ಬೆಂಗಳೂರು: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೆರೆಯ ದೇಶಗಳೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಜಿಲ್ಲೆಗಳಲ್ಲಿ ಗಡಿಭದ್ರತಾ ಪಡೆಗಳ (ಬಿಎಸ್ಎಫ್) ಚಟುವಟಿಕೆಗಳ ಮೇಲೆ ನಿಗಾ ಇಟ್ಟಿರಬೇಕೆಂದು ಪೋಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇತ್ತೀಚೆಗೆ ನಾಗಾಲ್ಯಾಂಡ್ನಲ್ಲಿ ರಕ್ಷಣಾಪಡೆಗಳಿಂದ ನಡೆದ 14 ನಾಗರಿಕರ ಹತ್ಯೆಯ ಪ್ರಕರಣದ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದ ಮಮತಾ ಗಡಿ ಭದ್ರತಾ ಪಡೆಗಳು ನಿಗದಿಪಡಿಸಿದ ಕಾರ್ಯವ್ಯಾಪ್ತಿಯನ್ನು ಮೀರದಂತೆ ನೋಡಿಕೊಳ್ಳಬೇಕೆಂದು ಪೋಲೀಸರಿಗೆ ಸೂಚಿಸಿದರಲ್ಲದೇ ಕಾನೂನು ಮತ್ತು ಸುವ್ಯವಸ್ಥೆಯು ಸಂಪೂರ್ಣವಾಗಿ ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದೆಯೆಂದು ಒತ್ತಿ ಹೇಳಿದ್ದಾರೆ.
ಇಂತಹದೊಂದು ಸಮಸ್ಯೆಯಿದೆಯೆಂದು ನನಗೆ ತಿಳಿದಿದೆಯೆಂದ ಮಮತಾ “ಗಡಿಭದ್ರತಾ ಪಡೆಗಳ ಸಿಬ್ಬಂದಿ ನಮ್ಮ ಹಳ್ಳಿಗಳನ್ನು ಪ್ರವೇಶಿಸುತ್ತಾರೆ ಹಾಗೂ ತದನಂತರ ಗ್ರಾಮಸ್ಥರಿಂದ ಕಿರುಕುಳಕ್ಕೊಳಗಾದ ದೂರುಗಳು ಬರುತ್ತವೆ” ಎಂದರು. ಅವರು ರಾಜ್ಯ ಪೋಲೀಸರಿಗೆ ಮಾಹಿತಿ ನೀಡದೇ ತಮ್ಮ ಕಾರ್ಯವ್ಯಾಪ್ತಿಗೆ ಬರದ ಅನೇಕ ಸ್ಥಳಗಳಿಗೆ ಹೋಗುತ್ತಾರೆ ಎಂದೂ ಮಮತಾ ದೂರಿದರು.
ನಾಗಾಲ್ಯಾಂಡ್ನಲ್ಲಿ ಏನಾಯಿತೆಂದು ನಾವೆಲ್ಲಾ ನೋಡಿದ್ದೇವೆಂದ ಮಮತಾ “ಬಂಗಾಳದ ಸಿತಾಲಕುಚಿಯಲ್ಲಿ ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಹಾಗೂ ಇತ್ತೀಚೆಗೆ ಕೂಚ್ಬೆಹಾರ್ನಲ್ಲಿ ಗಡಿ ಭದ್ರತಾಪಡೆಗಳ ಗುಂಡಿಗೆ ಮೂವರು ಬಲಿಯಾಗಿದ್ದಾರೆಂದು ತಿಳಿಸಿದರು. ಕ್ಷೇತ್ರಾಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯನಿರತ ಇನ್ಸ್ಪೆಕ್ಟರ್ಗಳು ಈ ವಿಚಾರದಲ್ಲಿ ಜಾಗರೂಕತೆಯಿಂದಿರಬೇಕೆಂದು ಅವರು ತಿಳಿಸಿದರು. ಕರ್ಣಜೋರಾದಲ್ಲಿ ನಡೆದ ಉತ್ತರ ದಿನಾಜ್ಪುರ ಹಾಗೂ ದಕ್ಷಿಣ ದಿನಾಜ್ಪುರ ಜಿಲ್ಲೆಗಳ ಆಡಳಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಾ ಅವರು ಮೇಲಿನಂತೆ ತಿಳಿಸಿದರು.
