ಚಿಕ್ಕಮಗಳೂರು : ರೈತರ ಬೆಳೆಗಳಿಗೆ ಬೆಲೆ ಖಾತ್ರಿ ಕಾಯ್ದೆ ಕಾನೂನು ಬದ್ದಗೊಳಿಸಬೇಕು, ಎಪಿಎಂಸಿ ಕಾಯ್ದೆ ಮತ್ತು ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ರದ್ದುಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶಾದ್ಯಂತ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಹೆದ್ದಾರಿ ತಡೆ ಪ್ರತಿಭಟನೆಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. ನಗರದ ಜಿಲ್ಲಾ ಪಂಚಾಯಿತಿ ಕಛೇರಿ ಎದುರು ನೂರಾರು ರೈತ ಕಾರ್ಯಕರ್ತರು ಜಮಾಯಿಸುವ ಮೂಲಕ ಚಿಕ್ಕಮಗಳೂರು-ಕಡೂರು ಹೆದ್ದಾರಿ ರಸ್ತೆ ತಡೆದು ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದುಗ್ಗಪ್ಪಗೌಡ ಮಾತನಾಡಿ ರೈತರಿಗೆ ಮಾರಣಾಂತಿಕವಾಗಿರುವ ಮೂರು ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ತರಾತುರಿಯಲ್ಲಿ ಜಾರಿಗೊಳಿಸಿತ್ತು. ಕರಾಳ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕಳೆದ ಒಂದು ವರ್ಷದಿಂದ ದೆಹಲಿಯ ಗಡಿ ಭಾಗದಲ್ಲಿ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದರು. ಇಂದಿಗೆ ೧ ವರ್ಷ ಪೂರೈಸಿದ್ದು ಹೋರಾಟದ ಫಲವಾಗಿ ಮಣಿದ ಸರ್ಕಾರ ಕಾಯ್ದೆಗಳನ್ನು ವಾಪಸ್ ಪಡೆಯಲು ನಿರ್ಧರಿಸಿದೆ ಇದು ಸ್ವಾಗತಾರ್ಹ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಇದಕ್ಕೆ ಅನುಗುಣವಾದ ಕಾನೂನು ಪ್ರಕ್ರಿಯೆ ಸಂಸತ್ತಿನಲ್ಲಿ ನಡೆಯಬೇಕಿದೆ. ಕಾಯ್ದೆಗಳನ್ನು ಸದನದಲ್ಲಿ ಮಂಡಿಸಿ ವಾಪಸ್ ಪಡೆಯುವವರೆಗೂ ಹೋರಾಟ ಮುಂದುವರಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ರೈತರ ಹೋರಾಟವನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಹಲವು ವಿಧವಾದ ತಂತ್ರಗಳನ್ನು ರೂಪಿಸಿತ್ತು. ರಸ್ತೆಗಳಿಗೆ ಬ್ಯಾರಿಕೇಡ್, ತಂತಿಬೇಲಿ ಹಾಕುವುದರ ಜತೆಗೆ ರೈತರ ಮೇಲೆ ಜಲಪಿರಂಗಿ ದಾಳಿ ನಡೆಸಿತ್ತು. ಕೆಂಪುಕೋಟೆಯ ಮೇಲೆ ಅನ್ಯ ಧ್ವಜವನ್ನು ಹಾರಿಸಿ ರೈತರನ್ನು ಉಗ್ರರಂತೆ ಬಿಂಬಿಸಿ, ದೇಶದ್ರೋಹ ಪಟ್ಟಕಟ್ಟಲು ಸಂಚು ರೂಪಿಸಿತ್ತು. ಇವೆಲ್ಲ ತಂತ್ರಗಳಿಗೆ ಜಗ್ಗದ ರೈತರು ಪ್ರಾಣದ ಹಂಗು ತೊರೆದು ನಿರಂತರವಾಗಿ ಹೋರಾಟ ಮುಂದುವರಿಸಿದ್ದರು ಹೋರಾಟದಲ್ಲಿ ಸುಮಾರು ೭೦೦ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದು ಮೃತ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು. ಜತೆಗೆ ರೈತರ ಹತ್ಯೆಗೆ ಕಾರಣವಾದ ಕೇಂದ್ರ ಸಚಿವರ ಪುತ್ರನನ್ನು ಬಂಧಿಸಿ ಕಾನೂನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಯಿಂದಾಗಿ ಸಣ್ಣ, ಹಿಡುವಳಿ ರೈತರು ಬೀದಿಪಾಲಾಗಲಿದ್ದು ಕಾರ್ಪೋರೇಟ್ ಉದ್ಯಮಿಗಳ ಪರವಾಗಿ ಸರ್ಕಾರ ಆಡಳಿತ ನಡೆಸುತ್ತಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲವಾಗಲಿದ್ದು ಕಠೋರ ಕಾಯ್ದೆಗಳು ಏಕಸ್ವಾಮ್ಯ ಮಾರುಕಟ್ಟೆಗೆ ದಾರಿಯಾಗಲಿದೆ. ರಾಜ್ಯದಲ್ಲಿ ಈಗಾಗಲೇ ಜಾರಿಗೊಳಿಸಿರುವ ಎಪಿಎಂಸಿ ತಿದ್ದಪಡಿ ಕಾಯ್ದೆ, ಭೂಸುಧಾರಣಾ ಕಾಯ್ದೆ ಹಾಗೂ ಜಾನುವಾರು ರಕ್ಷಣಾ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿದ್ಯುತ್ ಮಸೂದೆಗೆ ತಿದ್ದುಪಡಿ ಮಾಡಿ ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸಲು ಮುಂದಾಗಿವೆ. ಈ ಆಲೋಚನೆಯನ್ನು ಸರ್ಕಾರ ಮೊದಲು ಕೈಬಿಡಬೇಕು, ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಕಾನೂನುಬದ್ದಗೊಳಿಸಬೇಕು, ದೇಶಾದ್ಯಂತ ಹೋರಾಟದಲ್ಲಿ ಭಾಗವಹಿಸಿದ ಹೋರಾಟಗಾರರ ಮೇಲೆ ಹಾಕಲಾಗಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು. ಉತ್ತರ ಪ್ರದೇಶದ ಲಖೀಂಪುರದಲ್ಲಿ ರೈತರ ಮೇಲೆ ಜೀಪು ಹರಿಸಿದ ಆರೋಪಿಯ ತಂದೆಯನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಕಾರ್ಪೋರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿವೆ. ರೈತರು, ಕಾರ್ಮಿಕರಿಗೆ ಮಾರಕವಾಗಿರುವ ಎಲ್ಲಾ ಕಾಯ್ದೆಗಳನ್ನು ರದ್ದುಗೊಳಿಸಬೇಕು, ಸ್ವಾಮಿನಾಥನ್ ವರದಿ ಜಾರಿಗೊಳಿಸುವ ಮೂಲಕ ರೈತರ ಹಿತ ಕಾಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷ ತುಳಸೇಗೌಡ, ಕಡೂರು ಅಧ್ಯಕ್ಷ ನಿರಂಜನಮೂರ್ತಿ, ಮೂಡಿಗೆರೆ ಅಧ್ಯಕ್ಷ ವಸಂತ್ಹೆಗ್ಡೆ, ಉದ್ದೇಗೌಡ, ತರೀಕೆರೆ ತಾಲ್ಲೂಕು ಅಧ್ಯಕ್ಷ ಓಂಕಾರಪ್ಪ, ಜಿಲ್ಲಾ ಕಾರ್ಯದರ್ಶಿ ದಯಾಕರ್, ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ:
Highway road : ನ.೨೬ಕ್ಕೆ ರೈತ ಸಂಘದಿಂದ ಹೆದ್ದಾರಿ ತಡೆ ಚಳುವಳಿ
Discussion about this post