ಗಢಚಿರೋಲಿ, ಮಹಾರಾಷ್ಟ್ರ: ಪೋಲೀಸ್ ಕಾರ್ಯಾಚರಣೆಗಳ ಇತಿಹಾಸದಲ್ಲೇ ದೀರ್ಘವಾದ ಕಾರ್ಯಾಚರಣೆಯೊಂದರಲ್ಲಿ ಮಹಾರಾಷ್ಟ್ರದ ಘಡ್ಚಿರೋಲಿ ಜಿಲ್ಲೆಯ ಸಮೀಪ ಕನಿಷ್ಠ 26 ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. ಬೆಳಗಿನ ಜಾವ 6 ಗಂಟೆಯ ಸುಮಾರಿಗೆ ಪ್ರಾರಂಭವಾದ ಕಾರ್ಯಾಚರಣೆ ಸಂಜೆ 4 ಗಂಟೆಗೆ ಮುಗಿಯಿತು.
ಇಲ್ಲಿಗೆ ಸಮೀಪದ ದಟ್ಟ ಅರಣ್ಯಪ್ರದೇಶದಲ್ಲಿ ನವೆಂಬರ್ 13ರ ಶನಿವಾರ ನಕ್ಸಲೀಯರೊಂದಿಗಿನ ಮುಖಾಮುಖಿಯ ಬಿರುಸಿನ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರ ಪೋಲೀಸರು ಕನಿಷ್ಠ 26 ನಕ್ಸಲರನ್ನು ಹತ್ಯೆ ಮಾಡಿದ್ದಾರೆ. ಈ ಮುಖಾಮುಖಿಯಲ್ಲಿ ನಾಲ್ವರು ಪೋಲೀಸರೂ ಗಾಯಗೊಂಡಿದ್ದು ಅವರಿಗೆ ನಾಗಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೋಲೀಸ್ ಅಧಿಕಾರಿಯೊಬ್ಬರ ಹೇಳಿಕೆಯಂತೆ 29 ಶಸ್ತ್ರಾಸ್ತ್ರಗಳನ್ನು ಘಟನಾಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.
ಪೋಲೀಸರು ಪ್ರಮುಖ ಮಾವೋವಾದಿ ನಾಯಕ ಮಿಲಿಂದ್ ಟೆಲ್ಟುಮ್ಬ್ಡೆ ಸ್ಥಳದಲ್ಲಿ ಉಪಸ್ಥಿತನಿದ್ದನೇ ಎಂದು ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಘಡ್ಚಿರೋಲಿಯ ಪೋಲೀಸ್ ಸುಪರಿಂಟೆಂಡೆಂಟ್ ಅಂಕಿತ್ ಗೋಯಲ್ “ಇಲ್ಲಿಯವರೆಗೆ ನಾವು 26 ಮೃತ ದೇಹಗಳನ್ನು ವಶಕ್ಕೆ ಪಡೆದಿದ್ದು ಭಾನುವಾರ ಬೆಳಿಗ್ಗೆ ಇವರನ್ನು ಗುರುತಿಸುವ ಪ್ರಕ್ರಿಯೆ ನಡೆಯಲಿದೆ” ಎಂದು ವರದಿಗಾರರಿಗೆ ತಿಳಿಸಿದ್ದಾರೆ.