ಗಡಿಭದ್ರತಾ ಪಡೆಗಳ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಕೇಂದ್ರದ ನಿರ್ಧಾರಕ್ಕೆ ತಮ್ಮ ತೀವ್ರ ವಿರೋಧವನ್ನು ವ್ಯಕ್ತಪಡಿಸಿರುವ ಮಮತಾ ಈ ನಡೆ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಮಧ್ಯಪ್ರವೇಶಿಸುವ ಪ್ರಯತ್ನವಾಗಿದೆ ಎಂದು ದೂರಿದರು.
ಬಿಜೆಪಿ ನಾಯಕತ್ವದ ಕೇಂದ್ರ ಸರಕಾರವು ಗಡಿಭದ್ರತಾ ಪಡೆಗಳ ಕಾನೂನಿಗೆ ತಿದ್ದುಪಡಿ ಮಾಡಿ ಗಡಿಭದ್ರತಾ ಪಡೆಗಳಿಗೆ ಪಂಜಾಬ್, ಪಶ್ಚಿಮ ಬಂಗಾಳ, ಮತ್ತು ಅಸ್ಸಾಂನ ಅಂತರರಾಷ್ಟ್ರೀಯ ಗಡಿ ಪ್ರದೇಶಗಳಿಂದ 50 ಕಿ.ಮೀ. (ಈ ಮೊದಲು ಕೇವಲ 15 ಕಿ.ಮೀ ವ್ಯಾಪ್ತಿ ಇತ್ತು) ವ್ಯಾಪ್ತಿಯವರೆಗೆ ಶೋಧಿಸುವ, ವಶಪಡಿಸಿಕೊಳ್ಳುವ, ಹಾಗೂ ಶಂಕಿತರನ್ನು ಬಂಧಿಸುವ ಅಧಿಕಾರವನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ನೆರೆ-ಹೊರೆಯ ದೇಶಗಳೊಂದಿಗೆ ನಾವು ಸೌಹಾರ್ದಯುತ ಸಂಬಂಧಗಳನ್ನು ಹೊಂದಿದ್ದು ಯಾವುದೇ ಸಮಸ್ಯೆಗಳಿಲ್ಲದ ಕಾರಣ ಇಲ್ಲದ ಗೊಂದಲಗಳನ್ನು ಸೃಷ್ಟಿಸುವ ಅವಶ್ಯಕತೆಯಿಲ್ಲ ಎಂದ ಮಮತಾ ಕಾನೂನು ಹಾಗೂ ಸುವ್ಯವಸ್ಥೆಯು ರಾಜ್ಯಕ್ಕೆ ಸೇರಿದ ವಿಷಯ ಎಂದು ಪುನರುಚ್ಚರಿಸಿದರು. ಪಶ್ಚಿಮ ಬಂಗಾಳ ರಾಜ್ಯವು ನೆರೆಯ ಬಾಂಗ್ಲಾದೇಶ, ನೇಪಾಳ, ಹಾಗೂ ಭೂತಾನ್ ದೇಶಗಳೊಂದಿಗೆ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ.
