ಮುಂಬೈ: ಯುವ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಅತ್ಯಾಚಾರ ಎಸಗಿದ ಮೂವರು ಅಪರಾಧಿಗಳಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ಇಳಿಸಿದೆ. ಅಪರಾಧಿಗಳಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯ ಖಾತರಿಗಾಗಿ ಈ ಪ್ರಕರಣ ಬಾಂಬೆ ಹೈಕೋರ್ಟ್ ನ್ಯಾಯಮೂತಿಗಳಾದ ಸಾಧನಾ ಜಾಧವ್ ಮತ್ತು ಪೃಥ್ವಿರಾಜ್ ಚವ್ಹಾಣ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು. “ಕೋರ್ಟ್ಗಳು ಯಾವುದೇ ಪ್ರಕರಣಗಳನ್ನು ನಿರ್ಲಿಪ್ತ ಭಾವದಲ್ಲೇ ನೋಡಬೇಕು. ಹಾಗಾಂತ ಕಾನೂನಿನ ಪ್ರಕ್ರಿಯೆಗಳನ್ನು ನಿರ್ಲಕ್ಷ್ಯ ಮಾಡಲಾಗದು. ಜತೆಗೆ ಸಾವು ಪಶ್ಚಾತಾಪದ ಪರಿಕಲ್ಪನೆಯನ್ನೆ ಕೊನೆಗಾಣಿಸುತ್ತದೆ. ಸದರಿ ಪ್ರಕರಣದಲ್ಲಿ ಅಪರಾಧಿಗಳು ಫಾಸಿಗೆ ಮಾತ್ರ ಅರ್ಹರೆಂದು ಪರಿಗಣಿಸಲಾಗದು. ಅವರು ಮಾಡಿದ ತಪ್ಪಿಗೆ ಪಶ್ಚಾತಾಪ ಪಡಲು ಜೀವಾವಧಿ ಶಿಕ್ಷೆಯಾದರೂ ಆದೀತು. ಆದರೆ, ಅಪರಾಧಿಗಳು ಸಮಾಜದಲ್ಲಿ ಒಗ್ಗೂಡುವಂತಿಲ್ಲ. ಆದ್ದರಿಂದ ಅವರಿಗೆ ಪೆರೋಲ್ಗೆ ಅನುಮತಿಸುವುದಿಲ್ಲ’ ಎಂದು ಪೀಠ ಹೇಳಿದೆ.
ಅತ್ಯಾಚಾರ ನೀಚತನದ ಪರಮಾವಧಿ. ಇಂಥ ಅಪರಾಧವು ಸಮಾಜದ ಸಾಮೂಹಿಕ ಆತ್ಮಸಾಕ್ಷಿಯನ್ನೆ ಅಲುಗಾಡಿಸುತ್ತದೆ. ಆದರೆ, ತಪ್ಪಿತಸ್ಥರಿಗೆ ವಿಧಿಸಲಾದ ಮರಣದಂಡನೆಯನ್ನು ಪರಿಷ್ಕರಣೆ ಮಾಡಲಾಗದೆಂಬ ಅಂಶವನ್ನು ಉಪೇಕ್ಷಿಸಲಾಗದು’ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ
ಸೆಂಟ್ರಲ್ ಮುಂಬೈನಲ್ಲಿ ಸ್ಥಗಿತವಾಗಿ ಪಾಳುಬಿದಿದ್ದ ಶಕ್ತಿ ಮಿಲ್ ಆವರಣದಲ್ಲಿ 2013ರ ಆಗಸ್ಟ್ 22ರಂದು 22 ವರ್ಷದ ಯುವ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಐವರ ವಿರುದ್ಧ ಪ್ರಕರಣ ದಾಖಲಾಯಿತು. ಇವರಲ್ಲೊಬ್ಬ ವಯಸ್ಕನಲ್ಲದ ಆರೋಪಿಯಾಗಿದ್ದ.
ಸೆಷನ್ಸ್ ನ್ಯಾಯಾಲಯವು 2014ರ ಮಾರ್ಚ್ನಲ್ಲಿ ವಿಜಯ್ ಜಾಧವ್, ಮೊಹಮ್ಮದ್ ಖಾಸಿಂ ಶೇಖ್, ಮೊಹಮ್ಮದ್ ಅನ್ಸಾರಿಗೆ ಭಾರತೀಯ ದಂಡ ಸಂಹಿತೆ (ಐಪಿಸಿ) 376(ಇ) ಅನ್ವಯ (ಅತ್ಯಾಚಾರದ ಅಪರಾಧಿಗೆ ಗರಿಷ್ಠ ಶಿಕ್ಷೆ) ಮರಣ ದಂಡನೆ ವಿಧಿಸಿತ್ತು. ನಾಲ್ಕನೇ ಅಪರಾಧಿ ಸಿರಾಜ್ ಖಾನ್ಗೆ ಜೀವಾವಧಿ ಸಜೆ ನೀಡಲಾಯಿತು. ಬಾಲಾರೋಪಿಯನ್ನು ಸುಧಾರಣೆಗಾಗಿ ಬಾಲ ಮಂದಿರಕ್ಕೆ ಕಳುಹಿಸಲು ಆದೇಶಿಸಿತು.
ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯ: 5 ಸ್ಟಾರ್ ಹೋಟೆಲ್ನಲ್ಲಿ ಕುಳಿತ ಜನ ರೈತರನ್ನು ದೂಷಿಸುತ್ತಿದ್ದಾರೆ- ಸುಪ್ರೀಂ ತರಾಟೆ.
Discussion about this post