ಬೆಂಗಳೂರು: ಜಾತ್ಯಾತೀತ ಜನತಾದಳದ ಮುಖ್ಯಸ್ಥ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಭೇಟಿಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ ಹಾಸನದಲ್ಲಿ ಐಐಟಿ ಸ್ಥಾಪನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾಗಿ ತಿಳಿಸಿದ ಅವರು ನಾನೇ ಪ್ರಧಾನಿಯವರ ಭೇಟಿಗೆ ಕಾಲಾವಕಾಶ ಕೇಳಿದ್ದೆ ಎಂದು ತಿಳಿಸಿದರು.
ಭೇಟಿ ಸೌಹಾರ್ದಯುತವಾಗಿದ್ದು ಪ್ರಧಾನಿ ಮೋದಿ ನನ್ನೊಂದಿಗೆ ಬಹಳ ಆತ್ಮೀಯತೆಯಿಂದ ನಡೆದುಕೊಂಡರೆಂದು ಗೌಡರು ತಿಳಿಸಿದರು.
ಹಾಸನಕ್ಕೆ ಐಐಟಿ ಬೇಕು ಎಂದು ಶಿಕ್ಷಣ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೆ, ಆದರೆ ಶಿಕ್ಷಣ ಸಚಿವರು ಸಾಧ್ಯವಿಲ್ಲವೆಂದಿದ್ದರು. ಹಾಗಾಗಿ ಇಂದು ಖುದ್ದು ಪ್ರಧಾನಿಯವರನ್ನು ಭೇಟಿಯಾಗಿ ವಿವರಿಸಿ ಮತ್ತೊಮ್ಮೆ ಮನವಿ ಮಾಡಿದ್ದೇನೆಂದ ಗೌಡರು ಇದರ ಸಂಬಂಧ ಸ್ಮೃತಿ ಇರಾನಿಯವರು ಸಚಿವರಾಗಿದ್ದ ಕಾಲದಿಂದಲೂ ಪತ್ರ ವ್ಯವಹಾರ ನಡೆಯುತ್ತಿದೆ ಎಂದು ವಿವರಿಸಿದರು.
ಈ ಹಿಂದೆ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮನವಿ ಮಾಡಿದ್ದಾಗ ಹಾಸನದಲ್ಲಿ ಐಐಟಿ ಸ್ಥಾಪನೆ ಸಾಧ್ಯವಿಲ್ಲವೆಂದು ಮಾರುತ್ತರ ನೀಡಿದ್ದರು. ಅದರಿಂದಾಗಿ ಇಂದು ಪ್ರಧಾನಿಯವರನ್ನು ಭೇಟಿ ಮಾಡಬೇಕಾಯಿತೆಂದು ಗೌಡರು ತಿಳಿಸಿದರು.
ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರವು ಅಧಿಕಾರದಲ್ಲಿದ್ದಾಗ ರೂಪ ಪಡೆದ ಯೋಜನೆ ಇದಾಗಿದ್ದು ಇದರ ಬಗ್ಗೆ ಮತ್ತೆ ಪ್ರಧಾನಿಗಳ ಬಳಿ ಚರ್ಚೆ ಮಾಡಿದ್ದೇನೆಂದು ಗೌಡರು ತಿಳಿಸಿದರು. ಪ್ರಧಾನಿಯವರು ಪ್ರಲ್ಹಾದ್ ಜೋಷಿಯವರ ಬಳಿ ಇದರ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರೆಂದೂ ಗೌಡರು ಮಾಧ್ಯಮಗಳಿಗೆ ವಿವರಿಸಿದರು.
ಭೇಟಿಯ ಸಂದರ್ಭದಲ್ಲಿ ಪ್ರಧಾನಿಗಳು ನನ್ನ ಮಂಡಿ ನೋವಿನ ಬಗ್ಗೆ ವಿಚಾರಿಸಿದರೆಂದು ಗೌಡರು ತಿಳಿಸಿದರು.
