ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ದ್ರಾಗದ್ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಬುಧವಾರ ನಡೆಸಿದ ಕಾರ್ಯಾಚರಣೆ ವೇಳೆಯಲ್ಲಿ ಲಷ್ಕರ್-ಎ-ತೊಯ್ಬಾದ (ಎಲ್ಇಟಿ) ಭಾಗವಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್)ನ ಇಬ್ಬರು ಉಗ್ರರು ಹತರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ಒಬ್ಬ ಸೈನಿಕ ವೀರಮರಣವನ್ನಪ್ಪಿದ್ದಾರೆ. ಭದ್ರತಾಪಡೆಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.
ಶೋಫಿಯಾನ್ ಜಿಲ್ಲೆಯ ಟಿಆರ್ಎಫ್ ಕಮಾಂಡರ್ ಆಗಿದ್ದ ಅದಿಲ್ ವಾನಿ ಈ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾನೆ. ಉತ್ತರ ಪ್ರದೇಶದ ಸಹರನಪುರ ಮೂಲದಿಂದ ಕಾಶ್ಮೀರಕ್ಕೆ ಬಂದು ಮರಗೆಲಸ ಮಾಡಿಕೊಂಡು ಹೊಟ್ಟೆಹೊರೆಯುತ್ತಿದ್ದ ವಲಸಿಗನನ್ನು ವಾನಿ ಮೂರು ದಿನದ ಹಿಂದೆ ಹತ್ಯೆ ಮಾಡಿದ್ದ. 2020ರಿಂದ ವಾನಿ ವಿಧ್ವಂಸಕ ಕೃತ್ಯದಲ್ಲಿ ಸಕ್ರಿಯನಾಗಿದ್ದ ಎಂದು ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಹೇಳಿದ್ದಾರೆ. ಜಮ್ಮು-ಕಾಶ್ಮೀರದ ವಿವಿಧೆಡೆ ಎರಡು ವಾರಗಳಿಂದೀಚೆಗೆ 15 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದೂ ತಿಳಿಸಿದ್ದಾರೆ.
11 ವರ್ಷದ ಬಳಿಕ ದೀರ್ಕಾಲದ ಶೋಧ ಕಾರ್ಯ
ಜಮ್ಮು-ಕಾಶ್ಮೀರದ ಫೂಂಛ್ ಜಿಲ್ಲೆಯ ಸುರಂಕೋಟ್ ತಾಲ್ಲೂಕಿನ ಡೇರಾ ಕಿ ಗಲಿಯ ಅರಣ್ಯ ವ್ಯಾಪ್ತಿಯಲ್ಲಿ ಅ. 11ರಂದು ಆರಂಭವಾದ ಕಾರ್ಯಾಚರಣೆ 10ನೇ ದಿನವಾದ ಬುಧವಾರ ಕೂಡ ಮುಂದುವರಿದಿದೆ. 2009ರ ನಂತರ ದೀರ್ಘಾವಧಿಯ ಕಾರ್ಯಾಚರಣೆ ಇದಾಗಿದ್ದು, 11 ವರ್ಷದ ಹಿಂದೆ ಫೂಂಛ್ ಜಿಲ್ಲೆಯಲ್ಲಿ 10 ದಿನ ಶೋಧ ಕಾರ್ಯನಡೆದಿತ್ತು.
ಅ. 11ರ ನಂತರ ಇಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಕಾರ್ಯಾಚರಣೆ ವೇಳೆ ಸೇನೆಯ ಇಬ್ಬರು ಕಿರಿಯ ಅಧಿಕಾರಿಗಳು ಸೇರಿ 9 ಯೋಧರು ಸಾವನ್ನಪ್ಪಿದ್ದಾರೆ. ಉಗ್ರರ ಶವಗಳು ಪತ್ತೆಯಾಗದ ಕಾರಣ ಭಯೋತ್ಪಾದಕರು ದೊಡ್ಡ ಗುಂಪು ದಟ್ಟ ಅರಣ್ಯದಲ್ಲೇ ಅಡಗಿರುವ ಶಂಕೆ ಇದ್ದು, ಪಾಕ್ ಸೇನೆಯ ಅಧಿಕಾರಿಯ ಸೂಚನೆಯಂತೆ ಈ ಗುಂಪು ಸಕ್ರಿಯವಾಗಿದೆ ಎಂದು ಹೇಳಲಾಗಿದೆ. ಈ ಉಗ್ರರ ಹಡೆಮುರಿ ಕಟ್ಟಲು ವಿಶೇಷ ಪ್ಯಾರಾ ಕಮಾಂಡೋಗಳು ಶೋಧಕಾರ್ಯ ನಡೆಸುತ್ತಿದ್ದಾರೆ. ಡ್ರೋನ್ಗಳನ್ನೂ ಬಳಕೆ ಮಾಡುತ್ತಿದ್ದಾರೆ.
ಅಡವಿಯ ಸಮೀಪದ ಗ್ರಾಮಗಳ ಜನರಿಗೆ ಮನೆಯಿಂದ ಹೊರಬಾರದಂತೆ ಸೂಚಿಸಲಾಗಿದ್ದು, ಅರಣ್ಯಕ್ಕೆ ಜಾನುವಾರುಗಳನ್ನು ಮೇಯಿಸಲು ಕರೆತರಬಾರದು ಎಂದು ಅಪ್ಪಣೆ ಮಾಡಲಾಗಿದೆ.
Discussion about this post