ವಾಷಿಂಗ್ಟನ್: ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ 2008ರ ನವೆಂಬರ್ 26ರಂದು ದಾಳಿ ಪ್ರಕರಣದಲ್ಲಿ 13 ವರ್ಷದಿಂದ ನ್ಯಾಯದಾನ ಆಗಿಲ್ಲ. ದಾಳಿಗೆ ಕಾರಣರಾದವರ ವಿರುದ್ಧ ವಿಚಾರಣೆ ಚುರುಕುಗೊಳ್ಳಬೇಕು ಎಂದು ಅಮೆರಿಕವು ಪಾಕಿಸ್ತಾನದ ಕಿವಿಹಿಂಡಿದೆ.
ಈ ದುರ್ಘಟನೆ ಸಂಭವಿಸಿ 13 ವರ್ಷಗಳಾಗಿಹೋಗಿದೆ. ಆದರೂ ದಾಳಿಯ ಸಂಚುಕೋರರಿಗೆ ಶಿಕ್ಷೆಯಾಗಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಟ್ವೀಟ್ ಮಾಡಿದ್ದಾರೆ. ದಾಳಿಯಲ್ಲಿ ಮಡಿದ ಅಮೆರಿಕದ ಆರು ಮಂದಿಯನ್ನು ಸ್ಮರಿಸಿದ್ದಾರೆ. ಯಾವುದೇ ವಿಧದ ಭಯೋತ್ಪಾದನೆಯನ್ನು ಆಮೂಲಾಗ್ರವಾಗಿ ಸದೆಬಡೆಯಬೇಕು ಎಂಬ ವಿಷಯದಲ್ಲಿ ಭಾರತ ಮತ್ತು ಅಮೆರಿಕ ಕಟಿಬದ್ಧವಾಗಿವೆ ಎಂದು ವಿದೇಶಾಂಗ ಇಲಾಖೆಯ ಉಪಕಾರ್ಯದಶರ್ಶಿ ವೆಂಡಿ ಶೆರ್ಮನ್ ಹೇಳಿದ್ದಾರೆ.
‘ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ್ದಾಗ 26/11 ದಾಳಿಯಲ್ಲಿ ಮಡಿದವರ ನೆನಪಿಗೆ ತಾಜ್ ಹೋಟೆಲ್ನಲ್ಲಿ ನಿರ್ಮಿಸಿರುವ ಸ್ಮಾರಕಕ್ಕೆ ಭೇಟಿ ನೀಡಿದ್ದೆ. ಇವತ್ತು ಈ ಕರಾಳ ಘಟನೆ ನಡೆದು 13 ವರ್ಷ ಆಗಿದೆ. ಆದರೆ, ಸಂಚು ನಡೆಸಿದ ದುರಳರಿಗೆ ಶಿಕ್ಷೆಯಾಗಿಲ್ಲ ಎನ್ನುವುದು ನೋವನ್ನು ಹೆಚ್ಚಿಸುತ್ತದೆ’ ಎಂದು ಸಂಸದ ಎಲಿಸ್ ಸ್ಟೆಫಾನಿಕ್ ಟ್ವೀಟ್ ಮಾಡಿದ್ದಾರೆ. ಈ ಮಧ್ಯೆ, ವಾಷಿಂಗ್ಟನ್ನಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ದಾಳಿಯಲ್ಲಿ ಮಡಿದವರ 13ನೇ ವರ್ಷದ ಸ್ಮರಣೆಯ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು.
ದಾಳಿಯ ಹಿನ್ನೆಲೆ
ಪಾಕ್ ಮೂಲದ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಸಂಘಟನೆಯ 10 ಉಗ್ರರು ಸಮುದ್ರ ಮಾರ್ಗದಲ್ಲಿ ಮುಂಬೈಗೆ ಬಂದು ನಿಲ್ದಾಣ, ಎರಡು ಐಷಾರಾಮಿ ಹೋಟೆಲ್, ಯಹೂದಿಗಳ ಪ್ರಾರ್ಥನಾ ಕೇಂದ್ರ ಇನ್ನಿತರ ಕಡೆ ಗುಂಡು, ಬಾಂಬ್ ದಾಳಿ ನಡೆಸಿದ್ದರು. ಇದರಿಂದ ಅಮೆರಿಕದ ಆರು ಜನರು ಸೇರಿ 15 ರಾಷ್ಟ್ರಗಳ 166 ಮಂದಿ ಸಾವನ್ನಪ್ಪಿದರು. 300 ಜನರು ಗಾಯಗೊಂಡರು. 60 ತಾಸಿನ ಸತತ ಕಾರ್ಯಾಚರಣೆ ನಡೆಸಿದ ಭಾರತದ ಎನ್ಎಸ್ಜಿ ತಂಡ ಒಂಬತ್ತು ಉಗ್ರರನ್ನು ಹೊಡೆದುರುಳಿಸಿತು. ಉಗ್ರ ಅಜ್ಮಲ್ ಕಸಬ್ನನ್ನು ಸೆರೆ ಹಿಡಿಯಿತು. 2012ರಲ್ಲಿ ಆತನಿಗೆ ಮರಣದಂಡನೆ ಆಯಿತು. ಈ ಘಟನೆ ತರುವಾಯ ಪಾಕ್ ಮತ್ತು ಭಾರತದ ಮಧ್ಯೆ ವೈಷಮ್ಯ ಇನ್ನಷ್ಟು ಹಿರಿದಾಗಿ ಯುದ್ಧ ಕಾರ್ಮೋಡ ಕವಿದಿತ್ತು.
ಇದನ್ನೂ ಓದಿ: Constitution: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಶ್ರಮದ ಫಲವೇ ಸಂವಿಧಾನ
Discussion about this post