ಶ್ರೀಲಂಕಾ ಮಾಜಿ ವಿಶ್ವಸುಂದರಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತೆ ಮತ್ತೆ ಸುದ್ದಿಯಾಗುತ್ತಿದ್ದಾರೆ. ವಾಣಿಜ್ಯೋದ್ಯಮಿಯೊಬ್ಬರನ್ನು ಬೆದರಿಸಿ 200 ಕೋಟಿ ವಸೂಲಿ ಮಾಡಿದ ಆರೋಪ ಎದುರಿಸುತ್ತಿರುವ ಶ್ರೀನಿವಾಸ್ ಅವರ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ಕೇಳಿಬಂದಿತ್ತು. ಹೀಗಾಗಿ, ಭಾನುವಾರ, ದುಬೈಗೆ ಹೊರಡಲು ಬಂದಿದ್ದ ಜಾಕ್ವೆಲಿನ್ ಅವರನ್ನು ಮುಂಬಯಿ ಪೊಲೀಸರು ತಡೆದು ವಾಪಸ್ ಕಳುಹಿಸಿದ್ದಾರೆ. ಪ್ರಕರಣ ಇತ್ಯರ್ಥವಾಗುವ ತನಕ ಯಾವುದೇ ಕಾರಣಕ್ಕೂ ದೇಶ ಬಿಟ್ಟು ಹೋಗಬಾರದು ಅಂತ ಜಾರಿ ನಿರ್ದೇಶನಾಲಯ ನಿರ್ದೇಶಿಸಿದ್ದರೂ, ಜಾಕ್ವೆಲಿನ್ ಸೂಟ್ ಕೇಸ್ ಹಿಡಿದು ಮುಂಬಯಿ ವಿಮಾನ ನಿಲ್ದಾಣಕ್ಕೆ ಭಾನುವಾರ ಆಗಮಿಸಿದ್ದರು. ಅಧಿಕಾರಿಗಳು ಫರ್ನಾಂಡೀಸ್ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿ, ದೆಹಲಿಯ ಜಾರಿ ನಿರ್ದೇಶನಾಲಯಕ್ಕೆ ಹಾಜರಾಗುವಂತೆ ತಾಕೀತು ಮಾಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೋಮವಾರ ನೋಟೀಸ್ ಜಾರಿಯಾಗುವ ಸಾಧ್ಯತೆ ಇದೆ. ವಾಣಿಜ್ಯೋದ್ಯಮಿಯೊಬ್ಬರ ಹೆಂಡತಿಯಿಂದ 200 ಕೋಟಿ ವಸೂಲಿ ಮಾಡಿ, ಅದನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದ ಮೇಲೆ ಶ್ರೀನಿವಾಸ್ ಅವರ ತಂಡವನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಫರ್ನಾಂಡೀಸ್ ನೇರ ಪಾತ್ರ ಇಲ್ಲದೇ ಇದ್ದರೂ ಶ್ರೀನಿವಾಸ್, ಫರ್ನಾಂಡೀಸ್ ನಡುವೆ ಕುಚುಕುಚು ನಡೆಯುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ಇದರ ಜೊತೆಗೆ ಫರ್ನಾಂಡೀಸ್ ಗೆ ಶ್ರೀನಿವಾಸ್ ಅವರಿಂದ 52 ಲಕ್ಷದ ದುಬಾರಿ ದುಬೈ ಕುದುರೆ ಹಾಗೂ 9 ಲಕ್ಷ ರೂ. ಬೆಲೆ ಬಾಳುವ ಪರ್ಷಿಯನ್ ಬೆಕ್ಕನ್ನು ಉಡುಗೊರೆಯಾಗಿ ನೀಡಿರುವ ಬಗ್ಗೆ ದಾಖಲೆ ದೊರೆತಿವೆ. ಈ ಹಿನ್ನೆಲೆಯಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ವಿಚಾರಣೆ ಎದುರಿಸುತ್ತಿರುವುದರಿಂದ ದೇಶ ಬಿಟ್ಟು ಹೊರಡಬೇಕಾದರೆ ಜಾರಿ ನಿರ್ದೇಶನಾಲಯದ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳಿತ್ತು.
ಜಾಕ್ವೆಲಿನ್ ಜೊತೆಗೆ ಚಾರ್ಜ್ ಶೀಟ್ನಲ್ಲಿ ಬಾಲಿವುಡ್ ನಟಿ ನೋರ ಫಿತೇಹಿ ಅವರ ಹೆಸರು ನಮೂದಾಗಿದೆ. ಈ ಹಿಂದೆ ಆರೋಪಿ ಶ್ರೀನಿವಾಸ್, ಫಿತೇಹಿ ಅವರಿಗೆ ಕಾರೊಂದನ್ನು ಉಡುಗೊರೆ ಕೊಟ್ಟಿರುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.
ಜಾರಿ ನಿರ್ದೇಶನಾಲಯದ ಮುಂದೆ ಹೇಳಿಕೆ ನೀಡಿರುವ ಫೀತೇಹಿ ಪರ ಪ್ರತಿನಿಧಿ, ಆಕೆ ಈ ಷಡ್ಯಂತರದಲ್ಲಿ ಬಲಿಪಶುವಾಗಿದ್ದಾಳೆ. ಜಾರಿ ನಿರ್ದೇಶನ ದಾಖಲಿಸಿರುವ ಪ್ರಕರಣಕ್ಕೂ ಆಕೆಗೂ ಯಾವ ಸಂಬಂಧವೂ ಇಲ್ಲ. ಆಕೆಗೆ, ಈ ಬಗ್ಗೆ ಏನೂ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಭಾಷೆಯ ಸಮರ್ಪಕ ಬಳಕೆಯನ್ನು ಉತ್ತೇಜಿಸಲು ಕೈಜೋಡಿಸಿದ ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆ (CIIL) ಮತ್ತು ಕೂ ಆ್ಯಪ್
Discussion about this post