ಗಾಯಗೊಂಡ ಕೆಲ ಪೋಲೀಸರಲ್ಲಿ ರವೀಂದ್ರ ನೈತಮ್ (42), ಸರ್ವೇಶ್ವರ ಅತ್ರಮ್, ಮಹಾರು ಕುಡ್ಮೇಥೆ (34), ಹಾಗೂ ಟಿಕಾರಾಂ ಕಟಾಂಗೆ (41) ಸೇರಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲ್ಲಿಯವರೆಗಿನ ಅತ್ಯಂತ ದೀರ್ಘ ಕಾರ್ಯಾಚರಣೆಗಳಲ್ಲೊಂದಾದ ಈ ಕಾರ್ಯಾಚರಣೆಯು 10 ಗಂಟೆಗಳ ಅವಧಿಯದಾಗಿತ್ತು. ಮೂಲಗಳ ಪ್ರಕಾರ ದಟ್ಟ ಅರಣ್ಯಪ್ರದೇಶದಲ್ಲಿ ಈ ಮಾವೋವಾದಿಗಳು ಬಿಡಾರ ಹೂಡಿದ್ದಾರೆಂಬ ಖಚಿತ ಮಾಹಿತಿಯನ್ನಾಧರಿಸಿ ನಡೆಸಿದ ಈ ಕಾರ್ಯಾಚರಣೆಯಲ್ಲಿ 500ಕ್ಕೂ ಹೆಚ್ಚಿನ ಸಂಖ್ಯೆಯ ಸಿ-60 ಕಮಾಂಡೋಗಳಿಂದ ರಚಿತವಾಗಿದ್ದ 16 ತಂಡಗಳು ಭಾಗಿಯಾಗಿದ್ದವು.
ಘಡ್ಚಿರೋಲಿ ವಲಯ ಸಮಿತಿಯ ಮಾವೋವಾದಿ (ಸಿಪಿಐಎಮ್) ನಾಯಕ ಸುಖ್ಲಾಲ್ ನೇತೃತ್ವದ ಕೊರ್ಚಿ ದಲಮ್ ಸಂಘಟನೆಯ ಸದಸ್ಯರಿಂದ ಕೂಡಿದ್ದ ನಕ್ಸಲ್ ತಂಡ ಇದಾಗಿತ್ತು. ಆದರೆ, ಇವರಲ್ಲಿ ಇತರ ತಂಡಗಳ ಸದಸ್ಯರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿರಬಹುದಾದ ಸಾಧ್ಯತೆಗಳು ಹೆಚ್ಚಿದ್ದು ಇದು ಅವರಿಂದ ಎದುರಾದ ತೀವ್ರ ಪ್ರತಿರೋಧದಿಂದ ಹಾಗೂ ಕಾರ್ಯಾಚರಣೆಯ ಅವಧಿಯಿಂದ ವ್ಯಕ್ತವಾಗತ್ತದೆಂದು ಮೂಲಗಳು ತಿಳಿಸಿವೆ.
ಪೋಲೀಸರು ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳಲ್ಲಿ ಐದು ಎಕೆ-47 ಗನ್ಗಳು ಹಾಗೂ ಒಂದು ಪಿಸ್ಟಲ್ ಸೇರಿವೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ನಡೆದ ಕಾರ್ಯಾಚರಣೆಯು ಎರಡನೇ ದೊಡ್ಡ ಕಾರ್ಯಾಚರಣೆಯಾಗಿದ್ದು ಇದರಲ್ಲಿ 26 ಮಾವೋವಾದಿಗಳು ಹತರಾಗಿದ್ದರೆ ಇದಕ್ಕೂ ಮುನ್ನ ದಿನಾಂಕ 23 ಏಪ್ರಲ್ 2018ರಲ್ಲಿ ನಡೆದ ಕಾರ್ಯಾಚರಣೆಯಲ್ಲಿ 34 ನಕ್ಸಲರನ್ನು ಹತ್ಯೆಮಾಡಲಾಗಿತ್ತು.
Maharashtra police kill 26 maoists in a fierce encounter near Ghadchiroli
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ಮೊದಲು ಚಿಕಿತ್ಸೆ ನೀಡಿದ್ದ ವೈದ್ ಡಾ ರಮಣ್ರಾವ್ಗೆ ಪೊಲೀಸ್ ಭದ್ರತೆ
ಇದನ್ನೂ ಓದಿ: ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಹೈದರಾಬಾದ್ ವ್ಯಕ್ತಿಯನ್ನು ಬಂಧಿಸಿದ ಮುಂಬೈ ಸೈಬರ್ ಪೋಲೀಸರು
Discussion about this post