ಲಖನೌ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಅಕ್ಟೋಬರ್ 3ರಂದು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿದು ನಾಲ್ವರ ಸಾವಿನ ಪ್ರಕರಣದ ಆರೋಪಿಯಾದ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಉತ್ತರ ಪ್ರದೇಶದ ವಿಶೇಷ ತನಿಖಾ ತಂಡ (ಎಸ್ಐಟಿ) ಶನಿವಾರ ತಡರಾತ್ರಿ ಬಂಧಿಸಿದೆ. ಇದಕ್ಕೂ ಮೊದಲು ಅವರನ್ನು ಲಖಿಂಪುರ ಖೇರಿಯ ಕ್ರೈಮ್ ವಿಭಾಗದ ಕಚೇರಿಯಲ್ಲಿ 12 ತಾಸು ವಿಚಾರಣೆ ನಡೆಸಲಾಯಿತು.
ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಎರಡನೇ ಸಮನ್ಸ್ ನೀಡಿದ್ದ ಹಿನ್ನೆಲೆಯಲ್ಲಿ ಆಶಿಶ್ ಬೆಳಗ್ಗೆ 10.30ಕ್ಕೆ ಬಂದರು. ಸಿಟ್ಟಿಗೆದ್ದಿರುವ ರೈತರು ಹಲ್ಲೆ ನಡೆಸಬಹುದು ಎಂಬ ಕಾರಣಕ್ಕೆ ಆಶಿಶ್ರನ್ನು ಪೊಲೀಸ್ರ ಭದ್ರತೆಯಲ್ಲಿ ಕರೆದುಕೊಂಡು ಬರಲಾಯಿತು. ಪೊಲೀಸ್ ಉಪಮಹಾನಿರೀಕ್ಷಕ (ಡಿಐಜಿ) ಉಪೇಂದ್ರ ಅಗರ್ವಾಲ್ ನೇತೃತ್ವದ ಎಸ್ಐಟಿ ತಂಡ ರಾತ್ರಿ 10.30ರವರೆಗೂ ವಿಚಾರಣೆ ನಡೆಸಿ ನಂತರ ಆಶಿಶ್ರನ್ನು ಬಂಧಿಸಿತು. “ಆರೋಪಿಯು ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸುತ್ತಿಲ್ಲ. ಆದ್ದರಿಂದ ಅವರನ್ನು ದಸ್ತಗಿರಿ ಮಾಡಲಾಯಿತು” ಎಂದು ಎಸ್ಐಟಿ ತಂಡ ಹೇಳಿದೆ. ಇದರಿಂದ ಬಂಧಿತರ ಸಂಖ್ಯೆ 3ಕ್ಕೆ ಏರಿದೆ. ಅಪಘಾತ ಮಾಡಿದ ಎಸ್ಯುವಿಯಲ್ಲಿ ಇದ್ದ ಇಬ್ಬರನ್ನು ಗುರುವಾರ ಬಂಧಿಸಲಾಗಿತ್ತು.
ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ ಸಂಬಂಧ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ತನಿಖೆಯ ಬಗ್ಗೆ ಶುಕ್ರವಾರ ತೀವ್ರ ಅತೃಪ್ತಿ ಹೊರಹಾಕಿತ್ತು. “ಸಕರ್ಕಾರದ್ದು ಬರಿ ಬಾಯಿಮಾತಾಯಿತೆ ಹೊರತು, ಕ್ರಿಯೆ ಏನೂ ಇಲ್ಲ” ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ತಪರಾಕಿ ಹಾಕಿತ್ತು.