ಇದೇ ವೇಳೆ, ಗಡಿಭದ್ರತಾ ಪಡೆಗಳ ಕಾರ್ಯವ್ಯಾಪ್ತಿಯನ್ನು ಪ್ರಶ್ನಿಸಿರುವ ಮಮತಾರ ನಡೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಮುಖ್ಯಮಂತ್ರಿಗಳು ಒಕ್ಕೂಟ ವ್ಯವಸ್ಥೆಯ ಮಾತುಗಳನ್ನಾಡುತ್ತಾರೆ, ಆದರೆ ಜೊತೆಯಲ್ಲೇ ರಕ್ಷಣಾ ಪಡೆಗಳನ್ನು ಅವಮಾನಿಸುವ ಹೇಳಿಕೆ ನೀಡುತ್ತಾರೆ. ಗಡಿಭದ್ರತಾ ಪಡೆಗಳ ಕಾರ್ಯವ್ಯಾಪ್ತಿಯನ್ನೇ ಪ್ರಶ್ನಿಸುತ್ತಾರೆ. ಚುನಾಯಿತ ರಾಜ್ಯ ಸರಕಾರದ ಮುಖ್ಯಸ್ಥರೊಬ್ಬರು ಈ ರೀತಿಯಲ್ಲಿ ಮಾತನಾಡುತ್ತಿದ್ದರೆ ಅವರದೇ ಪಕ್ಷದ ಇತರ ನಾಯಕರೂ ಸಹಜವಾಗಿ ಇದೇ ಧಾಟಿಯಲ್ಲೇ ಮಾತನಾಡುತ್ತಾರೆ. ಇದು ಸಂವಿಧಾನದ ಆಶೋತ್ತರಗಳಿಗೆ ವಿರುದ್ಧವಾಗಿದೆ ಎಂದು ಬಿಜೆಪಿಯ ವಕ್ತಾರ ಸಮಿಕ್ ಭಟ್ಟಾಚಾರ್ಯ ತೀವ್ರವಾಗಿ ಟೀಕಿಸಿದ್ದಾರೆ.
ಪಶ್ಚಿಮ ಬಂಗಾಳ ಗಡಿ ಪ್ರದೇಶವು ಸುಮಾರು 1300 ಕಿ.ಮೀ. ಉದ್ದವಿದ್ದು ಅನೇಕ ಜಲ ಹಾಗೂ ವಿಶಿಷ್ಟ ಸಸ್ಯ ಪ್ರದೇಶಗಳಿಂದ ಕೂಡಿದೆ. ಇಂತಹ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡುವಾಗ 15 ಕಿ.ಮೀ. ದೂರವು ಬಹಳ ಚಿಕ್ಕದಾಗುವುದರಿಂದ ಇದನ್ನು 50 ಕಿ.ಮೀ. ಗಳಿಗೆ ಏರಿಸಿರುವ ಕೇಂದ್ರ ಸರಕಾರದ ನಿರ್ಧಾರ ಸೂಕ್ತವಾಗಿದೆಯೆಂದು ಸಮಿಕ್ ಭಟ್ಟಾಚಾರ್ಯ ತಿಳಿಸಿದರು.
ಪಶ್ಚಿಮ ಬಂಗಾಳದ 112 ಮುನಿಸಿಪಲ್ ಚುನಾವಣೆಗಳು ಒಂದು ವರ್ಷಕ್ಕೂ ಹೆಚ್ಚಿನ ಕಾಲದಿಂದ ಬಾಕಿ ಉಳಿದಿದ್ದು ಇದು ನ್ಯಾಯಾಲಯದ ಮುಂದಿರುವ ವಿಷಯವಾಗಿದೆ. ಹಾಗಿದ್ದರೂ, ಇವನ್ನು ಡಿಸೆಂಬರ್ 19ರ ಕೆಎಮ್ಸಿ ಚುನಾವಣೆಗಳ ನಂತರ ನಡೆಸುವುದಾಗಿ ಮಮತಾ ಘೋಷಿಸಿದ್ದು ಇದು ಅವರ ಸರ್ವಾಧಿಕಾರಿ ಮನೋಭಾವವನ್ನು ಸೂಚಿಸುತ್ತದೆಂದು ಅವರು ತಿಳಿಸಿದರು.
Mamata Banerje says law and order is a state subject
ಇದನ್ನೂ ಓದಿ: Indian Army: ಭಾರತೀಯ ಸೇನೆಯಲ್ಲಿ ಖಾಲಿಯಿದೆ 1 ಲಕ್ಷಕ್ಕೂ ಅಧಿಕ ಹುದ್ದೆಗಳು
Discussion about this post