ರಕ್ತದೊತ್ತಡ ಇಂದಿನ ದಿನಗಳಲ್ಲಿ ಬಹುತೇಕರು ಎದುರಿಸತ್ತಿರುವ ಸಮಸ್ಯೆಯಾಗಿದ್ದು ನಮ್ಮ ಜೀವನಶೈಲಿಯ ಲೋಪ-ದೋಷಗಳೂ ಕಾರಣವಾಗಿವೆ. ನಮ್ಮ ಆಹಾರದಲ್ಲಿನ ಆಶಿಸ್ತು, ವ್ಯಾಯಾಮವಿಲ್ಲದ ದಿನಚರಿ, ಸ್ವಲ್ಪ ದೂರದ ಜಾಗಗಳಿಗೆ ಹೋಗಿಬರಲೂ ವಾಹನಗಳನ್ನೇ ಉಪಯೋಗಿಸುವ ಮನಸ್ಥಿತಿಗಳಿಂದಾಗಿ ದೇಹಕ್ಕೆ ಸಿಗಬೇಕಾದ ವ್ಯಾಯಾಮ ಸಿಗದೇ ಈ ಸ್ಥಿತಿ ತಲುಪಿದ್ದೇವೆ.
ವೈದ್ಯರ ಸಲಹೆಗಳ ಪ್ರಕಾರ ಸೋಡಿಯಂ (ಉಪ್ಪಿನ ಆಂಶ) ಕಡಿಮೆಯಿರುವ ಆಹಾರಗಳು, ನಿತ್ಯ ದಿನಚರಿಯ ವ್ಯಾಯಾಮ ಪದ್ಧತಿಯನ್ನು ರೂಢಿಸಿಕೊಳ್ಳುವುದು, ಹಾಗೂ ಮುನ್ನೆಚ್ಚರಿಕೆಯ ಕ್ರಮಗಳನ್ನು ಪಾಲಿಸುವುದರಿಂದ ಏರು ರಕ್ತದೊತ್ತಡವನ್ನು ಸೂಕ್ತವಾಗಿ ನಿರ್ವಹಿಸಬೇಕಿರುವುದು ಹೆಚ್ಚು ಸೂಕ್ತವೇ ಆದರೂ ಇತ್ತೀಚಿನ ಅಧ್ಯಯನಗಳ ಪ್ರಕಾರ ಒಂದು ಕಲ್ಲಂಗಡಿ ಹಣ್ಣಿನ ಒಂದು ಲೋಟ ರಸ ಅಥವಾ ಜ್ಯೂಸ್ ನಿಮ್ಮ ಏರು ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ ತರಬಲ್ಲುದು.
ಏರು ರಕ್ತದೊತ್ತಡಕ್ಕೆ ಉಪ್ಪಿನ ಅಂಶ ಹೆಚ್ಚಿರುವ ಆಹಾರ, ಧೂಮಪಾನ, ಮದ್ಯಪಾನ, ಒತ್ತಡದ ಜೀವನ ಮುಂತಾದ ಅನೇಕ ಕಾರಣಗಳಿದ್ದು ಇದು ಕೆಲವೊಮ್ಮೆ ಅನುವಂಶಿಕವಾಗಿಯೂ ಮತ್ತು ಬೇರೊಬ್ಬರಿಂದ ರಕ್ತ ಪಡೆಯುವುದರಿಂದಲೂ ಬರಬಹುದಾಗಿದೆ. ಸೂಕ್ತ ಚಿಕಿತ್ಸೆ ಅಥವಾ ನಿರ್ವಹಣೆಯಲ್ಲಿನ ದೋಷಗಳಿಂದಾಗಿ ಇದು ಕ್ರಮೇಣ ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡಗಳ ವೈಫಲ್ಯ, ಹೃದಯಸ್ತಂಭನ, ಹಾಗೂ ಕೆಲ ಸಂದರ್ಭಗಳಲ್ಲಿ ಅಂಧತ್ವಕ್ಕೂ ಕಾರಣವಾಗಬಲ್ಲ ಇದನ್ನು “ಮೌನ ಹಂತಕ”ನೆಂದರೂ ತಪ್ಪಿಲ್ಲ.
