ಕೊಲೊಂಬೋ: ಭಾರತ ಹಾಗೂ ಶ್ರಿಲಂಕಾ ಸೇನೆಗಳ 12 ದಿನಗಳ ಸಮರಾಭ್ಯಾಸ ಪ್ರಾರಂಭವಾಗಿದ್ದು ಭಯೋತ್ಪಾದನೆ ನಿಗ್ರಹ ಇದರ ಮುಖ್ಯ ಉದ್ದೇಶವಾಗಿದೆ. ಇದರಲ್ಲಿ ಭಾರತದ 120 ಯೋಧರು ಭಾಗವಹಿಸಿದ್ದು ಅನ್ಯದೇಶಗಳಿಂದ ಎದುರಾಗುವ ಭಯೋತ್ಪಾದಕ ಸವಾಲುಗಳು ಹಾಗೂ ಅವುಗಳನ್ನೆದುರಿಸಲು ಬೇಕಿರುವ ಕೌಶಲಗಳನ್ನು ವೃದ್ಧಿಸಿಕೊಳ್ಳಲು ಹೆಚ್ಚಿನ ಒತ್ತು ನೀಡಲಾಗಿದೆ.
ಶ್ರೀಲಂಕಾ ದ್ವೀಪರಾಷ್ಟ್ರದ ಪೂರ್ವಜಿಲ್ಲೆ ಅಂಪಾರದ ಸೈನಿಕ ತರಬೇತಿ ಶಾಲೆಯಲ್ಲಿ ನಡೆಯುತ್ತಿರುವ ಈ ಸಮರಾಭ್ಯಾಸವು ಅಕ್ಟೋಬರ್ 4 ರಿಂದ 15ರ ವರೆಗೆ ನಡೆಯಲಿದ್ದು ಇದಕ್ಕೆ “ಮಿತ್ರಶಕ್ತಿ” ಎಂದು ಹೆಸರಿಡಲಾಗಿದೆ. ಈ ಸಮರಾಭ್ಯಾಸದಲ್ಲಿ ಭಾರತೀಯ ಸೇನೆಯ ಎಲ್ಲಾ ವಿಭಾಗಗಳಿಂದ ಆಯ್ದ 120 ಸೈನಿಕರ ತಂಡವು ಭಾಗವಹಿಸುತ್ತಿದ್ದು ಕರ್ನಲ್ ಪ್ರಕಾಶ ಕುಮಾರ್ರವರು ಇದರ ನಾಯಕತ್ವ ವಹಿಸಿದ್ದಾರೆಂದು ಶ್ರೀಲಂಕಾ ಸೇನೆ ತಿಳಿಸಿದೆ.
ಈ ಜಂಟಿ ಸಮರಾಭ್ಯಾಸವನ್ನು ಅನ್ಯದೇಶಗಳಿಂದ ಬರಬಹುದಾದ ಭಯೋತ್ಪಾದನೆ, ಜಂಟಿ ಕಾರ್ಯಾಚರಣೆಯ ಕೌಶಲ್ಯಗಳ ಆಭಿವೃದ್ಧಿ ಹಾಗೂ ಪರಸ್ಪರರ ಅನುಭವಗಳು ಮತ್ತು ಉತ್ತಮ ಅಭ್ಯಾಸಗಳನ್ನು ಸೂಕ್ಷ್ಮವಾಗಿ ಅರಿಯಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸಮರಾಭ್ಯಾಸಕ್ಕಾಗಿ ನಿಯುಕ್ತಿಗೊಂಡಿರುವ ಭಾರತೀಯ ತಂಡವು ಭಾರತೀಯ ವಾಯುಪಡೆ ವಿಮಾನದಲ್ಲಿ ಈಗಾಗಲೇ ಆಂಪಾರಾ ತಲುಪಿದೆ ಎಂದೂ ಶ್ರೀಲಂಕಾ ಸೇನೆಯ ವಕ್ತಾರರು ತಿಳಿಸಿದ್ದಾರೆ.
ಎಂಟನೇ ಆವೃತ್ತಿಯ ವಾರ್ಷಿಕ ತರಬೇತಿಯ ಕಾರ್ಯಕ್ರಮವಿದಾಗಿದ್ದು ದ್ವಿಪಕ್ಷೀಯ ಸೈನಿಕ ಸಹಕಾರವನ್ನು ಬಲಪಡಿಸಿ ಪರಸ್ಪರರಲ್ಲಿ ಉತ್ತಮ ಸಂಬಂಧ ಹಾಗೂ ಸಮನ್ವಯತೆಯನ್ನು ಸಾಧಿಸಲು ಸಹಕಾರಿಯಾಗಿದೆ.
ಎರಡೂ ಸೈನ್ಯಗಳ ನಡುವಿನ ಸ್ನೇಹ-ಸಂಬಂಧಗಳ ಅಭಿವೃದ್ಧಿ ಮತ್ತು ಸಹಕಾರ್ಯಾಚರಣೆಗಳ ನಿರ್ವಹಣೆಯ ಸಂದರ್ಭದಲ್ಲಿ ಉತ್ತಮ ಸಮನ್ವಯತೆಯನ್ನು ಸಾಧಿಸುವುದೇ ಈ ಸಮರಾಭ್ಯಾಸದ ಉದ್ದೇಶ ಎಂದು ಭಾರತದ ರಕ್ಷಣಾ ಸಚಿವಾಲಯ ಕಳೆದ ವಾರ ತಿಳಿಸಿತ್ತು. ಇದರ ಏಳನೇ ಆವೃತ್ತಿಯು 2019ರಲ್ಲಿ ಪೂನಾದಲ್ಲಿ ನಡೆದಿತ್ತು.
2019ರ ಏಪ್ರಿಲ್ನಲ್ಲಿ ಶ್ರೀಲಂಕಾ ಸರಣಿ ಬಾಂಬ್ ಸ್ಫೋಟಗಳಿಂದ ಜರ್ಝರಿತವಾಗಿದ್ದು 300ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಹಾಗೂ ಶ್ರೀಲಂಕಾ ದೇಶಗಳು ಭಯೋತ್ಪಾದನೆ ವಿರುದ್ಧದ ಸಹಕಾರ-ಸಹಭಾಗಿತ್ವಗಳನ್ನು ಹೆಚ್ಚಿಸಿಕೊಂಡಿದ್ದವು.
International India Srilanka Joint Military Exercises begin in Ampara
ಇದನ್ನೂ ಓದಿ: ಅಫ್ಘಾನಿಸ್ತಾನ ಕಾರ್ಯತಂತ್ರ ವೈಫಲ್ಯ: ಒಪ್ಪಿದ ಅಮೆರಿಕ ಸೇನೆ
ಇದನ್ನೂ ಓದಿ: ಏರ್ ಲಿಫ್ಟ್ ನಿಂದ ಭಾರತೀಯರ ಸುಖಾಗಮನ:ಭಾರತೀಯ ವಾಯುಸೇನೆ ಶ್ಲಾಘನೆ
Discussion about this post