ನವದೆಹಲಿ: ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಲವು ಪಕ್ಷಗಳು ವಂಶಾಡಳಿತದ ಹಿಡಿತಕ್ಕೆ ಒಳಪಟ್ಟಿವೆ. ಇಂಥ ಪಕ್ಷಗಳಿಂದ ಪ್ರಜಾತಂತ್ರದ ಮೌಲ್ಯಗಳು ನಶಿಸುತ್ತಿವೆ. ಇವುಗಳ ಸೇವೆ ದೇಶಕ್ಕಾಗಿ ಅಲ್ಲ; ಕುಟುಂಬಕ್ಕಾಗಿ ಮತ್ತು ಕುಟುಂಬಕ್ಕೊಸ್ಕರವೇ ಸೀಮಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಂಶಪಾರಂಪರ್ಯ ರಾಜಕಾರಣವನ್ನು ಟೀಕಿಸಿದರು.
ಸಂಸತ್ನ ಸೆಂಟ್ರಲ್ ಹಾಲ್ನಲ್ಲಿ ಶುಕ್ರವಾರ ನಡೆದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಹಿನ್ನೆಲೆ ಇರುವ ಕುಟುಂಬದ ಸದಸ್ಯರು ರಾಜಕೀಯಕ್ಕೆ ಬರಬಾರದು ಎಂದೇನೂ ಇಲ್ಲ. ಸಮರ್ಥರು ಮತ್ತು ಜನಬೆಂಬಲ ಪಡೆದವರು ರಾಜಕೀಯಕ್ಕೆ ಬರಲಿ. ಆದರೆ, ತಲೆ ತಲೆಮಾರುಗಳಿಂದ ಪಕ್ಷದ ನೇತೃತ್ವವನ್ನು ಒಂದೇ ಕುಟುಂಬ ವಹಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕಾಂಗ್ರೆಸ್ ಹೆಸರೆತ್ತದೆ ಮೂದಲಿಸಿದರು.
ಇಂಥ ರಾಜಕೀಯ ಪಕ್ಷಗಳಿಂದಾಗಿ ದೇಶ ಬಿಕ್ಕಟ್ಟಿನತ್ತ ಸಾಗುತ್ತಿದೆ. ಸಂವಿಧಾನವನ್ನು ರಚಿಸಬೇಕು ಎಂದು ಮುನ್ನುಗ್ಗುತ್ತಿರುವವರಿಗೆ ವಂಶಪಾರಂಪರ್ಯ ರಾಜಕಾರಣ ಕಳವಳಕಾರಿ ವಿಚಾರ ಎಂದು ಅಭಿಪ್ರಾಯಪಟ್ಟರು. ನಮ್ಮ ಸಂವಿಧಾನವು ದೇಶದ ವಿವಿಧತೆಯ ಒಟ್ಟಂದವಾಗಿದೆ. ಅನೇಕ ಅಡೆತಡೆಗಳನ್ನು ಎದುರಿಸಿ ಸಂವಿಧಾನ ರಚನೆಯಾಗಿದೆ. ರಾಜರಾಳ್ವಿಕೆಯ ಪ್ರಾಂತ್ಯಗಳನ್ನು ಒಗ್ಗೂಡಿಸಿ ದೇಶದ ಸ್ವರೂಪ ನೀಡಿದೆ. ಈ ಮಹಾಕಾರ್ಯವನ್ನು ಮಾಡಿದ ನಮ್ಮಲ್ಲ ಹಿರಿಯರಿಗೂ ಈ ಸದನ ನಮಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ, ಉಪರಾಷ್ಟ್ರಪತಿ ಎಂ,ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರು, ಸಂಸದರು ಭಾಗಿಯಾಗಿದ್ದರು. ಆದರೆ ಕಾರ್ಯಕ್ರಮದಲ್ಲಿ 14 ವಿರೋಧ ಪಕ್ಷಗಳು ಪಾಲ್ಗೊಂಡಿರಲಿಲ್ಲ. ವಿಜ್ಞಾನ ಭವನದಲ್ಲೂ ಇನ್ನೊಂದು ಕಾರ್ಯಕ್ರಮ ನಡೆಯಿತು.
ಬಾಯ್ತೆರೆಯಲು ಅವಕಾಶ ಇಲ್ಲದ ಕಾರ್ಯಕ್ರಮ: ಖರ್ಗೆ ಟೀಕೆ
ಸಂವಿಧಾನ ದಿನದ ಕಾರ್ಯಕ್ರಮಕ್ಕೆ ಸೂಕ್ತ ಆಹ್ವಾನ ಇಲ್ಲ. ಮಾತನಾಡಲು ಅವಕಾಶ ಇರುವುದಿಲ್ಲ ಇಂತ ಸಮಾರಂಭದಲ್ಲಿ ವಿರೋಧ ಪಕ್ಷಗಳಿಗೆ ಯಾವುದೇ ಪಾತ್ರವಿಲ್ಲ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಆಡಳಿತದಲ್ಲಿ ಸಂವಿಧಾನಾತ್ಮಕ ನಡೆ ಕಾಣಿಸುತ್ತಿಲ್ಲ. ಆದರೂ ಸಂವಿಧಾನ ದಿನವನ್ನು ಅದು ಆಚರಿಸುತ್ತಿದೆ. ಇದೊಂದು ಪಿಆರ್ ಕಾರ್ಯಕ್ರಮವಷ್ಟೆ ಎಂದು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಆರೋಪಿಸಿದ್ದಾರೆ.
ಇದನ್ನೂ ಓದಿ: Narendra Modi: ಕುಶಿನಗರ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
Discussion about this post