಕಲಿ ಇನ್ವಾಯ್ಸ್ಗೆ ಸಂಬಂಧಿಸಿದ್ದಾಗಿದೆ. ಈ ಇನ್ವಾಯ್ಸ್ನ ಸರಕಿಗೆ ಇ-ವೇ ಬಿಲ್ ಮಾಡಿಲ್ಲ ಮತ್ತು ಜಿಎಸ್ಟಿ ಪಾವತಿಸಿಲ್ಲ . ಬೇನಾಮಿ ಹೆಸರಿನಲ್ಲಿ ತಲಾ 50 ಸಾವಿರ ರೂಪಾಯಿಯ 200 ಇನ್ವಾಯ್ಸ್ಗಳನ್ನು ಬೇನಾಮಿ ಹೆಸರಿನಲ್ಲಿ ಸೃಷ್ಟಿಸಲಾಗಿದೆ. ಇವು ಪಿಯೂಷ್ ಅವರ ಗೋದಾಮಿನಲ್ಲಿದ್ದ ನಾಲ್ಕು ಟ್ರಕ್ಗಳಲ್ಲಿ ಸಿಕ್ಕಿರುವ ಕಾರಣ ಈ ಟ್ರಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಶಿಖರ್ ಹೆಸರಿನ ಪಾನ್ ಮಸಾಲಾ ಮತ್ತು ಪರಿಮಳಯುಕ್ತ ತಂಬಾಕು ಉತ್ಪನ್ನಗಳನ್ನು ತಯಾರಿಸುವ ತ್ರಿಮೂತ ಫ್ರಾಗ್ರೆನ್ಸ್ ಕೈಗಾರಿಕೆಯನ್ನು ಪಿಯೂಷ್ ನಡೆಸುತ್ತಿದ್ದು, ಇಲ್ಲೂ ಶೋಧ ಕಾರ್ಯ ನಡೆದಿದೆ. ಜತೆಗೆ ಕನೌಜ್ನಲ್ಲಿ ಪಿಯೂಷ್ ಹೊಂದಿರುವ ಘಟಕದ ಮೇಲೂ ದಾಳಿ ನಡೆದಿದೆ. ಪಿಯೂಷ್ ಅವರ ಕಾರ್ಖಾನೆಗೆ ಸುಗಂಧ ದ್ರವ್ಯವನ್ನು ಸರಬರಾಜು ಮಾಡುವ ಓಡೋಚೆಮ್ ಇಂಡಸ್ಟ್ರೀಸ್ ಹಾಗೂ ಸರಕು ಸಾಗಣೆಗೆ ವಾಹನದ ಸೇವೆ ಒದಗಿಸುವ ಗಣಪತಿ ರೋಡ್ ಕ್ಯಾರಿಯರ್ಸ್ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪಿಯೂಷ್ ಜೈನ್ ಕಳೆದ ನವೆಂಬರ್ನಲ್ಲಿ “ಸಮಾಜವಾದಿ ಅತ್ತರ್’ ಹೆಸರಿನ ಸುಗಂಧ ದ್ರವ್ಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು ಎನ್ನಲಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ಗೆ ಆಪ್ತರಾದ ಮೂವರ ಮನೆ ಇನ್ನಿತರ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.
ಇದನ್ನೂ ಓದಿ: 2020ರಲ್ಲಿ ರಾಷ್ಟ್ರೀಯ ಹೆದ್ದಾರಿ ಅವಘಡಗಳಿಗೆ 47,984 ಮಂದಿ ಬಲಿ
(IT dept finds bogus spends of crores after raids linked to Samajwadi Party)
Discussion about this post