ಹಿನ್ನೆಲೆ:
ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ತಮ್ಮೂರಿನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಮೌರ್ಯ ಅಕ್ಟೋಬರ್ 3ರಂದು ಹೋಗುತ್ತಿದ್ದಾಗ ಅವರನ್ನು ಅನುಸರಿಸುತ್ತಿದ್ದ ವಾಹನವು ಪ್ರತಿಭಟನಾನಿರತ ರೈತರ ಮೇಲೆ ಹರಿದು ನಾಲ್ವರು ರೈತರು ಸಾವನ್ನಪ್ಪಿದರು. ಈ ಕಾರನ್ನು ಸಚಿವರ ಪುತ್ರ ಆಶಿಶ್ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಈ ಘಟನೆಯಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ನಡೆಸಿದ ಹಿಂಸಾಚಾರದಲ್ಲಿ ಬಿಜೆಪಿಯ ಇಬ್ಬರು ಕಾರ್ಯಕರ್ತರು, ಕಾರಿನ ಚಾಲಕ ಮತ್ತು ಓರ್ವ ಪತ್ರಕರ್ತ ಮೃತಪಟ್ಟಿದ್ದರು. ಈ ಬಗ್ಗೆ ಆಶಿಶ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪ್ರಕರಣದ ಬಗ್ಗೆ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಿಸಿತ್ತು.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಅಜಯ್ ಮಿಶ್ರಾ, ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದ್ದರಿಂದ ಕಾರು ಅಪಘಾತಕ್ಕೀಡಾಯಿತು ಈ ವೇಳೆ ಇಬ್ಬರು ರೈತರು ಸತ್ತಿದ್ದಾರೆ. ಈ ಎಸ್ಯುವಿ ವಾಹನ ತಮಗೆ ಸೇರಿದ್ದಾಗಿದ್ದು, ಟನೆ ನಡೆದಾಗ ಕಾರಿನಲ್ಲಿ ತಾವಾಗಲಿ, ತಮ್ಮ ಮಗನಾಗಲಿ ಇರಲಿಲ್ಲ ಎಂದಿದ್ದರು. ಮಗನ ವಿರುದ್ಧ ಸಣ್ಣ ಪುರಾವೆ ಸಿಕ್ಕರೂ ರಾಜೀನಾಮೆ ನೀಡುವುದಾಗಿ ಹೇಳಿದ್ದರು.
ಲಖಿಂಪುರ ಹಿಂಸಾಚಾರ ಕ್ರಿಯೆಗೆ ಪ್ರತಿಕ್ರಿಯೆಯಷ್ಟೆ
ಲಖಿಂಪುರ ಖೇರಿಯ ಹಿಂಸಾಚಾರದ ವೇಳೆ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದವರು ಅಪರಾಧಿಗಳಲ್ಲ. ರೈತರ ಮೇಲೆ ಎಸ್ಯುವಿ ವಾಹನ ಹರಿದಿದ್ದಕ್ಕೆ ಅವರು ಪ್ರತಿಕ್ರಿಯಿಸಿದ್ದಾರಷ್ಟೆ ಎಂದು ಭಾರತೀಯ ಕಿಸಾನ್ ಯುನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯಿತ್ ಹೇಳಿದ್ದಾರೆ.
ಆಶಿಶ್ನನ್ನು ದಸ್ತಗಿರಿ ಮಾಡಬೇಕು ಮತ್ತು ಮಗನ ರಕ್ಷಣೆ ಮಾಡುತ್ತಿರುವ ಅಜಯ್ ಮಿಶ್ರಾರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಇದು ಸೋಮವಾರದೊಳಗೆ ಈಡೇರದಿದ್ದರೆ, ಮೃತ ನಾಲ್ವರು ರೈತರ ಅಸ್ಥಿಯೊಂದಿಗೆ 12ನೇ ತಾರೀಖಿನಿಂದ “ಶಹೀದ್ ಕಿಸಾನ್ ಯಾತ್ರೆ’ಯನ್ನು ಹಮ್ಮಿಕೊಳ್ಳಲಾಗುವುದು. ಅ.15ರಂದು ಅಸುರ ದಹನದ (ವಿಜಯ ದಶಮಿಯ ಕಾರ್ಯಕ್ರಮ) ಬದಲಿಗೆ ಬಿಜೆಪಿ ಮುಖಂಡರ ಪ್ರತಿಕೃತಿಗಳನ್ನು ದಹಿಸಲಾಗುವುದು ಎಂದು ಟಿಕಾಯಿತ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದರು. ಈ ಮಧ್ಯೆ, ಪಂಜಾಬ್ನ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಹಿಂಸಾಚಾರದ ವೇಳೆ ಸಾವನ್ನಪ್ಪಿದ್ದ ಪತ್ರಕರ್ತ ರಾಮ್ ಕಶ್ಯಪ್ ಮನೆಯ ಬಳಿ ಕಾಂಗ್ರೆಸ್ ಕಾರ್ಯಕರ್ತರ ಸಂಗಡ ಶನಿವಾರ ಮೌನ ಪ್ರತಿಭಟನೆ ನಡೆಸಿದ್ದಾರೆ. ದೆಹಲಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
Lakhimpur Kheri Violence Case Ashish Mishra Arrest
ಇದನ್ನು ಓದಿ: ಲಖಿಂಪುರ್ ಖೇರಿ ಹಿಂಸಾಚಾರ – ಸ್ಥಿತಿಗತಿ ವರದಿ ಕೇಳಿದ ಸುಪ್ರೀಂ
ಇದನ್ನು ಓದಿ: ಲಖೀಂಪುರ ಘಟನೆ ಖಂಡಿಸಿ ಪ್ರತಿಭಟನೆ
Discussion about this post