ತಿರುವನಂತಪುರ: ಕೇರಳದಲ್ಲಿ ಮಳೆ ಮುಂದುವರಿದಿದ್ದು, ಇದರಿಂದ ಸತ್ತವರ ಸಂಖ್ಯೆ 27ಕ್ಕೆ ಏರಿದೆ. ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂಕುಸಿತ, ಪ್ರವಾಹ ಉಂಟಾಗಿರುವ ಕಾರಣ ಸಾವು-ನೋವು ಹೆಚ್ಚಿದೆ. ಈ ಮಧ್ಯೆ, ಮಳೆ ತೀವ್ರತೆ ಇನ್ನಷ್ಟು ಹೆಚ್ಚಬಹುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಕೊಟ್ಟಾಯಂ ಜಿಲ್ಲೆಯ ಕೂಟ್ಟಿಕಲ್ನಲ್ಲಿ ಭೂಕುಸಿತವಾಗಿದ್ದು, ಅವಶೇಷದಡಿಯಲ್ಲಿ 13 ಶವಗಳನ್ನು ತೆಗೆಯಲಾಗಿದೆ. ಮುಂಡಕಾಯಂನಲ್ಲಿ ಪ್ರವಾಹದ ರಭಸಕ್ಕೆ ಒಂದು ಮನೆ ಕೊಚ್ಚಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ. ಇಡುಕ್ಕಿ ಜಿಲ್ಲೆಯ ಕೊಕ್ಕಾಯರ್ ಮತ್ತು ಪೆರುವನಂತಂ ಗ್ರಾಮಗಳಲ್ಲಿ ಎಂಟು ಹೆಣಗಳು ಭೂಕುಸಿತದ ಪ್ರದೇಶದಲ್ಲಿ ದೊರಕಿವೆ. ಕೋಯಿಕ್ಕೋಡ್ ಎರ್ನಾಕುಲಂನಲ್ಲಿ ಪ್ರವಾಹದ ನೀರಿನಲ್ಲಿ 18 ವರ್ಷದ ಯುವತಿ ಭಾನುವಾರ ಕೊಚ್ಚಿಕೊಂಡುಹೋಗಿದ್ದಳು. ತ್ರಿಶ್ಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಪ್ರವಾಹದಂದ ಸತ್ತಿದ್ದರು. ಇಡುಕ್ಕಿ ಜಿಲ್ಲೆಯ ಕುಂಜಾರ್ನಲ್ಲಿ ಶನಿವಾರ ಒಂದು ಕಾರು ಪ್ರವಾಹದಲ್ಲಿ ಮುಳುಗಿ ಇದ್ದರಲ್ಲಿದ್ದ ಇಬ್ಬರು ಸತ್ತಿದ್ದರು.
ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ತಂಡಗಳು (ಎನ್ಡಿಆರ್ಎಫ್) ಪರಿಹಾರ ಕಾರ್ಯವನ್ನು ಚುರುಕಿನಿಂದ ನಡೆಸುತ್ತಿವೆ. ರಾಜ್ಯ ವಿಪತ್ತು ಸ್ಪಂದನಾ ತಂಡ (ಎಸ್ಡಿಆರ್ಎಫ್)ಗಳು ದಿನದ 24 ತಾಸೂ ಕಾರ್ಯನಿರ್ವಹಿಸುತ್ತಿವೆ. ಕಣ್ಣೂರು, ಪಾಲಕ್ಕಾಡ್, ಕೊಲ್ಲಂ ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ಐದು ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ.
4 ಲಕ್ಷ ರೂ. ಪರಿಹಾರ ಘೋಷಣೆ:
ಮಳೆಯ ಅನಾಹುತದಿಂದ ಸತ್ತವರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಭಾನುವಾರದ ವರೆಗೆ 156 ನಿರಾಶ್ರಿತ ಶಿಬಿರಗಳನ್ನು ತೆರೆಯಲಾಗಿದ್ದು, ಇಲ್ಲಿ 1,250ಕ್ಕೂ ಹೆಚ್ಚು ಕುಟುಂಬಗಳು ಆಶ್ರಯ ಪಡೆದಿವೆ. ಈ ಪೈಕಿ ಕೊಟ್ಟಾಯಂ ಜಿಲ್ಲೆಯಲ್ಲಿ 321 ಕುಟುಂಬ ಮತ್ತು ಇಡುಕ್ಕಿ ಜಿಲ್ಲೆಯಲ್ಲಿ 219 ಕುಟುಂಬಗಳು ಆಶ್ರಯಪಡೆದಿರುವುದು ಸೇರಿದೆ.
