ನವದೆಹಲಿ: ಒಂದು ವರ್ಷದಿಂದ ರೈತರ ಪ್ರತಿಭಟನೆಗೆ ಕಾರಣವಾಗಿದ್ದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಯನ್ನು ಮುಂಚೆಯೇ ವಾಪಸು 700 ರೈತ ಬಂಧುಗಳ ಜೀವ ಉಳಿಸಬಹುದಿತ್ತು ಎಂದು ಬಿಜೆಪಿಯ ಯುವ ನಾಯಕ, ಫಿಲಿಬಿತ್ ಕ್ಷೇತ್ರದ ಸಂಸದ ವರುಣ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಪತ್ರ ಬರೆದಿದ್ದಾರೆ.
“ಬಿಸಿಲು, ಮಳೆ, ಚಳಿ ಎನ್ನದೆ ಸುಮಾರು ಒಂದು ವರ್ಷ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶಾಲ ಹೃದಯದವರಾದ ಪ್ರಧಾನಿ ಮೋದಿ ಮೂರು ಕೃಷಿ ಕಾಯ್ದೆ ಹಿಂಪಡೆಯುವ ನಿರ್ಧಾರವನ್ನು ಮುಂಚೆಯೇ ಕೈಗೊಂಡಿದ್ದರೆ. ರೈತರ ಈ ಬವಣೆ ತಪ್ಪುತಿತ್ತು. ಜತೆಗೆ ಮುಗ್ಧ 700 ರೈತರ ಜೀವ ಉಳಿಯುತ್ತಿತ್ತು’ ಎಂದು ಆನ್ಲೈನ್ ಮೂಲಕ ಪೋಸ್ಟ್ ಮಾಡಿರುವ ಪತ್ರದಲ್ಲಿ ಹೇಳಿದ್ದಾರೆ.
ನಾಲ್ಕು ಒತ್ತಾಯ
ಜತೆಗೆ ನಾಲ್ಕು ಒತ್ತಾಯಗಳನ್ನೂ ಮಾಡಿರುವ ಅವರು, ಪ್ರತಿಭಟನೆ ವೇಳೆ ಮೃತರಾದ 700 ರೈತರ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ಕೊಡಬೇಕು. ಈ ಮೂಲಕ ಅತಂತ್ರವಾಗಿರುವ ಕುಟುಂಬಗಳಿಗೆ ಆಸರೆಯಾಬೇಕು ಎಂದಿದ್ದಾರೆ. ರಾಜಕೀಯ ಪ್ರೇರಿತವಾಗಿ ರೈತರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ತಕ್ಷಣವೇ ಕೈಬಿಟ್ಟು, ರೈತರಿಗೆ ಪೊಲೀಸರ ಕಿರುಕುಳ ತಪ್ಪಿಸಬೇಕು. ಬೆಳೆಗಳಿಗೆ ಕನಿಷ್ಠ ಬೆಂಬಲವನ್ನು (ಎಂಎಸ್ಪಿ) ಕಾನೂನಾತ್ಮಕವಾಗಿ ಖಾತರಿಪಡಿಸುವ ಕೆಲಸ ಸರ್ಕಾರದಿಂದ ಆಗಬೇಕು ಎಂಬ ರೈತರ ನಿರೀಕ್ಷೆ ಹುಸಿಯಾಗಬಾರದು. ಉತ್ತರ ಪ್ರದೇಶದ ಲಂಖಿಪುರ ಖೇರಿಯಲ್ಲಿ ಅ. 3ರಂದು ನಡೆದ ಹಿಂಸಾಚಾರ ಪ್ರಕರಣವು ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾಗೆ ತಳುಕು ಹಾಕಿಕೊಂಡಿದೆ. ಈ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು. ಇಂಥ ಘಟನೆಗಳು ಪ್ರಜಾಪ್ರಭುತ್ವಕ್ಕೆ ಕಳಂಕ ಎಂದಿದ್ದಾರೆ.
ಇದನ್ನೂ ಓದಿ: Farm Laws : ಕೃಷಿ ಮಸೂದೆ ವಾಪಾಸ್ ನಿರ್ಧಾರ ಜಿಲ್ಲೆಯಲ್ಲಿ ರೈತರ ವಿಜಯೋತ್ಸವ
Discussion about this post