ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಡಗು ಬಂದರು, ವಿಮಾನ ನಿಲ್ದಾಣ, ಹೆದ್ದಾರಿ ಮತ್ತು ಕೈಗಾರಿಕೆಗೆ ಬೇಕಾದ ವಾತಾವರಣ ಹಾಗೂ ಸಿದ್ಧತೆ 2024ರೊಳಗೆ ಮಾಡಿ ಮುಗಿಸಿಯೇ ಹೊರಡುತ್ತೇನೆ. ಉದ್ಘಾಟನೆ ಮಾಡಲು ಯಾರು ಬೇಕಾದರೂ ಬರಲಿ. ನಮ್ಮ ಜಿಲ್ಲೆಯ ಅಭಿವೃದ್ಧಿಯ ಲಾಭ ನಮಗೇ ಆಗಬೇಕು ಎಂದು ಉತ್ತರ ಕನ್ನಡ ಲೋಕಸಭಾ ಸಂಸದ ಅನಂತಕುಮಾರ್ ಹೆಗಡೆ ಸಮರ್ಥಿಸಿಕೊಂಡರು.
ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಆಗಬೇಕೆಂದು ಕರಾವಳಿಯಲ್ಲಿ ಬಂದರುಗಳ ಸಮುಚ್ಛಯ ಆರಂಭಿಸಲಾಗುತ್ತಿದೆ. ಕೆಲಸ ಶುರುವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜನ ಬುದ್ಧಿವಂತರು. ಯಾವುದೇ ಯೋಜನೆಗಳಿಗೆ ವಿರೋಧ ಮಾಡುವುದಿಲ್ಲ. ನೇರವಾಗಿ ಕೋರ್ಟಿಗೆ ಹೋಗುತ್ತಾರೆ. ಅದರ ಕೆಳಗೆ ಇಲ್ಲವೇ ಇಲ್ಲ. ಏನೇ ಬರಲಿ, ಅತ್ಯಂತ ವಿಶ್ವಾದಿಂದ ಉತ್ತರ ಕನ್ನಡದ ಅಭಿವೃದ್ಧಿಯ ಬಾಗಿಲು ತೆರೆಯಲು ಹೆಜ್ಜೆ ಇಡುತ್ತಿದ್ದೇನೆ. ಮುಂದಿನ ದಶಕದಲ್ಲಿ ಕರ್ನಾಟಕದಲ್ಲಿ ಅಭಿವೃದ್ಧಿಯ ಹೆಬ್ಬಾಗಿಲು ಅಂತಾದರೆ ಅದು ಉತ್ತರ ಕನ್ನಡವೇ. ನಾನು ಹೇಳಿದ್ದು ಈಗ ಯಾರಿಗೂ ಅರ್ಥ ಆಗಲಿಕ್ಕಿಲ್ಲ, ಆದರೆ ಮುಂದಿನ ದಿನಗಳಲ್ಲಿ ಅರ್ಥವಾಗಲಿದೆ. ಅಂದು ನಾನಿರುತ್ತೇ ನೆಯೋ ಇಲ್ಲವೋ ಗೊತ್ತಿಲ್ಲ. ಅದು ಮುಂದೆ ಗೊತ್ತಾಗುತ್ತದೆ ಎಂದು ಅವರು ಸಮರ್ಥಿಸಿಕೊಂಡರು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ನವೆಂಬರ್ ೯ ರಂದು ಆಯೋಜಿಸಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಗಳೂರು ಇಂದು ಕೈತಪ್ಪಿ ಹೋಗಿದೆ. ಅಭಿವೃದ್ಧಿ ಎಂದು ಭಾಷಣ ಮಾಡಿದರೂ ಸಹ ಅದರ ಲಾಭವನ್ನು ಕೇರಳದವರು ಮಾಡಿಕೊಳ್ಳುತ್ತಾರೆ. ಅದರ ದುಷ್ಪರಿಣಾಮವನ್ನು ಮಂಗಳೂರಿನ ಜನರು ಅನುಭವಿಸುತ್ತಿದ್ದಾರೆ ಎಂದು ಟೀಕಿಸಿದರು.
ಕರಾವಳಿ ಸಂಪೂರ್ಣ ದೇಶದ್ರೋಹಿಗಳ ತಾಣವಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮಂಗಳೂರು ಜಿಲ್ಲೆಗೆ ತಲೆನೋವಾಗಿದ್ದು ಮೂಲ ಮಂಗಳೂರಿಗರಲ್ಲ. ಹೊರಗಿನಿಂದಬಂದು ಕುಳಿತವರು. ನಾಳೆ ನಮ್ಮ ಜಿಲ್ಲೆಯಲ್ಲೂ ಅದೇ ಆಗಬೇಕಾ? ಎಂದು ಉತ್ತರ ಕನ್ನಡ ಲೋಕಸಭಾ ಸಂಸದ ಅನಂತಕುಮಾರ್ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ದಿ. ಡಿ.ಕೆ. ರವಿ ಕುರಿತ ಪುಸ್ತಕ ಬಿಡುಗಡೆ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ
Discussion about this post