ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಸ್ವಚ್ಛಭಾರತ ಅಭಿಯಾನದ ಅಂಗವಾಗಿ ಪ್ರತಿ ವರ್ಷ ನಡೆಸಲಾಗುವ “ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆ”ಯಲ್ಲಿ ಈ ಬಾರಿಯ ಸ್ವಚ್ಛನಗರಿಗಳ ಹೆಸರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶನಿವಾರ (ನ.20) ಪ್ರಕಟಿಸಿದ್ದಾರೆ.
ಈ ಬಾರಿಯ ಸ್ವಚ್ಛನಗರಿಗಳ ಪಟ್ಟಿಯಲ್ಲಿ ಮಧ್ಯಪ್ರದೇಶ ರಾಜ್ಯದ ಇಂದೂರ್ ನಗರವು ಪ್ರಥಮ ಸ್ಥಾನದಲ್ಲಿದ್ದು ಸತತ ಐದನೆಯ ಬಾರಿಗೆ ದೇಶದ ಅತ್ಯಂತ ಸ್ವಚ್ಛನಗರವೆಂದು ಘೋಷಿತವಾದ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುಜರಾತ್ನ ಸೂರತ್ ಹಾಗೂ ಆಂಧ್ರಪ್ರದೇಶದ ವಿಜಯವಾಡ ನಗರಗಳು ಕ್ರಮವಾಗಿ ಎರಡನೆಯ ಹಾಗೂ ಮೂರನೆಯ ಸ್ಥಾನಗಳನ್ನು ಗಳಿಸಿವೆ.
ಗಂಗಾ ನದಿಯ ತಟದ ನಗರಗಳಲ್ಲಿ ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಾಣಸಿ ಪ್ರಥಮ ಸ್ಥಾನವನ್ನು ಪಡೆದಿದ್ದು ಇದೇ ವಿಭಾಗದಲ್ಲಿ ಬಿಹಾರದ ಮುಂಗೇರ್ ಹಾಗೂ ಪಾಟ್ನಾ ನಗರಗಳು ಕ್ರಮವಾಗಿ ಎರಡನೆಯ ಹಾಗೂ ಮೂರನೆಯ ಸ್ಥಾನಗಳನ್ನು ಅಲಂಕರಿಸಿವೆ.
ದೇಶದ ಅತ್ಯಂತ ಸ್ವಚ್ಛರಾಜ್ಯ ಎಂಬ ಕೀರ್ತಿ ಛತ್ತೀಸ್ಗಢ್ ರಾಜ್ಯಕ್ಕೆ ಲಭ್ಯವಾಗಿದೆ.
ಸ್ವಚ್ಛನಗರಗಳ ಪಟ್ಟಿಯಲ್ಲಿರುವ 10 ನಗರಗಳ ಹೆಸರುಗಳು ಕ್ರಮವಾಗಿ ಹೀಗಿವೆ: ಇಂದೋರ್, ಸೂರತ್, ವಿಜಯವಾಡ, ನವಿ ಮುಂಬೈ, ದೆಹಲಿ, ಪೂನಾ, ಭೋಪಾಲ್, ವಡೋದರಾ, ವಿಶಾಖಪಟ್ಟಣ, ಹಾಗೂ ಅಹಮದಾಬಾದ್.
ಈ ಬಾರಿಯ ಸಮೀಕ್ಷೆಯಲ್ಲಿ 4320 ನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಕೇಂದ್ರ ಸರಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯವು ಈ ಅಭಿಯಾನದ ನೋಡಲ್ ಏಜೆನ್ಸಿಯಾಗಿದ್ದು ಶನಿವಾರ ನಡೆದ ಸಮಾರಂಭದಲ್ಲಿ ಇದೇ ಖಾತೆಯ ಸಚಿವ ಹರದೀಪ್ಸಿಂಗ್ ಪುರಿಯವರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
President Ramnath Kovind Distributes Awards for the Cleanest Cities of the Country
ಇದನ್ನೂ ಓದಿ: ನೆಹರು ಯುವ ಕೇಂದ್ರದಿಂದ ಸ್ವಚ್ಛ ಭಾರತ ಯೋಜನೆಯಡಿ ಮುಳ್ಳಯ್ಯನ ಗಿರಿಯಲ್ಲಿ ಸ್ವಚ್ಛತಾ ಕಾರ್ಯ
ಇದನ್ನೂ ಓದಿ: ಶೃಂಗೇರಿ ಪಾರ್ಶ್ವನಾಥ ದೇಗುಲ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಸ್ವಚ್ಛತಾ ಸೇವೆ
Discussion about this post