ಸಕ್ಕರೆ ಸೇರಿಸಿದ, ಕಡಿಮೆ ಫೈಬರ್ಯುಕ್ತ ಹಣ್ಣಿನ ರಸಗಳು ಒಳ್ಳೆಯದಲ್ಲವಾದರೂ ಸಕ್ಕರೆ ಸೇರಿಸಿದ ಕಾರ್ಬನೇಟೆಡ್ ತಂಪು ಪಾನೀಯಗಳಿಗೆ ಹೋಲಿಸಿದರೆ ತಿರುಳು ಸೇರಿದ ಮತ್ತು ಸಕ್ಕರೆ ರಹಿತ ತಾಜಾ ಹಣ್ಣಿನ ರಸ ಹೆಚ್ಚು ಆರೋಗ್ಯಕರ. ಇತ್ತೀಚಿನ ಅಧ್ಯಯನಗಳ ಪ್ರಕಾರ ತಿಳಿದು ಬಂದಿರುವ ವಿಚಾರವೇನೆಂದರೆ ಒಂದು ಕೆಂಪು ಹಣ್ಣಿನ ರಸ ಏರು ರಕ್ತದೊತ್ತಡಕ್ಕೆ ರಾಮಬಾಣದಂತೆ ಕಾರ್ಯ ನಿರ್ವಹಿಸುವುದರ ಜೊತೆಗೆ ಅದನ್ನು ನಿವಾರಿಸಬಲ್ಲುದು. ಅದೇ ಕಲ್ಲಂಗಡಿ ಹಣ್ಣು.
ಕಲ್ಲಂಗಡಿ ಹಣ್ಣಿನಲ್ಲಿ ಎಲ್-ಸಿಟ್ರುಲಿನ್ ಎಂಬ ಅಂಶವು ಹೇರಳವಾಗಿದ್ದು ಇದು ರಕ್ತದೊತ್ತಡದ ವಿರುದ್ಧ ಪರಿಣಾಮಕಾರಿ ಕಾರ್ಯ ನಿರ್ವಹಿಸಬಲ್ಲದೆಂದು ಹೇಳಲಾಗಿದೆ. ಅದು ಹೇಗೆಂದರೆ, ಕಲ್ಲಂಗಡಿ ಹಣ್ಣಿನಲ್ಲಿ ಹೇರಳವಾಗಿರುವ ಎಲ್-ಸಿಟ್ರುಲಿನ್ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಅನಿಲವನ್ನು ಬಿಡುಗಡೆಯಾಗುವುದನ್ನು ಪ್ರಚೋದಿಸಿ ರಕ್ತನಾಳಗಳು ವಿಕಸಿಸುವಂತೆ ಮಾಡಿ ರಕ್ತದ ಸರಾಗ ಪರಿಚಲನೆಗೆ ಕಾರಣವಾಗುತ್ತದೆ. ಇದರೊಂದಿಗೆ, ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಹೆಚ್ಚಿನ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ. ಇದಲ್ಲದೇ, ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪೀನ್ ಎಂಬ ವಸ್ತುವೂ ಇದ್ದು ಇದು ಪುರುಷರ ಪ್ರಾಸ್ಟೇಟ್ ಗ್ರಂಥಿಯನ್ನು ಸ್ವಸ್ಥವಾಗಿರಿಸುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಇ, ಸಿ, ಮತ್ತು ಬಿ; ಪಾಲಿಫಿನಾಲ್ಗಳು, ಮತ್ತು ಬೀಟಾ ಕೆರೋಟೀನ್ಗಳು ಇದ್ದು ಆಂಟಿಆಕ್ಸಿಡೆಂಟ್ ಹಾಗೂ ಉರಿಯೂತವಿರೋಧಿ (anti-inflammatory) ಗಳಾಗಿವೆ.
ಸುಲಭವಾಗಿ ಸಿಗುವಂಥ ಹಾಗೂ ಮಾನವನ ಆರೋಗ್ಯಕ್ಕೆ ಹೆಚ್ಚು ಲಾಭಕಾರಿಯಾದ ಕಲ್ಲಂಗಡಿ ಹಣ್ಣಿನ ಸೂಕ್ತ ಸೇವನೆಯಿಂದ ನಮ್ಮ-ನಿಮ್ಮೆಲ್ಲರ ಆರೋಗ್ಯವನ್ನು ಸುಲಭವಾಗಿ ಉತ್ತಮಪಡಿಸಿಕೊಳ್ಳಬಹುದಲ್ಲವೇ?
Watermelon juice helps in treating high blood pressure
ಇದನ್ನೂ ಓದಿ: Skin Care: ಬಂತು ಚಳಿಗಾಲ: ಒಣ ಚರ್ಮ, ತುರಿಕೆ ಸಮಸ್ಯೆಗೆ ವಿಟಮಿನ್ ಸಿ ಪರಿಹಾರ
ಇದನ್ನೂ ಓದಿ: ಪರಿಸರ ಸ್ವಚ್ಚವಾಗಿದ್ದಾಗ ಉತ್ತಮ ಆರೋಗ್ಯ
Discussion about this post