ಮಳೆಯ ಕಾರಣ ರಾಜ್ಯದ ಬಹುತೇಕ ಅಣೆಕಟ್ಟೆಗಳು ಭತರ್ತಿಯಾಗಿದ್ದು, ಸಣ್ಣ ಡ್ಯಾಂಗಳಿಂದ ಮಾತ್ರ ನೀರು ಹೊರಬಿಡಲಾಗುತ್ತಿದೆ. ಮಳೆಯ ಕಾರಣ 4.18 ಲಕ್ಷ ವಿದ್ಯುತ್ ಗ್ರಾಹಕರು ಅಡಚಣೆ ಎದುರಿಸಿದ್ದಾರೆ. ಪ್ರವಾಹದ ಮತ್ತು ಭೂಕುಸಿತದ ಕಾರಣ 13.67 ಲಕ್ಷ ಮೌಲ್ಯದ ಮೂಲ ಸೌಕರ್ಯಕ್ಕೆ ಹಾನಿಯಾಗಿದೆ ಎಂದು ರಾಜ್ಯ ವಿದ್ಯುತ್ ನಿಗಮ ಹೇಳಿದೆ.
24 ತಾಸಿನಲ್ಲಿ ದೆಹಲಿಯಲ್ಲಿ ದಾಖಲೆಯ ಮಳೆ:
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 68 ವರ್ಷದ ಬಳಿಕ ಅಕ್ಟೋಬರ್ನಲ್ಲಿ ದಾಖಲೆಯ ಮಳೆ ಸುರಿದಿದೆ. ಸಫ್ಡರ್ಜಂಗ್ನಲ್ಲಿ 85 ಮಿಲಿಮೀಟರ್ , ಪಾಲಂನಲ್ಲಿ 55 ಎಂ.ಎಂ. ಮಳೆ ಸೋಮವಾರ ಬೆಳಗ್ಗೆ 5.30ರವರೆಗೆ ದಾಖಲಾಗಿದೆ. ಈ ಹಿಂದೆ 1954ರ ಅಕ್ಟೋಬರ್ 1ರಂದು 172.7 ಮಳೆ ಸುರಿದಿತ್ತು.
ದೆಹಲಿ ಮತ್ತು ಸುತ್ತಮುತ್ತಲಿನ ನೋಯ್ಡಾ, ಗಾಜಿಯಾಬಾದ್, ಗ್ರೇಟರ್ ನೋಯ್ಡಾ, ಬರೌತ್, ಆಗ್ರಾ, ಮಥುರಾ, ಹಥರಾಸ್, ಸೋನಿಪತ್, ಗನ್ನೌರ್, ಗೋಹಾನ್, ಸೋಹಾನ್, ಜುಂಜುನು, ಪಿಲಾನಿಗಳಲ್ಲಿ ಸೋಮವಾರ ಮತ್ತು ಮಂಗಳವಾರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ರಾಜಧಾನಿಯ ಹಲವು ಪ್ರದೇಶಗಳು ಜಲಾವೃತವಾಗಿತ್ತು. ಸಂಚಾರ ದಟ್ಟಣೆ ಉಂಟಾಗಿತ್ತು. ಗಾಜಿಪುರದಲ್ಲಿನ ತರಕಾರಿ ಮತ್ತು ಹಣ್ಣಿನ ಮಾರುಕಟ್ಟೆಯಲ್ಲಿ ನೀರು ನಿಂತಿತ್ತು.
ಇದನ್ನು ಓದಿ: ಕೇರಳದಲ್ಲಿ ಮೇಘಸ್ಫೋಟಕ್ಕೆ 8 ಮಂದಿ ಸಾವು: ಮುಂದುವರಿದ ಭಾರಿ ಮಳೆ, ಪರಿಹಾರಕ್ಕೆ ಸೇನೆಯ ನೆರವು
ಇದನ್ನು ಓದಿ: ಕೇರಳದಲ್ಲಿ ಭಾರೀ ಮಳೆಗೆ ಪ್ರಮುಖ ಅಣೆಕಟ್ಟುಗಳು ಭರ್ತಿ
Discussion about this post