ವಿಧಾನ ಪರಿಷತ್ ಚುನಾವಣೆಗಳಲ್ಲಿ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕಲು ಹಣದ ಕೊರತೆಯಿದೆ ಎಂದ ಗೌಡರು ತುಮಕೂರು ಕ್ಷೇತ್ರದಲ್ಲಿ ದಿನಾಂಕ 3 ಮತ್ತು 4ರಂದು ಹಾಗೂ ಮಂಡ್ಯ ಕ್ಷೇತ್ರದಲ್ಲಿ ದಿನಾಂಕ 5 ಮತ್ತು 6ರಂದು ತಾವೇ ಪ್ರಚಾರ ಮಾಡಲಿದ್ದು ಇತರ ಆರು ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಪ್ರಚಾರ ಮಾಡುತ್ತಾರೆಂದರು.
ಬಿಜೆಪಿಯೊಂದಿಗೆ ಚುನಾವಣೆ ಹೊಂದಾಣಿಕೆಯ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ತೀರ್ಮಾನ ಮಾಡಲಿದ್ದು ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ನಿರ್ಧರಿಸಿ ಎಂದು ಹೇಳಿದ್ದೇನೆ ಎಂದರು. ಬಿಜೆಪಿಯವರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ನೋಡೋಣವೆಂದ ಗೌಡರು ಈ ಮೈತ್ರಿ ಈ ಚುನಾವಣೆಗಳಿಗೆ ಮಾತ್ರ ಸೀಮಿತವಾಗಿದ್ದು ಮೈತ್ರಿ ಮುಂದುವರೆಯುವ ಬಗ್ಗೆ ಚರ್ಚಿಸಿಲ್ಲ ಎಂದರು.
ಖರ್ಗೆಯವರಿಗೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಸಿದೆ ಆದರೆ ಇತರ ನಾಯಕರಿಗೆ ಮನಸ್ಸಿರುವಂತೆ ಕಾಣುತ್ತಿಲ್ಲ. ಖರ್ಗೆಯವರ ಅಭಿಪ್ರಾಯಕ್ಕೆ ಎಷ್ಟು ಬೆಲೆ ಇದೆ ಹಾಗೂ ಹೈಕಮಾಂಡ್ ನಿರ್ಧಾರ ಏನಿದೆಯೋ ಗೊತ್ತಿಲ್ಲವೆಂದ ಗೌಡರು ನಾವೇ ಮೇಲೆ ಬಿದ್ದು ಮೈತ್ರಿಮಾಡಿಕೊಳ್ಳಲು ಬಯಸುವುದಿಲ್ಲ ಎಂದರು.
ಬಿಬಿಎಂಪಿ ಚುನಾವಣೆಯಲ್ಲಿ ನಾವು ಕಾಂಗ್ರೆಸ್ಗೆ ಬೆಂಬಲ ನೀಡಿದ್ದು ಅವರು ಮೇಯರ್ ಆಗಿದ್ದರು, ನಮಗೆ ಉಪಮೇಯರ್ ಸ್ಥಾನ ಸಿಕ್ಕಿತ್ತು. ಇದೆಲ್ಲವನ್ನು ಕಾಂಗ್ರೆಸ್ ಮರೆತಿರಬಹುದೆಂದು ಗೌಡರು ತಿಳಿಸಿದರು.
ನನ್ನ ಜೀವನಾಧಾರಿತ ಪುಸ್ತಕದ 6000 ಪ್ರತಿಗಳು ಈಗಾಗಲೇ ಆನ್ಲೈನ್ ಸಂಸ್ಥೆಗಳಾದ ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ಗಳಲ್ಲಿ ಲಭ್ಯವಿದ್ದು ಪುಸ್ತಕವನ್ನು ಬಿಡುಗಡೆ ಮಾಡುವ ವ್ಯಕ್ತಿಯನ್ನು ನಿರ್ಧರಿಸಿದ ನಂತರ ಬಿಡುಗಡೆಯ ದಿನಾಂಕ ನಿಗದಿಯಾಗಲಿದೆ ಎಂದರು.
JDS Supremo and Ex-PM Deve Gowda Meets Prime Minister Narendra Modi in New Delhi
ಇದನ್ನೂ ಓದಿ: Congress party: ಡಿ.೩ ಕ್ಕೆ ಜೆಡಿಎಸ್ ಮುಖಂಡ ಹೆಚ್.ಹೆಚ್.ದೇವರಾಜ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ
ಇದನ್ನೂ ಓದಿ: Regional Party: ಕಾಂಗ್ರೆಸ್ ಪಕ್ಷ ಈಗ ಜೆಡಿಎಸ್ನಂತೆ ಪ್ರಾದೇಶಿಕ ಪಕ್ಷ
Discussion about this post