ಹೈದರಾಬಾದ್: ತಮ್ಮ ವಿರುದ್ಧ ಸುಳ್ಳು ಸುದ್ದಿ ಹಾಗೂ ಕಪೋಲಕಲ್ಪಿತ ವರದಿಗಳನ್ನು ಪ್ರಕಟಿಸಿದ ಯೂಟ್ಯೂಬ್ ಚಾನೆಲ್ಗಳ ವಿರುದ್ಧ ನಟಿ ಸಮಂತಾ ರುಥ್ ಪ್ರಭು ದಾಖಲಿಸಿರುವ ಮಾನನಷ್ಟ ಪ್ರಕರಣಗಳ ತ್ವರಿತಗತಿಯ ವಿಚಾರಣೆಗೆ ಮಾಡಿರುವ ಮನವಿಯನ್ನು ಹೈದರಾಬಾದ್ನ ನ್ಯಾಯಾಲಯ ತಿರಸ್ಕರಿಸಿದೆ.
ತಮಗೆ ವಿವಾಹೇತರ ಸಂಬಂಧವಿತ್ತು, ಗರ್ಭಪಾತ ಮಾಡಿಸಿಕೊಂಡಿದ್ದೆ ಎಂದೆಲ್ಲ ಕೆಲವು ವಾಹಿನಿಗಳು ಸುಳ್ಳು ಸುದ್ದಿ ಪ್ರಕಟಿಸಿವೆ ಎಂದು ಸಮಂತಾ ಆರೋಪಿಸಿದ್ದರು. ಪ್ರಕರಣದ ತುರ್ತು ವಿಚಾರಣೆ ನಡೆಸಬೇಕು ಎಂದು ಸಮಂತಾ ಪರ ವಕೀಲರು ಮನವಿ ಮಾಡಿದ್ದರು. ಆದರೆ, ಕಾನೂನು ಎಲ್ಲರಿಗೂ ಒಂದೇ. ತ್ವರಿತ ವಿಚಾರಣೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ನಾಗಚೈತನ್ಯರಿಂದ ವಿವಾಹ ವಿಚ್ಛೇದನ ಪಡೆದಿರುವುದಾಗಿ ಸಮಂತಾ ಅಧಿಕೃತವಾಗಿ ಘೋಷಿಸಿದ ಬೆನ್ನಲ್ಲೇ ಅವರ ವಿರುದ್ಧ ಅನೇಕ ವದಂತಿಗಳು ಹರಡಿದ್ದವು.
ಓದಿ: ಎಲ್ಲೆಮೀರಿ ವರ್ತಿಸಿದ ಯು-ಟ್ಯೂಬ್ ಚಾನಲ್ಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಸಮಂತಾ
ಈ ಕುರಿತು ಸಮಂತಾ ಅವರು ಹೈದರಾಬಾದ್ನ ಕೂಕಟ್ಪಳ್ಳಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
‘ನನಗೆ ಬೇರೆ ಸಂಬಂಧವಿತ್ತು, ಮಕ್ಕಳಾಗುವುದು ಬೇಕಿರಲಿಲ್ಲ, ಅವಕಾಶವಾದಿ, ಗರ್ಭಪಾತ ಮಾಡಿಸಿಕೊಂಡಿದ್ದೆ ಎಂದೆಲ್ಲಾ ನನ್ನ ವಿರುದ್ಧ ಆರೋಪ ಮಾಡಿದ್ದರು. ವಿಚ್ಛೇದನದ ನೋವೇ ದೀರ್ಘವಾದದ್ದು. ಅದರಿಂದ ಹೊರಬರಲು ನನಗೆ ಸಮಯವಕಾಶ ನೀಡಿ. ಇಂಥ ಆರೋಪಗಳನ್ನು ಮಾಡುವ ಮೂಲಕ ನನ್ನ ಮನಸ್ಸನ್ನು ಘಾಸಿಗೊಳಿಸಲು ಯತ್ನಿಸಲಾಗುತ್ತಿದೆ. ಆದರೆ ಇವುಗಳಿಗೆಲ್ಲ ನಾನು ಅವಕಾಶ ಕೊಡುವುದಿಲ್ಲ’ ಎಂದು ಇನ್ಸ್ಟಾಗ್ರಾಂ ಸಂದೇಶದಲ್ಲಿ ಇತ್ತೀಚೆಗೆ ಸಮಂತಾ ಉಲ್ಲೇಖಿಸಿದ್ದರು.
Discussion about this post