ನವದೆಹಲಿ: ಚೀನಾ ಸೇನೆ ಸರಹದ್ದು ಮೀರಿಬಂದು ಅತಿಕ್ರಮಣ ನಡೆಸಿದ್ದರೂ ಏನಾಗಿಲ್ಲವೆಂದು ಕೇಂದ್ರ ಸರ್ಕಾರ ಮಗುಮ್ಮಾಗಿರುವುದು ವಿಷಾದನೀಯ. ದೇಶದ ಭದ್ರತೆ ವಿಷಯದಲ್ಲಿ ರಾಜಿ ಆಗುವುದು ಕ್ಷಮೆಗೆ ಸುತಾರಂ ಅರ್ಹ ಅಲ್ಲ ಎಂದು ವಯನಾಡು ಕ್ಷೇತ್ರದ ಸಂಸದ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದಶಿರ್ ರಾಹುಲ್ ಗಾಂಧಿ ಹೇಳಿದ್ದಾರೆ.
ಚೀನಾದ ತಂತ್ರಕ್ಕೆ ಕೇಂದ್ರ ಸರ್ಕಾರ ಯಾವುದೇ ಪ್ರತಿತಂತ್ರ ಮಾಡಿಲ್ಲವೆಂದರೆ 56 ಇಂಚಿನ ಎದೆಯ ನಾಯಕರದ್ದು (ಪ್ರಧಾನಿ ಮೋದಿ) ಅಳ್ಳೆದೆಯೆ? ಎಂದು ಮೂದಲಿಸಿದ್ದಾರೆ. “ನಮ್ಮ ಸೈನಿಕರು ಪ್ರಾಣವನ್ನು ಪಣಕ್ಕಿಟ್ಟು ಗಡಿ ರಕ್ಷಿಸುತ್ತಿದ್ದಾರೆ. ಆದರೆ, ಸರ್ಕಾರ ಈ ರೀತಿ ಕಪಟವಾಡುತ್ತಿದೆ’ ಎಂದು ಟೀಕಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಗುಜರಾತ್ ಮಾದರಿಯಂತೆ ಉತ್ತರ ಪ್ರದೇಶವನ್ನು ಅಭಿವೃದ್ಧಿ ಪಡಿಸಲು 56 ಇಂಚಿನ ಕೆಚ್ಚೆದೆ ಇದೆ ಎಂದು ನರೇಂದ್ರ ಮೋದಿ ಹೇಳಿದ್ದರು. ಇದೇ ಹೇಳಿಕೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಟೀಕಾಬಾಣ ಪ್ರಯೋಗಿಸಿದ್ದಾರೆ.
ಚೀನಾ ಗಡಿ ಅತಿಕ್ರಮಣದ ವಿಚಾರದಲ್ಲಿ ವಿದೇಶಾಂಗ ಸಚಿವಾಲಯ ಮತ್ತು ಮೂರೂ ಪಡೆಗಳ ಪ್ರಧಾನ ದಂಡನಾಯಕ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಹೇಳಿಕೆ ವಿರೋಧಾಭಾಸದಿಂದ ಕೂಡಿದೆ ಎಂದು ಟೀಕಿಸಿದ್ದಾರೆ.
ಚೀನಾ ಸೇನೆ ಗಡಿ ಅತಿಕ್ರಮಿಸಿ ಗ್ರಾಮವನ್ನು ನಿರ್ಮಿಸಿದೆ ಎನ್ನುವುದು ಸುಳ್ಳು. ಆಪಾದನೆ ಮಾಡಲಾಗುತ್ತಿರುವ ಗ್ರಾಮವು ಗಡಿ ನಿಯಂತ್ರಣ ರೇಖೆಯ (ಎಲ್ಎಸಿ) ಚೀನಾದ ಭಾಗದಲ್ಲೇ ಇದೆ ಎಂದು ಸಿಡಿಎಸ್ ಬಿಪಿನ್ ರಾವತ್ ಹೇಳಿದ್ದರು.
ಅಮೆರಿಕದ ರಕ್ಷಣಾ ಇಲಾಖೆ ಕಾಂಗ್ರೆಸ್ಗೆ (ಸಂಸತ್) ಸಲ್ಲಿಸಿರುವ ವರದಿಯಲ್ಲಿ ಟೆಬೆಟ್ ಸ್ವಾಯತ್ತ ಪ್ರದೇಶ ಮತ್ತು ಭಾರತದ ಅರುಣಾಚಲ ಪ್ರದೇಶದ ಮಧ್ಯೆ ಚೀನಾ ನೂರು ಮನೆಗಳಿರುವ ಹಳ್ಳಿಯೊಂದನ್ನು ನಿರ್ಮಿಸಿದೆ ಎಂದು ಉಲ್ಲೇಖಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯ, ಚೀನಾ ಅತಿಕ್ರಮಿಸಿದೆ ಎನ್ನಲಾದ ಪ್ರದೇಶವನ್ನು ಭಾರತ ಮಾನ್ಯ ಮಾಡಿಲ್ಲ ಎಂದು ಗುರುವಾರ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಪಾಕ್ಗೆ ಪಿಎನ್ಎಸ್ ತುಘ್ರಿಲ್ ಅತ್ಯಾಧುನಿಕ ಜಹಜು ನೀಡಿದ ಚೀನಾ
Discussion about this post